ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್ ಹತ್ಯೆ ಪ್ರಕರಣಕ್ಕೆ ತಿರುವು!
ಬೆಂಗಳೂರು, ಡಿಸೆಂಬರ್ 22 : ಬೆಂಗಳೂರಿನ ಎಂ.ಜಿ.ರಸ್ತೆಯ ಕೋಟಕ್ ಮಹೀಂದ್ರಾ ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್ ಅನಿಲ್ ಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರ ಯಶಸ್ವಿಯಾಗಿದ್ದಾರೆ.
ಅನಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಬಸವೇಗೌಡ ಎಂಬುವವರನ್ನು ಕಗ್ಗಲೀಪುರ ಪೊಲೀಸರು ಬಂಧಿಸಿದ್ದಾರೆ. ಕನಕಪುರದ ಕಚುವನಹಳ್ಳಿ ಗ್ರಾಮದ ನಿವಾಸಿಯಾದ ಆರೋಪಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ.
ಡಿಸೆಂಬರ್ 3ರಂದು ಅನಿಲ್ ನಾಪತ್ತೆಯಾಗಿದ್ದಾರೆ ಎಂದು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಿ ಗ್ರಾಮದ ಸ್ಮಶಾನದ ಬಳಿ ಅನಿಲ್ ಶವ ಡಿಸೆಂಬರ್ 5ರಂದು ಪತ್ತೆಯಾಗಿತ್ತು.

ವಿದ್ಯುತ್ ಶಾಕ್ ಕೊಟ್ಟು ಕೊಲೆ : ಅನಿಲ್ ಹತ್ಯೆ ಪ್ರರಕಣದ ತನಿಖೆ ನಡೆಸುತ್ತಿದ್ದ ಕಗ್ಗಲೀಪುರ ಪೊಲೀಸರು ಅವರ ದೂರವಾಣಿ ಕರೆ ಮಾಹಿತಿ ಸಂಗ್ರಹಿಸಿದಾಗ ಶಿವಬಸವೇಗೌಡ ನಂಬರ್ ಪತ್ತೆಯಾಗಿತ್ತು. ಆತನನ್ನು ಬಂಧಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಪ್ರೀತಿಸಿದ ಹುಡುಗಿ ಮೇಲಿನ ಮೋಹಕ್ಕೆ ಅನಿಲ್ನನ್ನು ಶಿವಬಸವೇಗೌಡ ವಿದ್ಯುತ್ ಶಾಕ್ ನೀಡಿ ಕೊಲೆ ಮಾಡಿದ್ದ. ಅನಿಲ್ಗೆ ಶ್ವೇತಾ ಜೊತೆ ವಿವಾಹ ನಿಶ್ಚಯವಾಗಿತ್ತು. ಆರೋಪಿ ಶ್ವೇತಾಳನ್ನು ಪ್ರೀತಿಸುತ್ತಿದ್ದ. ಮದುವೆ ನಿಗದಿಯಾದ ಕಾರಣಕ್ಕೆ ಅನಿಲ್ ಹತ್ಯೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಅನಿಲ್-ಶ್ವೇತಾ ಮದುವೆ ತಪ್ಪಿಸಲು ಆರೋಪಿ ಪ್ರಯತ್ನ ನಡೆಸಿದ್ದ. ಅದು ಸಾಧ್ಯವಾಗದಿದ್ದಾಗ ಅನಿಲ್ ನಂಬರ್ ಪಡೆದು ನಿರಂತರವಾಗಿ ಕರೆ ಮಾಡಿ ಆತನ ಸ್ನೇಹ ಸಂಪಾದನೆ ಮಾಡಿದ್ದ.
ಡಿಸೆಂಬರ್ 3ರಂದು ಉತ್ತರಿ ಗ್ರಾಮಕ್ಕೆ ಅನಿಲ್ ಬಂದಿರುವುದು ತಿಳಿದು ಆತನನ್ನು ಊಟಕ್ಕೆ ಆಹ್ವಾನಿಸಿದ್ದ. ರಾತ್ರಿ ಊಟ ಮುಗಿಸಿಕೊಂಡು ಬರುವಾಗ ವಿದ್ಯುತ್ ಟ್ರಾನ್ಸ್ ಫರ್ಮರ್ ಬಳಿ ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದ.












Click it and Unblock the Notifications