ಬೆಂಗಳೂರಿನಲ್ಲಿ ನಿಯಂತ್ರಣಕ್ಕೆ ಸಿಗದ ಕೋವಿಡ್-19: ಕಾರಣ ಹೇಳಿದ ತಜ್ಞರು!
ಬೆಂಗಳೂರು, ಜು. 08: ಬೆಂಗಳೂರಿನಲ್ಲಿ ಕೊರೊನಾ ವೈರಸ್ ನಿಯಂತ್ರಿಸಲು ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ರಾಜ್ಯದ ಉಳಿದ ಭಾಗಗಳಿಗೆ ಹೋಲಿಕೆ ಮಾಡಿದರೆ ಇಲ್ಲಿ ಈಗಾಗಲೇ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಿಗಬೇಕಾಗಿತ್ತು. ಆದರೆ ಹಾಗೆ ಆಗುತ್ತಿಲ್ಲ. ಬೆಂಗಳೂರಿನಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ.
ಇಂದು ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ತುರ್ತು ಸಭೆಯ ಬಳಿಕ ಮಾತನಾಡಿದ್ದ ವೈದ್ಯಕೀಯ ಶಿಕ್ಷಣ ಸಚಿವರು ಆಗಿರುವ ಬೆಂಗಳೂರು ಕೋವಿಡ್ ಟಾಸ್ಕ್ಫೋರ್ಸ್ ಉಸ್ತುವಾರಿ ಡಾ. ಸುಧಾಕರ್ ಕೂಡ ಇದನ್ನೇ ಹೇಳಿದ್ದರು. ಬೆಂಗಳೂರಿನಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಾಗುತ್ತದೆ ಎಂದು ತಜ್ಞರೂ ಕೂಡ ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದರು. ಇದೀಗ ಬೆಂಗಳೂರಿನಲ್ಲಿ ಕೋರೊನಾ ವೈರಸ್ ಸೋಂಕಿತರ ಸಂಖ್ಯೆ ದಿಢೀರ್ ಹೆಚ್ಚಾಗಿರುವ ಹಿಂದಿನ ಕಾರಣವನ್ನು ತಜ್ಞರು ಕಂಡು ಕೊಂಡಿದ್ದಾರೆ.

ಹೆಚ್ಚಾಗುತ್ತಿದ್ದಾರೆ ಸೋಂಕಿತರು
ಈ ವರೆಗೆ ಸೋಂಕು ನಿಯಂತ್ರಣದಲ್ಲಿ ಕರ್ನಾಟಕ ಮಾದರಿಯಾಗಿದೆ ಎಂದು ಕೇಂದ್ರ ತಂಡ ಹೊಗಳಿದೆ ಎಂದು ರಾಜ್ಯ ಸರ್ಕಾರ ಒಂದೆಡೆ ಹೇಳುತ್ತಿದೆ. ಮತ್ತೊಂದೆಡೆ ಸತತ 10 ದಿನಗಳಿಂದ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಅನಿಯಂತ್ರಿತವಾಗಿ ಏರಿಕೆಯಾಗುತ್ತಲೇ ಇದೆ. ಇಂದೂ ಕೂಡ ರಾಜ್ಯದಲ್ಲಿ ಪತ್ತೆಯಾಗಿರುವ 2,062 ಸೋಂಕಿತ ಪ್ರಕರಣಗಳಲ್ಲಿ 1,148 ಸೋಂಕಿತರು ಬೆಂಗಳೂರಿನಲ್ಲಿಯೇ ಪತ್ತೆಯಾಗಿದ್ದಾರೆ.
ಬೆಂಗಳೂರಿನಲ್ಲಿ ಸೋಂಕು ಹೀಗೆ ಕೈಗೆ ಸಿಗದೇ ಏರಿಕೆಯಾಗುತ್ತಿರುವುದರ ಹಿಂದಿನ ಮರ್ಮವನ್ನು ಕೋವಿಡ್ ಟಾಸ್ಕ್ ಫೋರ್ಸ್ನಲ್ಲಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ವಿವರಿಸಿದ್ದಾರೆ.

ಸೋಂಕು ಹೆಚ್ಚಳಕ್ಕೆ ಕಾರಣ
ಸರ್ಕಾರದ ಪ್ರಯತ್ನಗಳ ಹೊರತಾಗಿಯೂ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಅನಿಯಂತ್ರಿತ ವಲಸೆ ಕಾರಣ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಹೇಳಿದ್ದಾರೆ.
ಬೆಂಗಳೂರಿನಿಂದ ಹೊರ ಹೋಗುವುದು ಮತ್ತು ಒಳ ಬರುವವರ ವಲಸೆ ನಿಯಂತ್ರಣ ಆಗದೇ ಇರುವುದು ಸೋಂಕು ನಿಯಂತ್ರಣಕ್ಕೆ ಬರದೇ ಇರುವುದಕ್ಕೆ ಕಾರಣ. ಸೋಂಕು ಹರಡಲು ವಲಸೆ ಸಹ ಕಾರಣವಾಗಿದೆ. ಯಾರು ಅನಗತ್ಯ ಹೊರ ಹೋಗುವ ಅಥವಾ ಒಳ ಬರೋದಕ್ಕೆ ಅವಕಾಶ ಕೊಡಬಾರದು ಎಂದು ಅವರು ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ.

ಆ್ಯಂಟಿಜೆನ್ ಟೆಸ್ಟ್
ಜೊತೆಗೆ ಆ್ಯಂಟಿಜೆನ್ ಟೆಸ್ಟ್ ಆರಂಭಿಸಲು ಯೋಜಿಸಲಾಗಿದ್ದು, ಇದರಿಂದ ಕೆಲವೇ ನಿಮಿಷಗಳಲ್ಲಿ ಕೋವಿಡ್ ಪ್ರಾಥಮಿಕ ತಪಾಸಣೆ ಮಾಡಬಹುದಾಗಿದೆ ಎಂದು ಡಾ. ಸಿ.ಎನ್. ಮಂಜುನಾಥ್ ವಿವರಿಸಿದ್ದಾರೆ. ಇದರಲ್ಲಿ ಪಾಜಿಟಿವ್ ಕಂಡು ಬಂದಲ್ಲಿ ಅಂತಹವರನ್ನು ಹೆಚ್ಚಿನ ತಪಾಸಣೆಗಾಗಿ ಕಳುಹಿಸಬಹುದಾಗಿದೆ. ಪ್ರತಿ ಆಸ್ಪತ್ರೆಗಳು ಈ ಆ್ಯಂಟಿಜನ್ ಉತ್ಪನ್ನವನ್ನು ಬಳಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಅನಗತ್ಯ ಆತಂಕ ಬೇಡ
ಕೋವಿಡ್ ಭಯದಿಂದ ಜನರು ಮುಕ್ತರಾಗಬೇಕು, ಇದೊಂದು ಸಂಪರ್ಕದಿಂದ ಬರುವ ವೈರಾಣುವಾಗಿದ್ದು ಭಯದಿಂದ ಜನರು ತಲ್ಲಣಗೊಂಡಿದ್ದಾರೆ. ಮಾನಸಿಕವಾಗಿ ಗಟ್ಟಿಯಾಗುವುದಕ್ಕಿಂತ ಹೆಚ್ಚಿನ ಔಷಧಿ ಇಲ್ಲ, ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ ಎಂದು ಡಾ. ಸಿ.ಎನ್. ಮಂಜುನಾಥ್ ಹೇಳಿದ್ದಾರೆ.
ಶೇಕಡ 80-90 ಕೋವಿಡ್ ರೋಗಿಗಳಿಗೆ ಯಾವುದೇ ಗಂಭೀರ ತೊಂದರೆಯಾಗುವುದಿಲ್ಲ, ಕೆಲವು ಜನರು ತಮ್ಮ ಅನಾರೋಗ್ಯದ ಇತರೆ ಕಾರಣಗಳಿಗಾಗಿ ಹೆಚ್ಚಿನ ಪರಿಣಾಮಕ್ಕೆ ಒಳಗಾಗುತ್ತಾರೆ ಎಂದಿದ್ದಾರೆ.

ಮುಖ್ಯಸ್ಥರೊಂದಿಗೆ ಸಭೆ
ಇಂದು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ವಿಧಾನಸೌಧದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಸಭೆ ನಡೆಸಿದ್ದಾರೆ. ಸೋಂಕಿತರ ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರದೊಂದಿಗೆ ಖಾಸಗಿ ಆಸ್ಪತ್ರೆಗಳು ಕೈಜೋಡಿಸಲು ಒಪ್ಪಿಕೊಂಡಿವೆ.
ಒಟ್ಟಾರೆ ಸಭೆಯಲ್ಲಿ ಪ್ರಮುಖವಾಗಿ 6 ರಿಂದ 7 ಸಾವಿರ ಬೆಡ್ಗಳನ್ನು ಒದಗಿಸಲು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಒಪ್ಪಿಕೊಂಡಿದ್ದಾರೆ ಎಂದು ಡಾ. ಸುಧಾಕರ್ ಮಾಹಿತಿ ಕೊಟ್ಟಿದ್ದಾರೆ.












Click it and Unblock the Notifications