ಶಾಂತಿಯುತವಾಗಿ ನಡೆದ ವಿ. ವಿ. ಪುರಂ ಬೆಳ್ಳಿತೇರು ಬ್ರಹ್ಮರಥೋತ್ಸವ
ಬೆಂಗಳೂರು, ನವೆಂಬರ್ 29; ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಬೆಂಗಳೂರಿನ ವಿ. ವಿ. ಪುರಂನ ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ ಶಾಂತಿಯುತವಾಗಿ ನಡೆಯಿತು.
ಮಂಗಳವಾರ ನಡೆದ ವಿ. ವಿ. ಪುರಂ ವಾರ್ಡ್ನ ಸಜ್ಜನ್ ರಾವ್ ವೃತ್ತದಲ್ಲಿರುವ ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯದ ಬೆಳ್ಳಿ ತೇರಿನಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಪ್ರತಿ ವರ್ಷ ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿಯಂದು ಶ್ರೀ ಸುಬ್ರಮಣ್ಯ ಸ್ವಾಮಿ ಬೆಳ್ಳಿ ತೇರಿನ ಉತ್ಸವ ನಡೆಯುತ್ತದೆ. ಚಿಕ್ಕಪೇಟೆಯ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಬಿಜೆಪಿ ಮುಖಂಡರು, ಕಾರ್ಯಕರ್ತರ ಜೊತೆ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯದ ರಥೋತ್ಸವದ ಹಿನ್ನಲೆಯಲ್ಲಿ ಹಿಂದೂಪರ ಹೋರಾಟಗಾರರನ್ನು ಪೊಲೀಸರು ರಾತ್ರಿಯೇ ವಶಕ್ಕೆ ಪಡೆದಿದ್ದರು. ರಥೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂದು ಹಿಂದೂಪರ ಸಂಘಟನೆಗಳು ಆಗ್ರಹಿಸಿದ್ದವು.
ಆದ್ದರಿಂದ ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯದ ರಥೋತ್ಸವ ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ದಂಗಲ್ಗೆ ಕಾರಣವಾಗಬಹುದು ಎಂದು ಅಂದಾಜಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಬಸವನಗುಡಿ ಠಾಣೆ ಪೊಲೀಸರು ಬಸವನಗುಡಿಯಲ್ಲಿರುವ ರಾಷ್ಟ್ರ ರಕ್ಷಣಾ ಪಡೆಯ ಕಚೇರಿಗೆ ತೆರಳಿ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಸೇರಿದಂತೆ ಇತರರನ್ನು ವಶಕ್ಕೆ ಪಡೆದಿದ್ದರು.
ಪ್ರದಕ್ಷಿಣೆ ಹಾಕಿದ ಗುರುಡ; ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯದ ರಥೋತ್ಸವದ ಸಂದರ್ಭದಲ್ಲಿ ವಾಡಿಕೆಯಂತೆ ಗರುಡ ಪಕ್ಷಿ ಸುಬ್ರಮಣ್ಯ ರಥ ಮತ್ತು ದೇವಾಲಯವನ್ನು ಪ್ರದಕ್ಷಿಣೆ ಹಾಕಿ ಗೋಪುರದ ಮೇಲೆ ಕುಳಿತುಕೊಂಡಿತು.
ಗರುಡ ಪಕ್ಷಿಯನ್ನು ಕಂಡ ಭಕ್ತರು ಆಕಾಶದತ್ತ ನೋಡಿ ಕೈ ಮುಗಿದರು. ನಂತರ ದೇವಾಲಯದಲ್ಲಿ ವಿವಿಧ ಸೇವೆಗಳು ಆರಂಭವಾದವು. ಬೆಳ್ಳಿ ರಥದಲ್ಲಿ ಶ್ರೀ ಸುಬ್ರಮಣ್ಯ ಸ್ವಾಮಿ ವಿಗ್ರಹವನ್ನು ಇಟ್ಟ ಬಳಿಕ ರಥೋತ್ಸವಕ್ಕೆ ಚಾಲನೆ ಸಿಕ್ಕಿತು.
ಸಾವಿರಾರು ಭಕ್ತರು ಬೆಳ್ಳಿಯ ರಥವನ್ನು ಎಳೆದರು. ರಥ ಸಜ್ಜನ್ರಾವ್ ವೃತ್ತದ ಮುಕ್ಕಾಲು ಭಾಗ ಸಂಚರಿಸಿತು. ರಥವನ್ನು ಅಲ್ಲಿಗೆ ನಿಲ್ಲಿಸಲಾಗಿದೆ. ರಾತ್ರಿ 8.30ಕ್ಕೆ ಮತ್ತೆ ರಥವನ್ನು ಎಳೆದು ದೇವಾಲಯಕ್ಕೆ ತಂದು ನಿಲ್ಲಿಸಲಾಗುತ್ತದೆ.
ವ್ಯಾಪಾರಕ್ಕೆ ಅವಕಾಶ ನೀಡುವ ವಿವಾದ; ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯದ ರಥೋತ್ಸವದಲ್ಲಿ ಅನ್ಯಧರ್ಮೀಯರ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ವಿವಾದದ ಬಗ್ಗೆ ಶಾಸಕ ಉದಯ್ ಗರುಡಾಚಾರ್ ಪ್ರತಿಕ್ರಿಯೆ ನೀಡಿದರು.
"ಒಂದು ದಿನ ವ್ಯಾಪಾರ ಮಾಡಿ ಕುಟುಂಬವನ್ನು ಸಾಕುತ್ತಾರೆ. ನಾವು ಯಾಕೆ ಅವರ ಹೊಟ್ಟೆಮೇಲೆ ಹೊಡೆಯಬೇಕು?. ದರ್ಗಾ ಬಳಿ ಹಿಂದೂಗಳು ಸಹ ವ್ಯಾಪಾರ ಮಾಡಬಹುದು" ಎಂದು ಹೇಳಿದರು.
"ಇಂದು ರಥೋತ್ಸವ ಸಂಭ್ರಮದಿಂದ ನಡೆಯಿತು. ನಾನೂ ಸಹ ಭಾಗವಹಿಸಿದ್ದೆ. ಹಿಂದೂಗಳು ಯಾವತ್ತೂ ಯಾರಿಗೂ ತೊಂದರೆ ಕೊಡದಿರುವ ಸಮುದಾಯವಾಗಿದೆ. ಕೆಲವು ಹುಡುಗರು ಮಾತ್ರ ಗೊಂದಲ ಉಂಟು ಮಾಡಿದ್ದಾರೆ" ಎಂದರು.












Click it and Unblock the Notifications