ಟ್ರಾಫಿಕ್ ನಿಯಮ: ಬೆಂಗಳೂರು ಪೊಲೀಸರ ಮಹತ್ವದ ಆದೇಶ
ಬೆಂಗಳೂರು, ಜ 9: ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದ್ದ ಮತ್ತು ಅಸಮಾಧಾನಕ್ಕೂ ಕಾರಣವಾಗಿದ್ದ ಸಂಚಾರ ನಿಯಮದಲ್ಲಿ ಬೆಂಗಳೂರು ಪೊಲೀಸರು ತಾತ್ಕಾಲಿಕ ಮಾರ್ಪಾಡು ಮಾಡಿದ್ದಾರೆ.
ಈ ನಿಯಮದ ಪ್ರಕಾರ, ರಸ್ತೆಬದಿಯಲ್ಲಿ ಅಥವಾ ಮರದ ಕೆಳಗೆ ಮರೆಯಾಗಿ ನಿಂತು, ಸಂಚಾರ ನಿಯಮವನ್ನು ಉಲ್ಲಂಘಿಸುತ್ತಿರುವವರನ್ನು ಅಥವಾ ಹಳೆಯ ಕೇಸ್ ಏನಾದರೂ ಇದ್ದರೆ ಪತ್ತೆಹಚ್ಚಲು ವಾಹನ ಸವಾರರನ್ನು ಹಿಡಿಯಲು ಇನ್ನು ಮುಂದೆ ಅಡ್ಡಗಟ್ಟಿ ನಿಲ್ಲಿಸುವಂತಿಲ್ಲ.
ಕೊರೊನಾದಿಂದ ಪೊಲೀಸರನ್ನು ಸಾಧ್ಯವಾದಷ್ಟು ಮಟ್ಟಿಗೆ ಸುರಕ್ಷತೆಗೊಳಿಸುವುದು, ನಿಯಮ ಉಲ್ಲಂಘಿಸಿದಾಗ ರಿಸಿಟ್ ನೀಡದೇ ದುಡ್ದು ತೆಗೆದುಕೊಳ್ಳುತ್ತಿರುವ ಆರೋಪದಿಂದ ಮುಕ್ತರಾಗಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಇನ್ನು ಮುಂದೆ, ಟ್ರಾಫಿಕ್ ನಿಯಮ ಉಲ್ಲಂಘನೆ ಬಾಕಿ ಪ್ರಕರಣಗಳಿದ್ದರೆ, ವಾಹನ ಮಾಲೀಕರ ವಿಳಾಸಕ್ಕೆ ನೊಟೀಸ್ ಕಳುಹಿಸುವ ನಿರ್ಧಾರಕ್ಕೆ ಬರಲಾಗಿದೆ. ಆದರೆ, ನೋಪಾರ್ಕಿಂಗ್ ಪ್ರದೇಶದಲ್ಲಿ ವಾಹನಗಳನ್ನು ತೆರವುಗೊಳಿಸುವ ನಿಯಮ ಹಾಗೇ ಮುಂದುವರಿಯಲಿದೆ.
ಜೊತೆಗೆ, ಟ್ರಾಫಿಕ್ ನಿಯಮ ಉಲ್ಲಂಘಿಸುವವರ ಫೋಟೋವನ್ನು ತೆಗೆದು ನೊಟೀಸ್ ಕಳುಹಿಸುವ ನಿಯಮವೂ ಮುಂದುವರಿಯಲಿದೆ. ಆರ್ ಟಿಒ ಕಚೇರಿಗೆ ಬರುವ, ವಾಯುಮಾಲಿನ್ಯ ತಪಾಸಣೆಗೆ ಬರುವ ವಾಹನಗಳ ದಾಖಲೆ ಪರಿಶೀಲನೆ, ಹಳೇ ದಂಡ ಪಾವತಿ ಬಾಕಿಯಿದ್ದಲ್ಲಿ, ಅದರ ವಸೂಲಾತಿ ಮುಂದುವರಿಯಲಿದೆ.
ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಹೆಚ್ಚಾಗಿ ಜಾರಿಗೆ ತಂದರೆ, ಇದರಿಂದ, ಹಣ ತೆಗೆದುಕೊಂಡು ರಿಸಿಟ್ ಕೊಡುವುದಿಲ್ಲ ಎನ್ನುವ ಆಪಾದನೆಯಿಂದಲೂ ಹೊರಗೆ ಬರಬಹುದು. ಜೊತೆಗೆ, ಪೊಲೀಸ್ ಸಿಬ್ಬಂದಿಗಳ ಸುರಕ್ಷತೆಯಿಂದಲೂ ಇದು ಯೋಗ್ಯ ನಿರ್ಧಾರವಾಗಲಿದೆ.












Click it and Unblock the Notifications