ಬೆಂಗಳೂರು, ಮಂಡ್ಯದಲ್ಲಿ ಕೆಲಕ್ಷಣ ಭೂಮಿ ಅಲುಗಿದ್ದು ಏಕೆ?
ಬೆಂಗಳೂರು, ಏಪ್ರಿಲ್ 18 : ಬೆಂಗಳೂರಿನಲ್ಲಿ ಮಂಗಳವಾರ ಬೆಳಿಗ್ಗೆ ಭಾರೀ ಭೂಕಂಪ, ಎದ್ದುಬಿದ್ದು ಓಡಿದ ಜನ, ಸಾರ್ವಜನಿಕರಲ್ಲಿ ಆತಂಕದ ವಾತಾವರಣ, ಬಿರುಕುಬಿಟ್ಟ ಗೋಡೆಗಳು, ಧರೆಗುರುಳಿದ ಪಾತ್ರೆಪಡಗಗಳು, ಮುಂದೇನು ಕಾದಿದೆಯೋ... ಇತ್ಯಾದಿ ಇತ್ಯಾದಿ...
ಟಿವಿಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ, ಇಂಟರ್ನೆಟ್ಟುಗಳಲ್ಲಿ ಬರೀ ಇದೇ ಸುದ್ದಿ. ಭೂಮಿ ಅಲುಗಿದ್ದ ಕೇವಲ 2 ಸೆಕೆಂಡು. ಭೂಮಿ ಅಗುಗಿದ್ದಕ್ಕಿಂತ ಹೆಚ್ಚು ಸದ್ದು ಮಾಡಿದ್ದು ಭೂಕಂಪವಾಗಿದೆಯೆಂಬ ಸುದ್ದಿ. ಭೂಕಂಪ ಎಷ್ಟು ಪ್ರಮಾಣದಲ್ಲಿ ಆಯಿತು ಎಂಬ ಬಗ್ಗೆ ಎಲ್ಲೂ ಸುದ್ದಿಯಿಲ್ಲ.[ಉದ್ಯಾನನಗರಿ ಬೆಂಗಳೂರಿನಲ್ಲೂ ಭೂಕಂಪ?!]

ಇದರ ಲಾಭ ತೆಗೆದುಕೊಂಡು ಹಲವಾರು ಜನರು ಹಿಂದೆ ಎಂದೋ ಆಗಿದ್ದ ಗೋಡೆಯ ಬಿರುಕನ್ನು ತೋರಿಸಿ, ನೋಡಿ ಇಲ್ಲಿ ನಮ್ಮ ಮನೆ ಗೋಡೆ ಬಿರುಕುಬಿಟ್ಟಿದೆ. ಇದು ಆಗಿದ್ದು ಭೂಕಂಪದಿಂದಲೇ ಎಂದು ತಾವೇ ಸುದ್ದಿಯಾದರು.[ಮಂಡ್ಯ, ರಾಮನಗರದಲ್ಲಿ ಭೂಕಂಪ: ಆತಂಕದಲ್ಲಿ ಜನರು]
ಆದರೆ, ನಿಜವಾಗಿ ಆಗಿದ್ದು ಏನು? ಭೂಕಂಪವಾ?
ಅಲ್ಲವೇ ಅಲ್ಲ ಅಂತಾರೆ ಕರ್ನಾಟಕ ಪ್ರಕೃತಿ ವಿಕೋಪ ಪರಿವೀಕ್ಷಣಾ ಕೇಂದ್ರದ ಅಧಿಕಾರಿಗಳು. ಅಲುಗಾಟ ಎಷ್ಟು ಕಡಿಮೆಮಟ್ಟದ್ದಾಗಿತ್ತೆಂದರೆ ರಿಕ್ಟರ್ ಮಾಪಕದಲ್ಲಿ ಅದು ದಾಖಲಾಗಿಯೇ ಇಲ್ಲ. ಭೂಕಂಪವಾಗಿದ್ದರೆ ಎಷ್ಟೇ ಪ್ರಮಾಣದಲ್ಲಿ ಆಗಿದ್ದರೂ ರಿಕ್ಟರ್ ಮಾಪಕದಲ್ಲಿ ದಾಖಲಾಗಿರಬೇಕಿತ್ತಲ್ಲ?
ಅಧಿಕಾರಿಗಳ ಪ್ರಕಾರ, ರಾಮನಗರದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯ ಪರಿಣಾಮವೇ ಇದಾಗಿರಬಹುದು. ಸ್ಫೋಟಕವನ್ನು ಸ್ಫೋಟಿಸಿದ್ದರಿಂದ ಮಂಡ್ಯ, ಕೆಂಗೇರಿ ಮತ್ತಿತರ ಕೆಲ ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗಿರಬಹುದು. ಇದು ಖಂಡಿತ ಭೂಕಂಪ ಅಲ್ಲ. [ಭೂಕಂಪನದಿಂದ ನಟಿ ಲೀಲಾವತಿ ಮನೆ ಬಿರುಕು! ವಿನೋದ್ ರಾಜ್ ಗೆ ನಡುಕ!]
ಭೂಕಂಪ ಮಾಪನಾ ಕೇಂದ್ರ ಮಾಗಡಿ ರಸ್ತೆಯಲ್ಲಿದೆ. ಆದರೆ, ಅಲ್ಲಿ ಭೂಕಂಪವಾಗಿರುವುದು ದಾಖಲಾಗಿಲ್ಲ. ವಿಪ್ಪತ್ತು ನಿರ್ವಹಣಾ ಕೇಂದ್ರದ ಶ್ರೀನಿವಾಸ್ ರೆಡ್ಡಿ ಅವರ ಪ್ರಕಾರ, ಭೂಕಂಪದ ಪ್ರಮಾಣ 1ಕ್ಕಿಂತ ಕಡಿಮೆಯಿದ್ದರೆ ರಿಕ್ಟರ್ ಮಾಪಕದಲ್ಲಿ ದಾಖಲಾಗುವುದಿಲ್ಲ.












Click it and Unblock the Notifications