ಬೆಂಗಳೂರಿನಿಂದ ಅಪಹರಣವಾಗಿದ್ದ ಇಬ್ಬರು ಬಿಲ್ಡರ್ಗಳ ಹತ್ಯೆ
ಬೆಂಗಳೂರು, ಆಗಸ್ಟ್ 05 : ಬೆಂಗಳೂರಿನಿಂದ ಅಪಹರಣಕ್ಕೊಳಗಾಗಿದ್ದ ಇಬ್ಬರು ಬಿಲ್ಡರ್ಗಳನ್ನು ಹತ್ಯೆ ಮಾಡಲಾಗಿದೆ. ಜೂನ್ 27ರಂದು ಇಬ್ಬರು ಬಿಲ್ಡರ್ಗಳನ್ನು ನಗರದಿಂದ ಅಪಹರಣ ಮಾಡಲಾಗಿತ್ತು.
ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಸಾದ್ ಬಾಬು, ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಾಜಿ ಎನ್ನುವ ಬಿಲ್ಡರ್ಗಳನ್ನು ಅಪಹರಣ ಮಾಡಲಾಗಿತ್ತು. ಪೊಲೀಸರು ಅವರನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚನೆ ಮಾಡಿದ್ದರು.
ಬೆಂಗಳೂರು : ಬಿಲ್ಡರ್ ನಾಪತ್ತೆ, ಅಪಹರಣ ಶಂಕೆ
ಜಯನಗರ ಎಸಿಪಿ ನೇತೃತ್ವದ ತಂಡ ಅಪಹರಣ ಮಾಡಿದ್ದ ತೇಜಸ್, ಮಣಿ ಮತ್ತು ಅನಿಲ್ ಎಂಬ ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರ ವಿಚಾರಣೆ ವೇಳೆ ಉದ್ಯಮಿಗಳನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ಹೇಳಿದ್ದಾರೆ.
ಇಬ್ಬರೂ ಉದ್ಯಮಿಗಳನ್ನು ಒಂದೇ ಗ್ಯಾಂಗ್ ಸುಪಾರಿ ಪಡೆದು ಅಪಹರಣ ಮಾಡಿತ್ತು. ಬಳಿಕ ಅವರನ್ನು ಹತ್ಯೆ ಮಾಡಲಾಗಿದೆ. ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.
ಜೂನ್ 27ರಂದು ಅಪಹರಣ : ರಾಜರಾಜೇಶ್ವರಿ ನಗರದ ನಿವಾಸಿ ಪ್ರಸಾದ್ ಬಾಬು (47) ಅವರು ಜೆ.ಪಿ.ನಗರಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಆದರೆ, ಮನೆಗೆ ವಾಪಸ್ ಆಗಿರಲಿಲ್ಲ. ಪತ್ನಿ ಅನಿತಾ ಅವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು.
ಬೆಂಗಳೂರು : ಬಿಲ್ಡರ್ಗಳ ನಾಪತ್ತೆ ಪ್ರಕರಣಕ್ಕೆ ತಿರುವು!
ಪ್ರಸಾದ್ ಬಾಬು ಅವರು ಜೆ.ಪಿ.ನಗರ ತಲುಪಿದ ಬಳಿಕ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಜೆ.ಪಿ.ನಗರ ಬಳಿಕ ಇಂದಿರಾ ವೃತ್ತದ ಬಳಿ ಅವರ ಬೈಕ್ ಪತ್ತೆಯಾಗಿತ್ತು. ಅಲ್ಲಿಂದಲೇ ಅವರನ್ನು ಅಪಹರಣ ಮಾಡಿರುವ ಶಂಕೆ ಇದೆ.
ಬಾಲಾಜಿ ಅವರ ಅಪಹರಣದ ಬಗ್ಗೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಿಲ್ಡರ್ಗಳನ್ನು ಎಲ್ಲಿ ಹತ್ಯೆ ಮಾಡಲಾಗಿದೆ? ಎಂಬ ಬಗ್ಗೆ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.