ಭೂಗತ ಪಾತಕಿ ರವಿ ಪೂಜಾರಿ ಬೆಂಗಳೂರಿಗೆ ವಾಪಸ್
ಬೆಂಗಳೂರು, ಫೆಬ್ರವರಿ 24: ಭೂಗತ ಪಾತಕಿ ರವಿ ಪೂಜಾರಿಯನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಿಂದ ಸೋಮವಾರ ನಸುಕಿನಲ್ಲಿ ಬೆಂಗಳೂರಿಗೆ ಕರೆತರಲಾಗಿದೆ.
Recommended Video
ಕೊಲೆ, ಸುಲಿಗೆ, ಜೀವ ಬೆದರಿಕೆ ಸೇರಿದಂತೆ ಅನೇಕ ರಾಜ್ಯಗಳಲ್ಲಿ ವಿವಿಧ ಪ್ರಕರಣಗಳನ್ನು ಎದುರಿಸುತ್ತಿದ್ದ ರವಿ ಪೂಜಾರಿ, ಸುಮಾರು 30 ವರ್ಷಗಳಿಂದ ಪೊಲೀಸರಿಗೆ ಬೇಕಾಗಿದ್ದ. ಸೆನೆಗಲ್ನ ಜೈಲಿನಲ್ಲಿದ್ದ ಆತನನ್ನು ಗಡಿಪಾರು ಮಾಡಿದ ಹಿನ್ನೆಲೆಯಲ್ಲಿ ಎಡಿಜಿಪಿ ಅಮರ್ ಕುಮಾರ್ ಪಾಂಡೆ, ಸಿಸಿಪಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ತಂಡ ಆತನನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದೆ.
ಭೂಗತ ಪಾತಕಿ ರವಿ ಪೂಜಾರಿ ಸೆನೆಗಲ್ ನಿಂದ ಭಾರತಕ್ಕೆ
ರಾತ್ರಿ 12.40ರ ಸುಮಾರಿಗೆ ಆತನನ್ನು ಬೆಂಗಳೂರಿಗೆ ಕರೆತರಲಾಗಿದ್ದು, ಮಡಿವಾಳ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ನಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ಶಾಸಕರಾದ ತನ್ವೀರ್ ಸೇಠ್, ಎಚ್ ಎಂ ರೇವಣ್ಣ, ಮಾಜಿ ಶಾಸಕ ಅನಿಲ್ ಲಾಡ್ ಅವರಿಗೆ ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದ ಆರೋಪ ಆತನ ಮೇಲೆ ಇದೆ.
60ಕ್ಕೂ ಅಧಿಕ ಪ್ರಕರಣಗಳು
ರಾಜ್ಯದಲ್ಲಿ 60ಕ್ಕೂ ಅಧಿಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ರವಿ ಪೂಜಾರಿ, 1990ರಿಂದ ಭಾರತದಿಂದ ಪರಾರಿಯಾಗಿದ್ದ. ದುಬೈ ಸೇರಿದಂತೆ ಅನೇಕ ದೇಶಗಳಲ್ಲಿ ತಲೆ ಮರೆಸಿಕೊಂಡು ಓಡಾಡುತ್ತಿದ್ದ. ರವಿ ಪೂಜಾರಿ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ, ಮುಲ್ಕಿ, ಮೂಡಬಿದರೆ, ಕೊಣಾಜೆ, ಮೂಡಬಿದರೆ, ಕಾವೂರು, ಊರ್ವ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ 39ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ಕೂಡ ಆತನ ಮೇಲೆ ಸುಮಾರು 38 ಪ್ರಕರಣಗಳಿವೆ.
ಒಂದೂವರೆ ವರ್ಷದಿಂದ ಪ್ರಯತ್ನ
ಸೆನೆಗಲ್ ದೇಶದ ಜೈಲಿನಲ್ಲಿ ಕಳೆದ ಒಂದೂವರೆ ವರ್ಷದಿಂದ ರವಿ ಪೂಜಾರಿಯನ್ನು ಭಾರತದ ಪೊಲೀಸರಿಗೆ ಹಸ್ತಾಂತರ ಮಾಡಿಸಲು ಸತತ ಪ್ರಯತ್ನಗಳು ನಡೆದಿದ್ದವು. ಆದರೆ ಆತನ ಗಡಿಪಾರು ವಿಚಾರದಲ್ಲಿ ಎರಡೂ ದೇಶಗಳ ನಡುವೆ ಒಪ್ಪಂದ ನಡೆಯದ ಕಾರಣ ಹಸ್ತಾಂತರ ವಿಳಂಬವಾಗಿತ್ತು. ಕಳೆದ ವಾರ ಈ ಪ್ರಕ್ರಿಯೆಯ ತೊಡಕುಗಳು ಬಗೆಹರಿದಿದ್ದರಿಂದ ಎರಡು ದಿನಗಳ ಹಿಂದೆಯಷ್ಟೇ ಅಲ್ಲಿನ ನ್ಯಾಯಾಲಯ ಆತನನ್ನು ಬೆಂಗಳೂರು ಪೊಲೀಸರ ವಶಕ್ಕೆ ಒಪ್ಪಿಸಿತ್ತು.
ಭೂಗತ ಪಾತಕಿ ರವಿ ಪೂಜಾರಿ ಡಾನ್ ಆಗಿ ಬೆಳೆದದ್ದು ಹೇಗೆ?
13 ರೆಡ್ ಕಾರ್ನರ್ ನೋಟಿಸ್
2019 ರ ಜನವರಿ 19ರಂದು ರವಿ ಪೂಜಾರಿಯನ್ನು ಸೆನೆಗಲ್ನಲ್ಲಿ ಬಂಧಿಸಲಾಗಿತ್ತು. ಆದರೆ ಹಸ್ತಾಂತರ ಕುರಿತಂತೆ ಸೆನೆಗಲ್ ಜೊತೆ ಭಾರತ ಯಾವುದೇ ಒಪ್ಪಂದ ಹೊಂದಿಲ್ಲದ ಕಾರಣ ಕಾನೂನು ತೊಡಕಿನಿಂದ ಹಸ್ತಾಂತರ ಸಾಧ್ಯವಾಗಿರಲಿಲ್ಲ. ನಂತರ ಜಾಮೀನು ಪಡೆದು ಮತ್ತೆ ಭೂಗತನಾಗಿದ್ದ ಪೂಜಾರಿಯನ್ನು ಪುನಃ ಬಂಧಿಸಲಾಗಿದೆ. ಈ ಅವಧಿಯಲ್ಲಿ ಆತನ ವಿರುದ್ಧ 13 ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿವೆ.
ಅಂಥೋಣಿ ಫರ್ನಾಂಡೀಸ್
ಮಂಗಳೂರಿನ ಪೊಲೀಸರು, RAW ಸಿಬ್ಬಂದಿ ಹಾಗೂ ಸೆನೆಗಲ್ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಪೂಜಾರಿಯನ್ನು ಬಂಧಿಸಿದ್ದರು. ಬುರ್ಕಿನಾ ಫಾಸೋ ನಾಗರಿಕ ಎಂದು ಹೇಳಿಕೊಂಡಿರುವ ಪೂಜಾರಿ ತನ್ನ ಹೆಸರನ್ನು ಅಂಥೋಣಿ ಫರ್ನಾಂಡೀಸ್ ಎಂದು ಬದಲಾಯಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.
ಭೂಗತ ಪಾತಕಿ ರವಿ ಪೂಜಾರಿ ಸೆನೆಗಲ್ನಿಂದ ಪರಾರಿ?
ಬಾಲಿವುಡ್ ನಟರಿಗೆ ಬೆದರಿಕೆ
ಮಲ್ಪೆ ಮೂಲದ ರವಿ ಪೂಜಾರಿ ಮುಂಬೈನಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ. ಬಾಲಾ ಜ್ವಾಲೆಯನ್ನು ಹತ್ಯೆ ಮಾಡಿದ ಬಳಿಕ ಭೂಗತ ಲೋಕದಲ್ಲಿ ರವಿ ಪೂಜಾರಿ ಹೆಸರು ಬೆಳಕಿಗೆ ಬಂದಿತು. ಮುಂಬೈನಲ್ಲಿ ಪ್ರಭಾವಿಯಾಗಿದ್ದ ಛೋಟಾ ರಾಜನ್ ತಂಡದಲ್ಲಿ ರವಿ ಪೂಜಾರಿ ಗುರುತಿಸಿಕೊಂಡಿದ್ದ. 1990ರಲ್ಲಿ ದುಬೈಗೆ ಪರಾರಿಯಾಗಿದ್ದ ಆತ, ಬಾಲಿವುಡ್ ನಟರಾದ ಶಾರೂಖ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ನಿರ್ದೇಶಕ ಕರಣ್ ಜೋಹರ್, ನಿರ್ಮಾಪಕ ರಾಕೇಶ್ ರೋಷನ್ ಮುಂತಾದವರಿಗೆ ಅಲ್ಲಿಂದಲೇ ಜೀವ ಬೆದರಿಕೆ ಹಾಕಿದ್ದ.