ವರಮಹಾಲಕ್ಷ್ಮಿಹಬ್ಬ: ಕೆಆರ್ ಮಾರ್ಕೆಟ್ನಲ್ಲಿ ಹೂ, ಹಣ್ಣು ಬೆಲೆ ಕೇಳಿ ಶಾಕ್ ಆದ ಬಿಬಿಎಂಪಿ ಕಮೀಷನರ್!
ಬೆಂಗಳೂರು, ಆಗಸ್ಟ್ 04: ಸಿಲಿಕಾನ್ ಸಿಟಿಯಲ್ಲಿ ಮಳೆಯ ಅಬ್ಬರದ ನಡುವೆಯು ವರಮಹಾಲಕ್ಷ್ಮಿ ಹಬ್ಬ ಸಂಭ್ರಮ ಕಳೆಗಟ್ಟಿದೆ. ಕೆಆರ್ ಮಾರುಕಟ್ಟೆಯಲ್ಲಿ ಜನಜಂಗುಳಿ ನೆರೆದು ಪೂಜಾ ಸಾಮಗ್ರಿ, ಹಣ್ಣು ಹಂಪಲು, ಬಾಳೆದಿಂಡು, ಮಾವಿನಸೊಪ್ಪು ಸೇರಿ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಈ ವೇಳೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೆಆರ್ ಮಾರುಕಟ್ಟೆಗೆ ದಿಢೀರ್ ಭೇಟಿಯನ್ನು ನೀಡಿದ್ದಾರೆ. ಈ ವೇಳೆ ಹೂ ಹಣ್ಣು ಇತರೆ ವಸ್ತುಗಳ ಬೆಲೆಯನ್ನು ಕೇಳಿ ಶಾಕ್ ಆಗಿದ್ದಾರೆ.
ಕೆ. ಆರ್.ಮಾರುಕಟ್ಟೆಗೆ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಮಹಾಲಕ್ಷ್ಮಿ ಹಬ್ಬದ ಹಿನ್ನಲೆಯಲ್ಲಿ ಹಠಾತ್ ಭೇಟಿ ಪರಿಶೀಲನೆ ನಡೆಸಿದರು, ಸಾರ್ವಜನಿಕರು/ವ್ಯಾಪಾರಸ್ಥರು ಸುಸೂತ್ರವಾಗಿ ವ್ಯಾಪಾರ ನಡೆಸಲು ಅನುಕೂಲವಾಗುವಂತೆ ಆಗಿದ್ದಾಂಗೆ ಉತ್ಪತ್ತಿ ಆಗುವ ಕಸವನ್ನು ವಿಲೇ ಮಾಡಲು ತಿಳಿಸಿದ್ದಲ್ಲದೇ, ಹೆಚ್ಚು ಉತ್ಪತ್ತಿ ಆಗುವ ತ್ಯಾಜ್ಯವನ್ನು ಒಂದೆಡೆ ಹಾಕಲು ವ್ಯಾಪಾರಸ್ಥರು ಹಾಗೂ ಮಾರಾಟಗಾರರಿಗೆ ಸೂಚನೆ ನೀಡಿದ್ದಾರೆ.
ಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಸಾಕಷ್ಟು ಮಂದಿ ಕೆ.ಆರ್.ಮಾರುಕಟ್ಟೆಗೆ ಭೇಟಿ ನೀಡಿದ್ದರು. ಮಾರುಕಟ್ಟೆಗೂ ಹೂ, ಬಾಳೆ ದಿಂಡು ಸಾಕಷ್ಟು ಪ್ರಮಾಣದಲ್ಲಿ ಬಂದಿದ್ದು, ಅದರಿಂದ ಉತ್ಪತ್ತಿ ಆಗುವ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದೆ ಒಂದೇ ಸ್ಥಳದಲ್ಲಿ ಹಾಕಬೇಕು. ಆ ತ್ಯಾಜ್ಯವನ್ನು ಘನತ್ಯಾಜ್ಯ ವಿಭಾಗದ ಕಾಂಪ್ಯಾಕ್ಟರ್ ಮೂಲಕ ಪಾಲಿಕೆ ಘನತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಕೊಂಡೊಯ್ಯಲಾಗುತ್ತದೆ. ಆದ್ದರಿಂದ ಮಾರಾಟಗಾರು ಹಸಿ ಹಾಗೂ ಒಣ ತ್ಯಾಜ್ಯವನ್ನು ಬೇರ್ಪಡಿಸಿ ಕೊಡಬೇಕೆಂದು ಮಾರಾಟಗಾರರಿಗೆ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆಯನ್ನು ನೀಡಿದ್ದಾರೆ. ಇನ್ನು ವರಮಹಾಲಕ್ಷ್ಮಿ ಹಬ್ಬಕ್ಕೆ ಇಂದು (ಆಗಸ್ಟ್ 04) ನಾಳೆ ಆಗಸ್ಟ್ (05)ರಂದು ಬೆಲೆ ಎಷ್ಟಿದೆ ಗೊತ್ತ? ವಿವರ ಇಲ್ಲಿದೆ.

ಕಳೆದ ವರ್ಷಕ್ಕಿಂತ ಈ ಬಾರಿ ಶೇ.20 ರಿಂದ 30 ರಷ್ಟು ಬೆಲೆ ಏರಿಕೆ
ಸೇವಂತಿಗೆ - ಕೆ.ಜಿ.320 ರೂ
ಮಲ್ಲಿಗೆ ಹಾರ - 1000 ರೂಪಾಯಿ
ಗುಲಾಬಿ ಹೂ - ಕೆ.ಜಿ.320-350 ರೂ
ಮಲ್ಲಿಗೆ - ಕೆ.ಜಿ.350 ರೂ
ಕಮಲ ಹೂ ಜೋಡಿ - 80 - 100 ರೂ.
ಮಲ್ಲೆ ಹೂವು - ಕೆ.ಜಿ. 320 ರೂ ಆಗಿದೆ.

ಬೆಲೆಯನ್ನು ಕೇಳಿದರೇ ಮಿಶ್ರಹಣ್ಣಿಗಳ ಖರೀದಿ ಬೆಸ್ಟ್
ಬಾಳೆ ಹಣ್ಣು ಕೆ.ಜಿ.ಗೆ - 120-150 ರೂ
ಸೀತಾಫಲ ಕೆ.ಜಿ.ಗೆ - 200 ರೂಪಾಯಿ
ಆ್ಯಪಲ್ ಕೆ.ಜಿ.ಗೆ 320-460 ರೂಪಾಯಿ
ಮೂಸಂಬಿ ಕೆ.ಜಿಗೆ - 130-150 ರೂಪಾಯಿ
ದಾಳಿಂಬೆ ಕೆ.ಜಿ.ಗೆ 320 ರೂಪಾಯಿ
ದ್ರಾಕ್ಷಿ ಕೆ.ಜಿ.ಗೆ 400 ರೂಪಾಯಿ
ಎಲೆ ಅಡಿಕೆ - 1 ಕಟ್ಟಿಗೆ 100 ರೂಪಾಯಿ
ಅನಾನಸ್ 1ಕ್ಕೆ 80-100 ರೂಪಾಯಿ
ಹಣ್ಣು ಸೇರಿದಂತೆ ಪ್ರತಿಯೊಂದರ ಬೆಲೆಯು ಏರಿಕೆಯಾಗಿದೆ. ಹಣ್ಣುಗಳ ಬೆಲೆಯನ್ನು ಕೇಳುವ ಜನರು ಎಲ್ಲ ಹಣ್ಣುಗಳ ಮಿಶ್ರಣವನ್ನು ಒಟ್ಟಿಗೆ ಖರೀದಿಸುತ್ತಿದ್ದಾರೆ.

ಕೋವಿಡ್ ಬಳಿಕ ಅದ್ದೂರಿ ಆಚರಣೆ
ಈ ಬಾರಿ ಹೂವು ಹಣ್ಣಿಗೆ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಬೆಲೆ ಕೂಡಾ ಹೆಚ್ಚಳವಾಗಿದೆ. ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಲ್ಲಿ ವರಮಹಾಲಕ್ಷ್ಮಿ ಹಬ್ಬವಬ್ಬ ಅದ್ದೂರಿಯಾಗಿ ಆಚರಣೆ ಮಾಡಿರಲಿಲ್ಲ. ಆದರೆ ಕೊರೊನಾ ಬಳಿಕ ಮೊದಲ ಮಹಾಲಕ್ಷ್ಮಿ ಹಬ್ಬ ಇದಾಗಿದೆ.ಹೀಗಾಗಿ ವರ್ಷಕ್ಕೊಮ್ಮೆ ಬರುವ ಹಬ್ಬವನ್ನ ಅದ್ದೂರಿಯಾಗಿ , ಸಾಂಪ್ರದಾಯಿಕವಾಗಿ ಆಚರಣೆ ಮಾಡಬೇಕು ಎಂದು ಜನರು ಸಿದ್ದತೆ ಮಾಡಿಕೊಳ್ತಾಯಿದ್ದಾರೆ. ಬೆಲೆ ಏರಿಕೆ ನಡುವೆಯೂ ಹಬ್ಬದ ಪದ್ದತಿಯನ್ನು ಮುಂದುವರೆಸಬೇಕೆಂದು ನಿರ್ಧರಿಸಿದ್ದಾರೆ. "ಕಳೆದ ವರ್ಷಕ್ಕೆ ಹೋಲಿಕೆಯನ್ನು ಮಾಡಿದರೇ ಈ ವರ್ಷ ವ್ಯಾಪಾರ ಚನ್ನಾಗಿ ನಡೆಯುತ್ತಿದೆ. ಆದರೆ ಬೆಲೆ ಹೆಚ್ಚಾಗಿರುವುದರಿಂದ ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ" ಎನ್ನುತ್ತಾರೆ ಮಾದೇಶ್ ಎಂಬ ವ್ಯಾಪಾರಿ.

ಬಿಬಿಎಂಪಿ ಮುಖ್ಯ ಆಯುಕ್ತರು ದಿಡೀರ್ ಭೇಟಿ
ಕೆ.ಆರ್.ಮಾರ್ಕೆಟ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಖರೀದಿ ಮಾಡಿದ್ದು ವ್ಯಾಪಾರಸ್ಥರಿಗೆ ಖುಷಿ ನೀಡಿದೆ. ಕೊರೊನಾದಿಂದ ಆದಾಯ ಇರಲಿಲ್ಲ, ಈ ಹಬ್ಬದಿಂದ ಆದಾಯದ ನಿರೀಕ್ಷೆಯಲ್ಲಿರು. ಮಾರ್ಕೆಟ್ ನಲ್ಲಿ ಇಂದು ಜನರು ಹೆಚ್ಚಾಗಿದ್ದರಿಂದ ಅವೆನ್ಯೂ ರೋಡ್, ಮೈಸೂರು ರೋಡ್, ಕಾರ್ಪೋರೇಷನ್ ಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿತ್ತು. ಪಾರ್ಕಿಂಗ್ ಲಾಟ್ ಗಳು ತುಂಬಿಹೋಗಿದ್ದವು. ಈ ನಡುವೆ ಬಿಬಿಎಂಪಿ ಮುಖ್ಯ ಆಯುಕ್ತರು ದಿಢೀರ್ ಭೇಟಿಯನ್ನು ನೀಡಿ ಹಸಿ ಕಸ ಒಣ ಕಸವನ್ನು ವಿಭಾಗಿಸಿ ಕೊಡುವಂತೆ ಕಸವನ್ನು ಒಂದೆಡೆ ಹಾಕುವಂತೆ ಸೂಚಿಸಿದರು. ಇದೇ ಸಮಯದಲ್ಲಿ ಹೂ, ಹಣ್ಣುಗಳ ಬೆಲೆಯನ್ನು ಕೇಳಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.












Click it and Unblock the Notifications