ನಾಳೆಯೇ ನನಸಾಗಲಿದೆ ಬೆಂಗಳೂರಿಗರ ದೊಡ್ಡ ಕನಸು! ಏನದು?
ಉದ್ಯಾನನಗರಿ ಬೆಂಗಳೂರಿಗರ ಹಲವು ವರ್ಷಗಳ ಕನಸೊಂದು ನಾಳೆ ಸಾಕಾರಗೊಳ್ಳಲಿದೆ. ಬೇಸಿಗೆ ಬಂದರೆ ನೀರಿನ ಅಭಾವ ಎದುರಿಸುತ್ತಿದ್ದ ಬೆಂಗಳೂರಿಗೆ ಇನ್ನು ಜಲಬಾಧೆಯಿಂದ ದೂರ ಇರಲಿದೆ. ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾದ 110 ಹಳ್ಳಿಗಳಲ್ಲಿನ 50 ಲಕ್ಷ ಜನರ ಕುಡಿಯುವ ನೀರಿನ ದಾಹವನ್ನು ನೀಗಿಸುವ ಕಾವೇರಿ ಐದನೇ ಹಂತದ ಕುಡಿಯುವ ನೀರಿನ ಯೋಜನೆಗೆ ರಾಜ್ಯ ಸರ್ಕಾರ ನಾಳೆ ಚಾಲನೆ ನೀಡಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್, ಕಳೆದ ಬೇಸಿಗೆಯಲ್ಲಿ ಬೆಂಗಳೂರು ಭೀಕರ ಜಲಕ್ಷಾಮಕ್ಕೆ ತುತ್ತಾಗಿತ್ತು. ಇನ್ನು ಮುಂದಿನ ದಿನಗಳಲ್ಲಿ ಬರಗಾಲದಂತಹ ಪರಿಸ್ಥಿತಿಗಳು ಬೆಂಗಳೂರನ್ನು ಕಾಡಬಾರದು ಎಂಬ ನಿಟ್ಟಿನಲ್ಲಿ ʻಮನೆಮನೆಗೂ ಕಾವೇರಿ ನೀರು ಇದು ಸಮೃದ್ಧ ಬೆಂಗಳೂರುʼ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಇದೇ ಅಕ್ಟೋಬರ್ 16ರಂದು (ನಾಳೆ) ಕಾವೇರಿ 5ನೇ ಹಂತದ ಯೋಜನೆಗೆ ತೊರೆಕಾಡನಹಳ್ಳಿಯಲ್ಲಿ ಚಾಲನೆ ನೀಡಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಕಾವೇರಿ ಐದನೇ ಹಂತದ ಯೋಜನೆಯು ಬರೋಬ್ಬರಿ 50 ಲಕ್ಷ ಜನರ ಬದುಕನ್ನು ಹಸನಾಗಿಸಲಿದೆ ಎಂದಿದ್ದಾರೆ.
ಇದರಿಂದ ದಶಕಗಳಿಂದ ಜನರು ಅನುಭವಿಸುತ್ತಿರುವ ನೀರಿನ ಸಮಸ್ಯೆಗೆ ಮುಕ್ತಿ ಸಿಗಲಿದೆ. ʻಮನೆಮನೆಗೂ ಕಾವೇರಿ ನೀರು ಇದು ಸಮೃದ್ಧ ಬೆಂಗಳೂರುʼ ಎಂಬ ಧ್ಯೇಯದೊಂದಿಗೆ, ಈ ಯೋಜನೆಗೆ ತೊರೆಕಾಡನಹಳ್ಳಿಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ನಾನು ಜೊತೆಯಾಗಿ ಚಾಲನೆ ನೀಡಲಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಜಲಸಮೃದ್ಧ ಬೆಂಗಳೂರಿಗಾಗಿ ಮನೆಮನೆಗೂ ಕಾವೇರಿ ನೀರು ಪೂರೈಸುವ ಮಹತ್ವದ ಗುರಿಯೊಂದಿಗೆ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿಯಲ್ಲಿ ಈ ಯೋಜನೆ ಲೋಕಾರ್ಪಣೆಗೊಳ್ಳುತ್ತಿದೆ. ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಿಗೆ ಈ ಯೋಜನೆಯು ಕುಡಿಯುವ ನೀರನ್ನು ಪೂರೈಸಲಿದೆ. ಬನ್ನಿ, ಎಲ್ಲರೂ ಜೊತೆಗೂಡಿ ಈ ಐತಿಹಾಸಿಕ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳೋಣ ಎಂದು ಕರೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಕೂಡ, ಬೆಂಗಳೂರು ನಗರದ 110 ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸುವ 4,336 ಕೋಟಿ ರೂಪಾಯಿ ವೆಚ್ಚದ ಕಾವೇರಿ ಐದನೇ ಹಂತದ ನೀರು ಸರಬರಾಜು ಯೋಜನೆ ನಾಳೆ ಉದ್ಘಾಟನೆಯಾಗಲಿದೆ. ಸುಮಾರು 50 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಮಹತ್ವಾಕಾಂಕ್ಷೆಯೊಂದಿಗೆ ಆರಂಭಿಸಲಾದ ಈ ಯೋಜನೆಯು ನಮ್ಮ ಸರ್ಕಾರದ ಬದ್ಧತೆ ಮತ್ತು ಕಾರ್ಯದಕ್ಷತೆಯಿಂದಾಗಿ ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಬೆಂಗಳೂರು ನಗರದ ಪ್ರತಿ ಮನೆಗೂ ಕಾವೇರಿ ನೀರು ಕಲ್ಪಿಸುವ ನಮ್ಮ ಸಂಕಲ್ಪದ ಈಡೇರಿಕೆಗೀಗ ಕ್ಷಣಗಣನೆ ಆರಂಭಗೊಂಡಿದೆ. 50 ಲಕ್ಷ ಫಲಾನುಭವಿಗಳಿಗೆ ನಾಳೆಯಿಂದ ಕಾವೇರಿ ನೀರು ಲಭ್ಯವಾಗಲಿದೆ. ಈ ಬೃಹತ್ ಯೋಜನೆ ಬೆಂಗಳೂರಿಗರ ಬದುಕಿಗೆ ನೆಮ್ಮದಿ ಒದಗಿಸುವುದು ನಿಶ್ಚಿತ. ನಾಳೆ ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸಂಭ್ರಮದಲ್ಲಿ ಪಾಲುದಾರರಾಗಬೇಕೆಂದು ಈ ಮೂಲಕ ಕೋರುತ್ತೇನೆ ಎಂದು ಸಿಎಂ ಹೇಳಿದ್ದಾರೆ.












Click it and Unblock the Notifications