ಕಾಂಗ್ರೆಸ್ ಜತೆ ಉಪೇಂದ್ರ ಒಪ್ಪಂದ ಮಾಡಿಕೊಂಡಿದ್ದರು: ಕೆಪಿಜೆಪಿ ಉಪಾಧ್ಯಕ್ಷ
Recommended Video
ಬೆಂಗಳೂರು, ಮಾರ್ಚ್ 6 : ಉಪೇಂದ್ರ ಅವರಿಗೆ ಕೆಪಿಜೆಪಿಯಿಂದ ಅಭ್ಯರ್ಥಿಗಳನ್ನು ನಿಲ್ಲಿಸುವ ಅಥವಾ ಗೆಲ್ಲಿಸುವ ಉದ್ದೇಶ ಇರಲಿಲ್ಲ. ನಮಗೆ ಅನುಮಾನ ಇರುವ ಹಾಗೆ ಕಾಂಗ್ರೆಸ್ ಜತೆ ಉಪೇಂದ್ರ ಒಪ್ಪಂದ ಮಾಡಿಕೊಂಡಿದ್ದರು. ಕೆಪಿಜೆಪಿಯಿಂದ ಚುನಾವಣೆಗೆ ಸ್ಪರ್ಧೆ ಮಾಡಬಾರದು ಎಂಬ ಒಪ್ಪಂದ ಆಗಿದ್ದರಿಂದಲೇ ಎಲ್ಲದರಲ್ಲೂ ತಡ ಮಾಡುತ್ತಾ ಬಂದರು ಎಂದು ಕೆಪಿಜೆಪಿ ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ಆರೋಪಿಸಿದ್ದಾರೆ.
ಕೆಪಿಜೆಪಿಯೊಳಗೆ ಭಿನ್ನಾಭಿಪ್ರಾಯ ಬರಲು ಕಾರಣ ಏನು ಎಂಬ ವಿಚಾರವಾಗಿ ಪ್ರಶ್ನೆ ಮಾಡಲು ಒನ್ಇಂಡಿಯಾ ಕನ್ನಡ ಸಂಪರ್ಕಿಸಿದಾಗ ಶಿವಕುಮಾರ್ ಪ್ರತಿಕ್ರಿಯಿಸಿದರು. "ಪಕ್ಷದ ಸೈನಿಂಗ್ ಅಥಾರಿಟಿ ನನ್ನೊಬ್ಬನಿಗೇ ಕೊಡಬೇಕು. ಹಾಗೊಂದು ವೇಳೆ ಆಗದಿದ್ದರೆ ಕೆಪಿಜೆಪಿ ಬಿಟ್ಟುಬಿಡ್ತೀನಿ" ಎಂದು ಮಾರ್ಚ್ ಎರಡನೇ ತಾರೀಕಿನ ಸಭೆಗೆ ಬಾರದೆ ಬ್ಲಾಕ್ ಮೇಲ್ ಮಾಡಿದ್ದರು ಎಂದರು.
ಉಪ್ಪಿ ಭಾಗ 3: ಕೆಪಿಜೆಪಿಗೆ ರಾಜೀನಾಮೆ, ಪ್ರಜಾಕೀಯ ಉದಯ
ಫೇಸ್ ಬುಕ್, ಟ್ವಿಟ್ಟರ್ ಸೋಷಿಯಲ್ ಮೀಡಿಯಾ ಹಾಗೂ ಟಿ.ವಿ. ಚಾನೆಲ್ ಗಳಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡ್ತೀನಿ ಅನ್ನೋದು ಅವರ ವಿಚಾರ ಆಗಿತ್ತು. ಆದರೆ ಕರ್ನಾಟಕದ ಎಷ್ಟು ಹಳ್ಳಿಗಳಲ್ಲಿ ಇಂಟರ್ ನೆಟ್ ಇದೆ? ಉಪೇಂದ್ರ ಪಕ್ಷದ ಪ್ರಚಾರ ಮಾಡುತ್ತಾರೆ ಅಂತ ಎಷ್ಟು ಜನ ಟಿ.ವಿ ನೋಡ್ತಾರೆ? ಧಾರಾವಾಹಿ, ಸಿನಿಮಾಗಳನ್ನು ನೋಡ್ತಾರೆ ವಿನಾ ನಮ್ಮ ಪಕ್ಷದ ಪ್ರಚಾರ ಯಾರು ನೋಡ್ತಾರೆ ಅನ್ನೋದು ನಮ್ಮ ಪ್ರಶ್ನೆ ಆಗಿತ್ತು ಎಂದರು.
ಒಂದು ಕ್ಷೇತ್ರ ಸುತ್ತಾಡುವುದಕ್ಕೇ ಮೂರು ತಿಂಗಳು ಬೇಕು
ಒಂದೊಂದು ವಿಧಾನಸಭೆ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಓಡಾಡಿ ಪ್ರಚಾರ ಮಾಡಬೇಕು ಅಂದರೂ ಮೂರು ತಿಂಗಳು ಸಮಯ ಹಿಡಿಯುತ್ತದೆ. ಅಂಥದ್ದರಲ್ಲಿ ಇವರು, ನಾನು ಉಪೇಂದ್ರ. ನಮ್ಮ ಪಕ್ಷದ ಅಭ್ಯರ್ಥಿ ಇಂಥವರು ಅಂತಷ್ಟೇ ಪ್ರಚಾರ ಮಾಡ್ತೀನಿ ಅಂತಿದ್ದರು. ಇದು ನಿಜವಾಗಲೂ ಸಾಧ್ಯವಿದೆಯಾ ಅನ್ನೋದು ನಮ್ಮ ಪ್ರಶ್ನೆ ಆಗಿತ್ತು ಎಂದು ಹೇಳಿದರು.
ಸಂಘಟನೆ ಇಲ್ಲದಿದ್ದರೆ ಪಕ್ಷ ಹೇಗೆ?
ಯಾವುದೇ ಪಕ್ಷ ಆಗಲಿ ಅದು ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್ ನಂಥ ದೊಡ್ಡ ಪಕ್ಷಗಳಲ್ಲಿ ಸಂಘಟನೆ ದೃಷ್ಟಿಯಿಂದ ಪದಾಧಿಕಾರಿಗಳು, ಅಧ್ಯಕ್ಷರು- ಉಪಾಧ್ಯಕ್ಷರು ಅಂತೆಲ್ಲ. ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಲ್ಲಿ ಮಾಡಿಕೊಂಡಿರುತ್ತಾರೆ. ಆದರೆ ಅಂಥ ಸಂಘಟನೆಯೇ ಬೇಡ ಅನ್ನೋದು ಉಪೇಂದ್ರ ಅವರ ಮಾತಾಗಿತ್ತು. ಹಾಗಿದ್ದ ಮೇಲೆ ಜನರನ್ನು ಸಂಘಟಿಸುವುದು ಹೇಗೆ ಅನ್ನೋದು ಪ್ರಶ್ನೆ ಎದುರಾಗಿತ್ತು ಎಂದರು ಶಿವಕುಮಾರ್.
ಉಪೇಂದ್ರ ರಾಜಕೀಯ ಭವಿಷ್ಯದ ಬಗ್ಗೆ ಜಾತಕ ಏನು ಹೇಳುತ್ತದೆ?
ಹೆದರಿಸಿದರು ಉಪೇಂದ್ರ
ಮಾರ್ಚ್ ಎರಡನೇ ತಾರೀಕು ಪಕ್ಷದ ರಾಷ್ಟ್ರೀಯ ಸಮಿತಿಯ ಸಭೆ ಆಗಿತ್ತು. ಅಲ್ಲಿಗೆ ಉಪೇಂದ್ರ ಅವರ ಅಣ್ಣ ಸುಧೀಂದ್ರ ಬಂದಿದ್ದರು. ಆದರೆ ಉಪೇಂದ್ರ ಅವರು ಆ ಸಭೆ ನಡೆದ ಜಾಗದಿಂದ ಸ್ವಲ್ಪ ದೂರದಲ್ಲಿ ಕಾರಿನಲ್ಲಿ ಇದ್ದರು. ಆಗ ಸುಧೀಂದ್ರ ಫೋನ್ ಮಾಡಿಕೊಟ್ಟು, ಸಹಿ ಮಾಡುವ ಸಂಪೂರ್ಣ ಅಧಿಕಾರ ನನಗೇ ಇರಬೇಕು. ಹಾಗೆ ಕೊಡಲಿಕ್ಕೆ ಸಾಧ್ಯವಿಲ್ಲದಿದ್ದರೆ ಸಭೆಗೆ ಬರೋದಿಲ್ಲ. ಪಕ್ಷ ಬಿಟ್ಟು ಹೋಗ್ತೀನಿ ಅಂತ ಉಪೇಂದ್ರ ಹೆದರಿಸಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.
ನನ್ನ ಉದ್ದೇಶವೇ ಅವರಿಗೆ ಅರ್ಥವಾಗಲಿಲ್ಲ: ಉಪೇಂದ್ರ
ಕೆಪಿಜೆಪಿಯ ಮಹೇಶ್ ಗೌಡ ಮತ್ತಿತರರಿಗೆ ಪ್ರಜಾಕೀಯ ಕಲ್ಪನೆಯೇ ಅರ್ಥ ಆಗಿಲ್ಲ. ಆದ್ದರಿಂದ ಪಕ್ಷಕ್ಕೆ ನಾನು ರಾಜೀನಾಮೆ ನೀಡಿದ್ದೇನೆ. ಹೊಸ ರಾಜಕೀಯ ಪಕ್ಷ ಆರಂಭಿಸುತ್ತೇನೆ. ನಮ್ಮ ಉದ್ದೇಶ ಏನಿತ್ತು ಅದು ಮುಂದುವರಿಯಲಿದೆ. ಒಂದು ವೇಳೆ ಈ ಬಾರಿ ವಿಧಾನಸಭೆ ಚುನಾವಣೆಗೆ ನಿಲ್ಲಲು ಸಾಧ್ಯವಾಗದಿದ್ದರೆ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸುತ್ತೇವೆ ಎಂದು ಉಪೇಂದ್ರ ಮಾಧ್ಯಮಗಳಿಗೆ ಮಂಗಳವಾರ ತಿಳಿಸಿದ್ದಾರೆ.