ಪ್ರೇಯಸಿಯ ನಿಶ್ಚಿತಾರ್ಥಕ್ಕೆ ಹುಳಿ ಹಿಂಡಿ ಮದುವೆ ಕ್ಯಾನ್ಸಲ್ ಮಾಡಿದ ಮಾಜಿ ಪ್ರಿಯಕರ
ಬೆಂಗಳೂರು ಡಿ. 20: ಯುವತಿಯ ಮದುವೆ ನಿಶ್ಚಿತಾರ್ಥಕ್ಕೆ ಹುಳಿ ಹಿಂಡಿದ ಹಳೇ ಲವ್ವರ್! ಮದು ಮಗನ ಮೊಬೈಲ್ ಗೆ ವಿಡಿಯೋ ಕಳುಹಿಸಿ ಮಾಜಿ ಪ್ರೇಯಸಿ ಬದುಕನ್ನು ಬೀದಿಗೆ ತಂದ ಮಾಜಿ ಪ್ರಿಯಕರ. ಇಂಜಿನಿಯರ್ಗೆ ದಮ್ಕಿ ಹಾಕಿ ಜೈಲು ಸೇರಿದ ಆರ್ಟಿಐ ಕಾರ್ಯಕರ್ತ. ಎಳನೀರು ಕುಡಿಯಲು ಹೋಗಿ ಯಮನ ಪಾದ ಸೇರಿದ ಪಾದಚಾರಿ. ಇದು ಬೆಂಗಳೂರು ಅಪರಾಧ ಲೋಕದ ವಿವರ.
ಪ್ರೇಯಸಿ ನಿಶ್ಚಿತಾರ್ಥ ಮುರಿದ ಪ್ರಿಯಕರ:
ಸುಬ್ರಮಣ್ಯಪುರದ ನಿವಾಸಿ ಪೂಜಾ ಎಂಬಾಕೆಗೆ ಮದುವೆ ನಿಶ್ಚಿತಾರ್ಥ ನಿಗದಿಯಾಗಿತ್ತು. ಇನ್ನೇನು ನಿಶ್ಚಿತಾರ್ಥ ಮುಗಿಸಿ ದಾಂಪತ್ಯ ಬದುಕಿಗೆ ಪ್ರವೇಶ ಮಾಡಬೇಕಿತ್ತು. ನಿಶ್ಚಿತಾರ್ಥ ಮುಗಿಯುವ ಮೊದಲೇ ಈ ಮದುವೆ ಸಂಬಂಧಕ್ಕೆ ಮಾಜಿ ಪ್ರಿಯಕರ ದಿಲೀಪ್ ಕುಮಾರ್ ಹುಳಿ ಹಿಂಡಿದಿದ್ದಾನೆ.
ಪೂಜಾಳನ್ನು ಪ್ರೀತಿ ಮಾಡುತ್ತಿದ್ದ ದಿಲೀಪ್ ಕುಮಾರ್ ಮದುವೆ ಮಾಡಿಕೊಳ್ಳಲು ಮುಂದಾಗಿದ್ದರು. ವ್ಯಾಸಂಗದ ಅವಧಿಯಲ್ಲಿ ಪೂಜಾ ಕ್ಲಾಸ್ ಮೇಟ್ ಆಗಿದ್ದ ದಿಲೀಪ್ ಕುಮಾರ್ನನ್ನು ಪೂಜಾ ಕೂಡ ಪ್ರೀತಿ ಮಾಡುತ್ತಿದ್ದರು. ಇಬ್ಬರು ಏಕಾಂತವಾಗಿ ಕಾಲ ಕಳೆದಿದ್ದರು. ಈ ವೇಳೆ ದಿಲೀಪ್ ಕುಮಾರ್ ಕೆಲವು ವಿಡಿಯೋ ಮತ್ತು ಫೋಟೋ ತೆಗೆದುಕೊಂಡು ರಹಸ್ಯವಾಗಿ ಇಟ್ಟುಕೊಂಡಿದ್ದಾನೆ. ಇತ್ತೀಚೆಗೆ ಇಬ್ಬರಲ್ಲಿ ಅದೇನು ಮನಸ್ತಾಪ ಮೂಡಿತ್ತೋ ಗೊತ್ತಿಲ್ಲ, ಇಬ್ಬರೂ ಪರಸ್ಪರ ಬೇರೆಯಾಗಿದ್ದರು. ಇದೇ ವೇಳೆ ಪೂಜಾಳಿಗೆ ಮದುವೆ ಮಾಡಲು ಕುಟುಂಬ ತೀರ್ಮಾನಿಸಿ ಹುಡುಗನನ್ನು ನಿಶ್ಚಯ ಮಾಡಿದ್ದರು. ಮಾತುಕತೆ ನಡೆದು ನಿಶ್ಚಿತಾರ್ಥ ಕೂಡ ನಿಗದಿ ಮಾಡಲಾಗಿತ್ತು.

ಈ ವಿಷಯ ತಿಳಿದ ದಿಲೀಪ್ ಕುಮಾರ್ ಮದುವೆ ಆಗುವಂತೆ ದಿಲೀಪ್ ಕುಮಾರ್ ಪೀಡಿಸಿದ್ದಾನೆ. ಇದಕ್ಕೆ ಪೂಜಾ ನಿರಾಕರಿಸಿದ್ದಾಳೆ. ನೀನು ನನ್ನನ್ನು ಮದುವೆಯಾಗಿದ್ದರೆ ನಮ್ಮ ಹಳೇ ಪ್ರೀತಿಯ ವಿಡಿಯೋ ಮತ್ತು ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ. ಇದ್ಯಾವುದಕ್ಕೂ ಪೂಜಾ ಕಿವಿಕೊಟ್ಟಿಲ್ಲ. ಮನೆ ಮುಂದೆ ಹೋಗಿ ಜಗಳ ಮಾಡಿ ಮದುವೆ ಮಾಡಿಕೊಳ್ಳದಿದ್ದರೆ ನಿನ್ನನ್ನು ರೇಪ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇಷ್ಟಾಗಿಯೂ ನಿಶ್ಚಿತಾರ್ಥ ದಿನ ಸಮೀಪಿಸುತ್ತಿತ್ತು. ಈ ವೇಳೆ ಪೂಜಾಳನ್ನು ಮದುವೆಯಾಗಲು ಮುಂದಾಗಿದ್ದ ನವ ಮಧುಮಗನ ಮೊಬೈಲ್ಗೆ ಪೂಜಾಳ ಖಾಸಗಿ ವಿಡಿಯೋ ಹಾಗೂ ಪೋಟೋ ರವಾನಿಸಿದ್ದಾನೆ. ಈ ಪೋಟೋ ನೋಡಿ ಗಾಬರಿಯಾದ ಮಧುಮಗ ನಿಶ್ಚಿತಾರ್ಥ ರದ್ದು ಮಾಡಿ ಮದುವೆ ತಿರಸ್ಕರಿಸಿದ್ದಾನೆ.
ಇದರಿಂದ ಮಾನಸಿಕವಾಗಿ ನೊಂದ ಪೂಜಾ ದಿಲೀಪ್ ಕುಮಾರ್ ವಿರುದ್ಧ ದಕ್ಷಿಣ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಿಯಕರ ದಿಲೀಪ್ ಇದೀಗ ವಿಲನ್ ಆಗಿದ್ದು, ಪೊಲೀಸರು ಕೇಸು ದಾಖಲಿಸಿದ್ದಾರೆ.
ಇಂಜಿಯರ್ಗೆ ಧಮ್ಕಿ ಹಾಕಿ ಜೈಲು ಸೇರಿದ ಆರ್ಟಿಐ ಕಾರ್ಯಕರ್ತ:
ಸರ್ಕಾರಿ ಕಚೇರಿಯ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿ ನಿಂದನೆ ಮಾಡಿದ ಆರೋಪದಡಿ ಆರ್ಟಿಐ ಕಾರ್ಯಕರ್ತನನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರ್ಟಿಐ ಕಾರ್ಯಕರ್ತ, ಸೂರ್ಯವಾಯ್ಸ್ ಪತ್ರಿಕೆ ಸಂಪಾದಕ ಕೃಷ್ಣಮೂರ್ತಿ ಬಂಧಿತ ಆರೋಪಿ. ಕತ್ರಿಗುಪ್ಪೆ ವಾರ್ಡ್ ನಂ 163 ರ ಅಸಿಸ್ಟೆಂಟ್ ಇಂಜಿನಿಯರ್ ಶ್ವೇತಾ ಎಂಬುವರನ್ನು ಭೇಟಿ ಮಾಡಿದ್ದ ಕೃಷ್ಣಮೂರ್ತಿ, ಕೆಲವು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರಶ್ನಿಸಿದ್ದಾನೆ. ಈ ಮೊದಲು ಬಿಬಿಎಂಪಿ ವಾರ್ಡ್ ಕಚೇರಿಗೆ ಹೋಗುತ್ತಿದ್ದ ಕೃಷ್ಣಮೂರ್ತಿಗೆ ಬೇಕಾದ ಮಾಹಿತಿಯನ್ನು ಇಂಜಿನಿಯರ್ ನೀಡುತ್ತಿದ್ದರು. ಇದಕ್ಕೂ ಸಮಾಧಾನವಾಗದ ಕೃಷ್ಣಮೂರ್ತಿ ಪದೇ ಪದೇ ಕಚೇರಿಗೆ ಹೋಗಿ ಕಿರುಕುಳ ನೀಡುತ್ತಿದ್ದ. ಎರಡು ದಿನದ ಹಿಂದೆ ಕಚೇರಿಗೆ ಹೋಗಿ ಸಾರ್ವಜನಿಕರ ಮುಂದೆಯೇ ಇಂಜಿನಿಯರ್ ಶ್ವೇತಾ ಅವರಿಗೆ ನಿಂದಿಸಿ ಹೆದರಿಸಿದ್ದಾರೆ. ಇದರಿಂದ ಮನನೊಂದ ಶ್ವೇತಾ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಆರ್ಟಿಐ ಕಾರ್ಯಕರ್ತ ಕೃಷ್ಣಮೂರ್ತಿಯನ್ನು ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಎಳನೀರು ಕುಡಿಯಲು ಹೋಗಿ ಹೆಣವಾದ:
ರಸ್ತೆ ಬದಿ ಎಳನೀರು ಕುಡಿದು ರಸ್ತೆ ದಾಟುವಾಗ ಲಾರಿ ಡಿಕ್ಕಿ ಹೊಡೆದು ಪಾದಚಾರಿ ಸಾವನ್ನಪ್ಪಿದ್ದಾನೆ. ದೇವನಹಳ್ಳಿ ತಾಲೂಕಿನ ಬೆಟ್ಟಕೋಟೆ ನಿವಾಸಿ ಶಿವಪ್ರಸಾದ್ ಮೃತಪಟ್ಟವ. ಚನ್ನರಾಯಪಟ್ಟಣ ಠಾಣಾ ವ್ಯಾಪ್ತಿಯ ಬಾಲೆಪುರದಲ್ಲಿ ಈ ಘಟನೆ ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ದೇಹ ಎರಡು ಚಿತ್ರವಾಗಿದೆ. ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ. ಚನ್ನರಾಯಪಟ್ಟಣ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications