ಆರೋಗ್ಯ ಭಾಗ್ಯ ಯೋಜನೆಗೆ ಸಂಪುಟ ಅಸ್ತು, ಏನಿದು ಯೋಜನೆ?
ಬೆಂಗಳೂರು, ಆಗಸ್ಟ್ 28 : '' ಖಾಸಗಿ ಆಸ್ಪತ್ರೆಗಳಲ್ಲಿ ಮೊದಲು ರೋಗಿಗಳಿಗೆ ಟ್ರೀಟ್ ಮೆಂಟ್ ನಂತರವೇ ಪೇಮೆಂಟ್'' ಎಂಬ ಘೋಷ ವಾಕ್ಯದೊಂದಿಗೆ ರಾಜ್ಯ ಸರ್ಕಾರದ ಮಹತ್ವದ ಆರೋಗ್ಯ ಭಾಗ್ಯ ಯೋಜನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ರಾಜ್ಯದ 1.40 ಕೋಟಿ ಕುಟುಂಬಗಳಿಗೆ ಸರ್ಕಾರಿ ಮತ್ತು ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಮೊದಲು ಚಿಕಿತ್ಸೆ ಬಳಿಕ ಪಾವತಿ ವಾಕ್ಯದಡಿಯಲ್ಲಿ ಸರ್ವರಿಗೂ ಆರೋಗ್ಯ ರಕ್ಷಣೆ ಒದಗಿಸುವ ಆರೋಗ್ಯ ಭಾಗ್ಯ ಯೋಜನೆಯನ್ನು ನವೆಂಬರ್ 1 ರಿಂದ ಜಾರಿಗೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು (ಆ.28) ನಡೆದ ರಾಜ್ಯ ಸಚಿವ ಸಂಪುಟಯಲ್ಲಿ ನಿರ್ಧರಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ. ಬಿ. ಜಯಚಂದ್ರ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆರೋಗ್ಯ ಕಾರ್ಡ್ ಗೆ ಆಧಾರ್ ಜೋಡಣೆ
ಸಚಿವ ಸಂಪುಟ ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ. ಬಿ. ಜಯಚಂದ್ರ ಅವರು, "ರಾಜ್ಯದ 1.40 ಕೋಟಿ ಕುಟುಂಬಗಳು ಆರೋಗ್ಯ ಕಾರ್ಡ್ ಗೆ ಆಧಾರ್ ಜೋಡಣೆ ಮಾಡಿದ ಬಳಿಕ ಸರ್ಕಾರಿ ಮತ್ತು ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅರ್ಹರಾಗುತ್ತಾರೆ.

ಆರೋಗ್ಯ ಭಾಗ್ಯ ನವೆಂಬರ್ 1 ರಿಂದ ಜಾರಿಗೆ
ಆರೋಗ್ಯ ಭಾಗ್ಯ ಯೋಜನೆಯನ್ನು ನವೆಂಬರ್ 1 ರಿಂದ ಜಾರಿಗೆ ತರಲು ನಿರ್ಧರಿಸಲಾಗಿದ್ದು, ಈ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ವಿವಿಧ ಇಲಾಖೆ ಮತ್ತು ಹಣಕಾಸು ಸಚಿವಾಲಯದ ಜತೆಗೆ ಸಮಾಲೋಚನೆ ನಡೆಸಿ ಅಂತಿಮ ಅಧಿಸೂಚನೆಯನ್ನು ಆರೋಗ್ಯ ಇಲಾಖೆ ಸದ್ಯದಲ್ಲೇ ಪ್ರಕಟಿಸಲಿದೆ ಎಂದುಸಚಿವ ಟಿ. ಬಿ. ಜಯಚಂದ್ರ ಹೇಳಿದರು.

ಈ ಯೋಜನೆಯ ವ್ಯಾಪ್ತಿಗೆ ಒಳಪಡುವವರು
ರೈತ ಕುಟುಂಬದವರು, ಶಿಕ್ಷಕರು, ಅನುದಾನಿತ ಶಾಲೆಯ ಶಿಕ್ಷಕರು, ಅಂಗನವಾಡಿ ಆಶಾ ಕಾರ್ಯಕರ್ತೆಯರು, ಬಿಸಿ ಊಟ ಕಾರ್ಯಕ್ರಮದ ಕಾರ್ಯಕರ್ತೆಯರು, ಇತರ ವರ್ಗದವರು, ಅಸಂಘಟಿತ ಕಾರ್ಮಿಕರು, ಆಟೋ ಚಾಲಕರು, ಕೂಲಿಗಳು, ಗಣಿ ಕಾರ್ಮಿಕರು, ಕಸ ಸಂಗ್ರಹಣಾಕಾರರು, ನಿರ್ಮಾಣ ಕಾರ್ಮಿಕರು, ನೇಕಾರರು, ಪೌರ ಕಾರ್ಮಿಕರು, ನರೇಗಾ ಯೋಜನೆಯ ಕಾರ್ಮಿಕರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಪ್ರಾಣಿಯ ದಾಳಿಗೆ ಬಲಿಯಾದವರು, ಮಾಧ್ಯಮದವರು, ಸಹಕಾರ ಸಂಘ-ಸಂಸ್ಥೆಗಳ ಸದಸ್ಯರು, ಸರ್ಕಾರಿ ನೌಕರರು ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ.

ಹಣ ಪಾವತಿಸಿ ಈ ಯೋಜನೆಯ ಲಾಭ ಪಡೆಯಬಹುದು
ಈ ಯೋಜನೆಯ ವ್ಯಾಪ್ತಿಗೆ ಒಳಪಡದ ಇತರೆ ವರ್ಗದ 30 ಲಕ್ಷ ಕುಟುಂಬದವರೂ ಕೂಡಾ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಲ್ಲಿ ತಲಾ 300 ರು. ಹಾಗೂ ನಗರ ಪ್ರದೇಶದಲ್ಲಿ 700 ರು. ವಾರ್ಷಿಕ ವಿಮಾ ಕಂತು ಪಾವತಿಸಿ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.












Click it and Unblock the Notifications