ವಶಿಷ್ಠ ಸಹಕಾರಿ ಬ್ಯಾಂಕ್ ಬಿಜೆಪಿಯ ಐಎಂಎ ಹಗರಣ, ರವಿಸುಬ್ರಹ್ಮಣ್ಯ ನೇರ ಚಿತಾವಣೆ: ಆಪ್
ಬೆಂಗಳೂರು, ಜೂನ್ 29: "ಬಸವನಗುಡಿಯ ವಶಿಷ್ಠ ಸಹಕಾರ ಬ್ಯಾಂಕ್ ಕಳೆದ 8 ತಿಂಗಳುಗಳಿಂದ ಠೇವಣಿದಾರರಿಗೆ ಬಡ್ಡಿ ಹಣ ಹಾಗೂ ಡಿವಿಡೆಂಡ್ಗಳನ್ನು ನೀಡದೇ ಗ್ರಾಹಕರನ್ನು ಅಲೆದಾಡಿಸುತ್ತಿದ್ದಾರೆ. 24 ವರ್ಷ ಹಳೆಯ ವಶಿಷ್ಠ ಸಹಕಾರಿ ಬ್ಯಾಂಕ್ ಸಂಪೂರ್ಣ ಮುಳುಗುವ ಹಂತದಲ್ಲಿದ್ದು, ಆಡಳಿತ ಮಂಡಳಿಯ ನಿರ್ದೇಶಕರ ಅಕ್ರಮ ಚಟುವಟಿಕೆಗಳೇ ಕಾರಣವಾಗಿದ್ದು, ಸ್ಥಳೀಯ ಬಸವನಗುಡಿ ಬಿಜೆಪಿ ಶಾಸಕ ರವಿಸುಬ್ರಹ್ಮಣ್ಯ ನೇರ ಚಿತಾವಣೆ ಇದೆ,'' ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಆರೋಪಿಸಿದರು.
ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ದರ್ಶನ್ ಜೈನ್, "ಸಾವಿರಾರು ಹಿರಿಯ ನಾಗರಿಕರು ನಿವೃತ್ತಿ ನಂತರದ ಹಣವನ್ನು ತಮ್ಮ ಮಕ್ಕಳ ಮದುವೆ, ವಿದ್ಯಾಭ್ಯಾಸ ಇನ್ನಿತರ ಕಾರಣಗಳಿಗಾಗಿ ಠೇವಣಿ ಇಟ್ಟರೆ, ಬ್ಯಾಂಕಿನ ಆಡಳಿತ ಮಂಡಳಿಯ ಪ್ರಮುಖ ನಿರ್ದೇಶಕ ಕೆ.ಎನ್. ವೆಂಕಟನಾರಾಯಣ ಸ್ವಜನ ಪಕ್ಷಪಾತ, ಅಧಿಕಾರ ದುರ್ಬಳಕೆ ಮಾಡಿಕೊಂಡು ತಮ್ಮ ತಮ್ಮವರಿಗೆ ಕೋಟ್ಯಂತರ ರೂಪಾಯಿಗಳ ಸಾಲವನ್ನು ನೀಡಿ, ವಸೂಲಿ ಮಾಡದೆ ಠೇವಣಿದಾರರಿಗೆ ಮೋಸ ಮಾಡುತ್ತಿದ್ದಾರೆ.''
"ಕೆ.ಎನ್. ವೆಂಕಟನಾರಾಯಣ ಅಕ್ರಮಗಳ ಹಿಂದೆ ಸ್ಥಳೀಯ ಬಸವನಗುಡಿ ಶಾಸಕ ರವಿಸುಬ್ರಹ್ಮಣ್ಯ ಬೆಂಬಲ ಪ್ರಮುಖ ಕಾರಣ. ಶಾಸಕರು ತಮ್ಮ ಕ್ಷೇತ್ರದ ಠೇವಣಿದಾರರ ಹಿತವನ್ನು ಕಾಯದೆ ಬ್ಯಾಂಕಿನ ಪರ ಧೋರಣೆಯನ್ನು ಹೊಂದಿರುವುದು ನಿಜಕ್ಕೂ ದುರದೃಷ್ಟಕರ. ಇದು ಬಿಜೆಪಿಗರ ಮತ್ತೊಂದು ಐಎಂಎ ಹಗರಣ,'' ಎಂದು ದರ್ಶನ್ ಜೈನ್ ಆರೋಪಿಸಿದರು.
"ಹಿಂದೆ ಗುರು ಸಾರ್ವಭೌಮ ಸಹಕಾರಿ ಬ್ಯಾಂಕ್ನಲ್ಲೂ ಸಹ ಇದೇ ರೀತಿಯ ಸಾವಿರಾರು ಕೋಟಿ ರೂ.ಗಳ ಹಗರಣದಲ್ಲಿಯೂ ಸಹ ಶಾಸಕರ ಹಸ್ತಕ್ಷೇಪದ ಆರೋಪ ಕೇಳಿಬಂದಿತ್ತು. ಇವರ ಯಾವುದೇ ವಿಚಾರಣೆಯೂ ಇದುವರೆಗೂ ಸಹ ಆಗಿಲ್ಲ. ಈ ಪ್ರಕರಣದಲ್ಲಿ ಠೇವಣಿದಾರರಿಗೆ ಇದುವರೆಗೂ ನಯಾ ಪೈಸೆಯೂ ಬಂದಿಲ್ಲ. ಇದಕ್ಕೆಲ್ಲಾ ಬಿಜೆಪಿ ನಾಯಕರ ಕುಮ್ಮಕ್ಕೇ ಕಾರಣ,'' ಎಂದರು.
"ಠೇವಣಿದಾರರ ಹಣವನ್ನು ಬ್ಯಾಂಕಿನ ನಿರ್ದೇಶಕ ಕೆ.ಎನ್. ವೆಂಕಟನಾರಾಯಣ ರಿಯಲ್ ಎಸ್ಟೇಟ್, ಷೇರು ಮಾರುಕಟ್ಟೆ, ಚಲನಚಿತ್ರ ರಂಗ ಇನ್ನಿತರ ಕ್ಷೇತ್ರಗಳಲ್ಲಿ ಲಾಭ ಮಾಡುವ ದುರುದ್ದೇಶದಿಂದ ತೊಡಗಿಸಿಕೊಂಡಿರುವುದೇ ಈ ಅನಾಹುತಕ್ಕೆ ಪ್ರಮುಖ ಕಾರಣ. ಈ ಅಕ್ರಮಗಳ ಹಿಂದಿರುವ ಶಾಸಕರು ಹಾಗೂ ಪ್ರಭಾವಿಗಳ ವಿರುದ್ಧ ತನಿಖೆಯನ್ನು ಕೇವಲ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸುವ ಮೂಲಕ ತಿಪ್ಪೆ ಸಾರಿಸುವ ಕೆಲಸ ಆಗುತ್ತಿದೆ.''
Recommended Video
"ಈ ಕೂಡಲೇ ಪ್ರಭಾವಿಗಳ ವಿರುದ್ಧ ಸಮಗ್ರ ನ್ಯಾಯಾಂಗ ತನಿಖೆ ಆಗಲೇಬೇಕಿದೆ ಎಂದು ಆಪ್ ಪಕ್ಷದ ಮುಖ್ಯ ವಕ್ತಾರ ಶರತ್ ಖಾದ್ರಿ ತಿಳಿಸಿದರು. ಈ ಅಕ್ರಮಗಳ ಹಿಂದೆ ಸಹಕಾರ ಇಲಾಖೆಯ ಅಧಿಕಾರಿಗಳ ಪಾತ್ರವನ್ನು ಸಹ ತನಿಖೆಗೊಳಪಡಿಸಿ ಠೇವಣಿದಾರರಿಗೆ ಸರ್ಕಾರವು ನ್ಯಾಯ ದೊರಕಿಸಿಕೊಡಬೇಕೆಂದು,'' ಆಗ್ರಹಿಸಿದರು.