ಯಶವಂತಪುರ ಮಾರುಕಟ್ಟೆ ಸ್ಥಳಾಂತರಕ್ಕೆ ಒತ್ತಡ: ವರ್ತಕರ ಆಕ್ರೋಶ
ಬೆಂಗಳೂರು, ಫೆಬ್ರವರಿ 13 : ಯಶವಂತಪುರ ಎಪಿಎಂಸಿ ಆಡಳಿತ ಮಂಡಳಿಯು ಈರುಳ್ಳಿ ಹಾಗೂ ಆಲೂಗಡ್ಡೆ ವ್ಯಾಪಾರಿಗಳನ್ನು ದಾಸನಪುರ ಮಾರುಕಟ್ಟೆಗೆ ಸ್ಥಳಾಂತರಿಸಲು ಮುಂದಾಗಿದ್ದಾರೆ. 30 ಮಳಿಗೆಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದೆ ಎಂದು ವರ್ತಕರು ಆರೋಪಿಸಿದ್ದಾರೆ.
ದಾಸನಪುರ ಮಾರುಕಟ್ಟೆಗೆ ಸ್ಥಳಾಂತರವಾಗುವಂತೆ ಈರುಳ್ಳಿ ಮತ್ತು ಆಲೂಗಡ್ಡೆ ವರ್ತಕರಿಗೆ ಎಪಿಎಂಸಿ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಮಳಿಗೆಗಳ ಪರವಾನಗಿ ನವೀಕರಿಸದೆ ಕಿರುಕುಳ ನೀಡುತ್ತಿದ್ದಾರೆ. ಆದರೆ, ಬಿಡಿಎ ಪ್ರದೇಶದ 70 ಮಳಿಗೆಗಳ ಪೈಕಿ 30 ಮಳಿಗೆಗಳನ್ನು ತಮಗೆ ಬೇಕಾದವರಿಗೆ ಅಕ್ರಮವಾಗಿ ಹಂಚಿದ್ದಾರೆ ಎಂದು ವರ್ತಕರು ದೂರಿದ್ದಾರೆ.
ಈಗಿರುವ ಆಡಳಿತ ಮಂಡಳಿಯ ಅಧಿಕಾರಾವಧಿ ಫೆ.24ರಂದು ಮುಗಿಯಲಿದೆ. ಎಪಿಎಂಸಿ ಯಾರ್ಡ್ ನಲ್ಲಿದ್ದ ಬಿಡಿಎ ಪ್ರದೇಶದ ಮಳಿಗೆಗಳ ಅಕ್ರಮ ಹಂಚಿಕೆ ಹಗರಣ ಮುಚ್ಚಿಹಾಕಲು, ಬಾಕಿ 29 ಮಳಿಗೆಗಳನ್ನು ಗುತ್ತಿಗೆ ಮತ್ತು ಮಾರಾಟ ನಿಯಮದ ಆಧಾರದಲ್ಲಿ ವಿತರಿಸಲು ಮುಂದಾಗಿದೆ.
ಜನವರಿ 29ರಂದು ಟೆಂಡರ್ ಪ್ರಕಟಣೆ ಹೊರಡಿಸಿದ್ದು, ಫೆ.21ರಂದು ಬಹಿರಂಗ ಹರಾಜು ನಡೆಸುತ್ತಿದೆ ಎಂದು ವರ್ತಕರು ಆರೋಪ ಮಾಡಿದ್ದಾರೆ. ಒಂದೊಂದು ಮಳಿಗೆಗೆ 10 ಲಕ್ಷ ರೂ ನಿಂದ 20 ಲಕ್ಷದವರೆಗೂ ಹಣ ಪಡೆದು ಗುಟ್ಟಾಗಿ ಹಂಚಿದ್ದಾರೆ. ಇದನ್ನು ರದ್ದುಪಡಿಸಬೇಕೆಂದು ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದೇವೆ, ರದ್ದುಪಡಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ವರ್ತಕರು ತಿಳಿಸಿದ್ದಾರೆ.