ಬೆಂಗಳೂರು ಮಳೆ; ಮುಂಜಾಗ್ರತಾ ಕ್ರಮ ಕೈಗೊಳ್ಳದ ಸರ್ಕಾರದ ಬೇಜವಾಬ್ದಾರಿ ಪ್ರವಾಹಕ್ಕೆ ಕಾರಣ- ಸಿದ್ದರಾಮಯ್ಯ
ಬೆಂಗಳೂರು, ಸೆ.13: ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮಂಗಳವಾರ ವಿಧಾನಸಭಾ ಅಧಿವೇಶನದಲ್ಲಿ ಕಳೆದ ಕೆಲವು ದಿನಗಳೊಂದ ರಾಜ್ಯಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ಜನತೆ ಎದುರಿಸಿದ ಕಷ್ಟ ನಷ್ಟಗಳು ಹಾಗೂ ಜನರ ನೆರವಿಗೆ ಸಕಾಲದಲ್ಲಿ ಧಾವಿಸದ ಸರ್ಕಾರದ ವೈಫಲ್ಯಗಳ ಕುರಿತು ಮಾತನಾಡಿದರು.
"ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಜನರು ಕಷ್ಟ ನಷ್ಟಕ್ಕೆ ಈಡಾಗಿದ್ದಾರೆ. ಪ್ರವಾಹ ಪರಿಸ್ಥಿತಿ ಎದುರಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳದ ಸರ್ಕಾರದ ಬೇಜವಾಬ್ದಾರಿ ಇಷ್ಟಕ್ಕೆಲ್ಲ ಕಾರಣ. ಈ ಹಿಂದೆ ಪ್ರವಾಹ ಬಂದಾಗಲೂ ನಾನು ಸರ್ಕಾರಕ್ಕೆ ಅನೇಕ ಸಲಹೆ ಸೂಚನೆಗಳನ್ನು ನೀಡಿದ್ದೆ, ಅದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದರೆ ಪರಿಸ್ಥಿತಿ ಇಷ್ಟು ಹದಗೆಡುತ್ತಿರಲಿಲ್ಲ" ಎಂದರು.
'ಹವಾಮಾನ ತಜ್ಞರು ಮುಂದಿನ ದಿನಗಳಲ್ಲಿ ಹವಾಮಾನ ಬದಲಾವಣೆಯಿಂದ ರಾಜ್ಯ ಭೀಕರವಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಮುನ್ನೆಚ್ಚರಿಕೆಯನ್ನು ಈ ಹಿಂದೆಯೇ ಕೊಟ್ಟಿದ್ದಾರೆ' ಎಂದು ಉಲ್ಲೇಖಿಸಿದರು.

ರಾಜಕಾಲುವೆಗಳ ಒತ್ತುವರಿ, ಚಿಕ್ಕ ಕಾಲುವೆಗಳು ಪ್ರವಾಹಕ್ಕೆ ಕಾರಣ
"ಬೆಂಗಳೂರಿನ ಅನೇಕ ಕಡೆಗಳಲ್ಲಿ ಪ್ರವಾಹ ವೀಕ್ಷಣೆಗೆ ಹೋದಾಗ ಜನ ತಮಗೆ ನ್ಯಾಯಯುತ ಪರಿಹಾರ ಕೊಡಿಸಿ ಎಂದು ನನ್ನಲ್ಲಿ ಮನವಿ ಮಾಡಿದ್ದಾರೆ. ಇಲ್ಲಿ ಮಳೆ ಬಂದಾಗ ಸಮಸ್ಯೆ ಉಂಟಾಗಲು ಮುಖ್ಯ ಕಾರಣ ರಾಜಕಾಲುವೆಗಳ ಒತ್ತುವರಿ ಮತ್ತು ಚಿಕ್ಕ ಗಾತ್ರದ ಕಾಲುವೆಗಳು ಇರುವುದು. ಸರ್ಕಾರ ಇವುಗಳನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಒತ್ತುವರಿ ತೆರವು ಮತ್ತು ಕಾಲುವೆಗಳ ಅಗಲೀಕರಣ ಮಾಡಬೇಕು" ಎಂದರು.
"ಒತ್ತುವರಿ ಮಾಡಿಕೊಂಡಿರುವ ಒತ್ತುವರಿದಾರರಿಗೆ ಕ್ರಯಕ್ಕೆ ಮನೆ ನೀಡುವ ಕಾನೂನನ್ನು ಸರ್ಕಾರ ಮಾಡಿದೆ. ಇದರಿಂದ ಅಕ್ರಮಕ್ಕೆ ಸರ್ಕಾರ ನೆರವು ನೀಡಿದಂತೆ ಆಗುತ್ತದೆ. ನಮ್ಮ ಸರ್ಕಾರದ ಅವಧಿಯಲ್ಲಿ ಒಟ್ಟು 1953 ಒತ್ತುವರಿ ಪ್ರಕರಣಗಳನ್ನು ಪತ್ತೆಮಾಡಿ, 1300 ಒತ್ತುವರಿಗಳನ್ನು ತೆರವು ಮಾಡಿದ್ದೆವು. ಉಳಿದ 653 ಒತ್ತುವರಿಗಳ ತೆರವು ಕಾರ್ಯ ಪೂರ್ಣಗೊಂಡಿದ್ದರೆ ಇಷ್ಟು ದೊಡ್ಡ ಪ್ರಮಾಣದ ಹಾನಿ ಆಗುತ್ತಿರಲಿಲ್ಲ. ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಸಂಪರ್ಕ ಇಲ್ಲ, ಕೆರೆಗಳಲ್ಲಿ ಹೂಳು ತುಂಬಿಕೊಂಡಿದೆ ಹೀಗಾಗಿ ಮಳೆ ಬಂದಾಗ ಸಮಸ್ಯೆ ಉಂಟಾಗುತ್ತದೆ" ಎಂದು ತಿಳಿಸಿದರು.

ಹೊಸದಾಗಿ ಸೇರಿದ ಕಡೆ ಚರಂಡಿ, ರಾಜಕಾಲುವೆಯಿಲ್ಲ
"2007 ಕ್ಕೂ ಮೊದಲು ಬೆಂಗಳೂರು ನಗರದ ವ್ಯಾಪ್ತಿ 225 ಚ.ಕಿ.ಮೀ ಇತ್ತು, ನಂತರ 225 ಹಳ್ಳಿಗಳನ್ನು ಸೇರಿಸಿದ್ದರಿಂದ 800 ಚ.ಕಿ.ಮೀ ಆಯಿತು. ಇದರಿಂದ ಹೊಸದಾಗಿ ಸೇರಿದ ಹಳ್ಳಿಗಳಿಗೆ ಕುಡಿಯುವ ನೀರು, ಚರಂಡಿ, ರಾಜಕಾಲುವೆ ಯಾವು ಇಲ್ಲ ಹೀಗಾಗಿ ಸಮಸ್ಯೆ ಉಂಟಾಗುತ್ತಿದೆ. ಬೆಂಗಳೂರು ನಗರದಲ್ಲಿ ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸುವಂತೆ ರಾಜ್ಯದ ಹೈಕೋರ್ಟ್ ಎಷ್ಟು ಬಾರಿ ಛೀಮಾರಿ ಹಾಕಿದೆ ಎಂಬುದನ್ನು ನಾನು ಬಿಡಿಸಿ ಹೇಳಲು ಹೋಗುವುದಿಲ್ಲ. ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು, ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿ ಮಾಡದೆ ಹೋದರೆ ನಗರದ ಮೆರುಗಿಗೆ ಧಕ್ಕೆಯಾಗುತ್ತದೆ." ಎಂದು ಸಿದ್ದರಾಮಯ್ಯ ಹೇಳಿದರು.

ಸರ್ಕಾರದ ಸಚಿವರೊಬ್ಬರು ಕಂಪನಿಗಳಿಗೆ ಧಮಕಿ ಹಾಕಿದ್ದಾರೆ!
"ಐಟಿ, ಬಿಟಿ ಯವರು ತಮಗೆ ಮಳೆಯಿಂದಾಗಿ 250 ಕೋಟಿ ನಷ್ಟವಾಗಿದೆ, ಮೂಲಸೌಕರ್ಯ ಸುಧಾರಣೆಯಾಗದೆ ಹೋದರೆ ನಾವು ಕಂಪನಿಗಳನ್ನು ಬೇರೆ ಕಡೆಗೆ ಸ್ಥಳಾಂತರಿಸುತ್ತೇವೆ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ, ಇದಕ್ಕೆ ಸರ್ಕಾರದ ಸಚಿವರೊಬ್ಬರು ಕಂಪನಿಗಳಿಗೆ ಧಮಕಿ ಹಾಕಿದ್ದಾರೆ. ಇಂಥದ್ದು ಮುಂದೆ ಆಗಬಾರದು. ರಾಜ್ಯ ಸರ್ಕಾರ ಪ್ರವಾಹ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಮುಂದೆ ನಿಂತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು" ಎಂದು ಒತ್ತಾಯಿಸಿದರು.

ಹೆದರಿ ಮನೆಯಲ್ಲಿ ಕೂರುವ ಜಾಯಮಾನ ನನ್ನದಲ್ಲ
"ನಾನು ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಿದ್ದೆ, ಕೊಡಗಿನ ಡಿ.ಸಿ ಕಚೇರಿ ಬಳಿ 7.5 ಕೋಟಿ ರೂಪಾಯಿ ಖರ್ಚು ಮಾಡಿ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ, ಈ ತಡೆಗೋಡೆ ನಿರ್ಮಾಣ ಹಂತದಲ್ಲಿ ಬಿದ್ದು ಬಿದ್ದಿದೆ. ಕೊಡಗಿನ ರೈತರ ಕಷ್ಟ ಕೇಳಲು ಹೋಗುತ್ತಿದ್ದೆ, ಈ ಸಂದರ್ಭದಲ್ಲಿ ನನ್ನ ಮೇಲೆ ಕಲ್ಲು, ಮೊಟ್ಟೆ ಎಸೆದು ಕಪ್ಪು ಬಾವುಟ ಪ್ರದರ್ಶನ ಮಾಡಲಾಯಿತು. ಸರ್ಕಾರದ ಭ್ರಷ್ಟಾಚಾರ, ಅಪ್ರಯೋಜಕತೆಯನ್ನು ನೋಡದಂತೆ ತಡೆಯಲು ಪ್ರಯತ್ನಿಸಲಾಯಿತು. ಇಂಥದಕ್ಕಿಲ್ಲ ಹೆದರಿ ಮನೆಯಲ್ಲಿ ಕೂರುವ ಜಾಯಮಾನ ನನ್ನದಲ್ಲ. ಅಗತ್ಯ ಬಿದ್ದರೆ ನಾಳೆಯೇ ಮತ್ತೆ ಕೊಡಗಿಗೆ ಬರಲು ನಾನು ಸಿದ್ಧನಿದ್ದೇನೆ. ಜನರನ್ನು ಬಿಟ್ಟು ಕಲ್ಲು ಹೊಡೆಸುವ ಅಪ್ಪಚ್ಚು ರಂಜನ್, ಬೋಪಯ್ಯರಂಥ ನಾಯಕರಿಂದ ಕೊಡಗಿನ ಗೌರವಕ್ಕೆ ಧಕ್ಕೆಯಾಗುತ್ತಿದೆ. ನಾಚಿಕೆಯಾಗಬೇಕು" ಎಂದು ಕಿಡಿಕಾರಿದರು.












Click it and Unblock the Notifications