ಹೊಸ ಸಂದೇಶಗಳ ಹೊತ್ತು ಮತ್ತೆ ಬರಲಿದೆ ಚಿತ್ರಸಂತೆ!
ಬೆಂಗಳೂರು, ಜನವರಿ : ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತು ಚಿತ್ರ ಸಂತೆಗೆ ಸಜ್ಜಾಗುತ್ತಿದ್ದು, ಈ ಬಾರಿ ಪರಿಸರ ಸಂದೇಶ ಹಾಗೂ ಕರ್ನಾಟಕದ ಕಲಾ ಚಳವಳಿಗಳ ಮಾಹಿತಿ ಹೊತ್ತು ಬರಲಿದೆ.
ವರ್ಷಾರಂಭದ ಮೊದಲ ಭಾನುವಾರ (ಜ.7) ನಡೆಯುವ ಚಿತ್ರಸಂತೆಯು ಚಿತ್ತಾಕರ್ಷಕ ಚಿತ್ರ ಕಲಾಕೃತಿಗಳು ಕಲಾಸಕ್ತರ ಮನೆ-ಮನ ತುಂಬಿಕೊಳ್ಳಲು ಸಜ್ಜಾಗುತ್ತಿದೆ. ವೈವಿಧ್ಯಮಯ ಮಾದರಿಗಳ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ವೇದಿಕೆ ನಿರ್ಮಾಣ ವಾಗುತ್ತಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಹಲವು ವಿಶೇಷತೆಗಳನ್ನು ಹೊಂದಿದೆ.
ಕನ್ನಡದ ಹೆಮ್ಮೆಯ ವ್ಯಂಗ್ಯಚಿತ್ರಕಾರರ ಮನಸೆಳೆವ ಕಾರ್ಟೂನ್
ನಗರದ ಕುಮಾರಕೃಪಾ ರಸ್ತೆಯಲ್ಲಿ ಜನವರಿ 7 ರಂದು ಬೆಳಗ್ಗೆ 8 ರಿಂದ ರಾತ್ರಿ8 ರವರೆಗೆ ನಡೆಯುವ ಚಿತ್ರಸಂತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಸಾಹಿತಿ ಚಂದ್ರಶೇಖರ ಕಂಬಾರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ, ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜಾಫೆಟ್, ಕಲಾವಿದರು ಹಾಗೂ ಅಪಾರ ಸಂಖ್ಯೆಯಲ್ಲಿ ಕಲಾಸಕ್ತರು ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ ಕಲಾಚಳವಳಿ ಮಹತ್ವವನ್ನು ಸಾರುವ ಕಲಾಕೃತಿಗಳ ಪ್ರದರ್ಶನ
ಕರ್ನಾಟಕದ ಕಲಾ ಚಳವಳಿ: ಚಿತ್ರಸಂತೆಯಲ್ಲಿ ಈ ಬಾರಿ ಸ್ವಾತಂತ್ರ್ಯ ನಂತರದ ಕರ್ನಾಟಕದಲ್ಲಿ ಕಲೆ ಬೆಳೆದುಬಂದ ಹಾದಿಯನ್ನು ಪರಿಷಯಿಸಲಾಗುತ್ತಿದೆ. ಇದಕ್ಕಾಗಿ ಕಲಾ ಇತಿಹಾಸ ವಿಭಾಗವು ವಿಶೇಷವಾಗಿ ಸಂಯೋಜಿಸಿರುವ ಛಾಯಾಚಿತ್ರಗಳು, ಕಲಾಕೃತಿಗಳು, ಭಿತ್ತಿ ಪತ್ರಗಳು, ಪ್ರಾತ್ಯಕ್ಷಿಕೆ, ಸಾಕ್ಷ್ಯಚಿತ್ರಗಳ ಪ್ರದರ್ಶನಗೊಳ್ಳುತ್ತಿದೆ.
ಜತೆಗೆ ಕಲಾ ಚಳವಳಿ ಕುರಿತು ಚರ್ಚೆ ಸಹ ನಡೆಯಲಿದೆ. 50 ವರ್ಷಗಳಿಗೂ ಹೆಚ್ಚು ಕಾಲದ ಕಲಾಪರಂಪರೆಯನ್ನು ಪರಿಚಯಿಸಲಾಗುತ್ತಿದೆ.
ಪರಿಸರ ಜಾಗೃತಿ ಮೂಡಿಸುವ ಕಲಾಕೃತಿಗೆ ಒತ್ತು
ಪರಿಸರ ಜಾಗೃತಿ: ಜಾಗತೀಕರಣದ ಪ್ರಭಾವದಿಂದಾಗಿ ಜನರು ಪರಿಸರ ಉಳಿವಿನ ಬಗ್ಗೆ ನಿರಾಸಕ್ತರಾಗಿದ್ದಾರೆ. ಹೀಗಾಗಿ ಜನರಲ್ಲಿ ಪರಿಸರ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಬಾರಿ ಪರಿಸರ ಕುರಿತು ಕಲಾಕೃತಿಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಪರಿಸರ ಕಾಡು, ಬೆಟ್ಟ ಗುಡ್ಡ, ಸಮುದ್ರ ಹೀಗೆ ನಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಚಿತ್ರಸಂತೆ ಅರಿವು ಮೂಡಿಸಲಿದೆ.
ಮನೆಗೊಂದು ಕಲಾಕೃತಿ ಶೀರ್ಷಿಕೆಯಲ್ಲಿ ಚಿತ್ರಸಂತೆ
ಮನೆಗೊಂದು ಕಲಾಕೃತಿ: ಸಾಮಾನ್ಯರಿಗೂ ಕಲೆಯನ್ನು ತಲುಪಿಸಬೇಕು ಎಂಬ ಉದ್ದೇಶದಿಂದ ಪ್ರತಿ ವರ್ಷದಂತೆ ಮನೆಗೊಂದು ಕಲಾಕೃತಿ ಶೀರ್ಷಿಕೆಯಡಿ ಚಿತ್ರಸಂತೆ ನಡೆಯಲಿದೆ. ಸಾಮಾನ್ಯ ಕಲಾಸಕ್ತರಿಗೂ ಕೈಗೆಟಕುವ 50 ರೂ.ನಿಂದ 5 ಲಕ್ಷದವರೆಗೂ ಚಿತ್ರಗಳು ದೊರೆಯಲಿದೆ.
ಈ ಬಾರಿ ಚಿತ್ರಸಂತೆಯಲ್ಲಿ ಪಾಲ್ಗೊಳ್ಳಲು ದೇಶಾದ್ಯಂತ 3,500 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದೆ. ಸ್ಥಳಾವಕಾಶದ ಕೊರತೆಯಿಂದಾಗಿ ಅವುಗಳಲ್ಲಿ1,500 ಕಲಾವಿದರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತು ಅಧ್ಯಕ್ಷ ಬಿ.ಎಲ್. ಶಂಕರ್ ತಿಳಿಸಿದ್ದಾರೆ.ಮೂರು ದಶಕಗಳಿಗೂ ಹಿಂದಿನ ಕಲಾಕೃತಿಗಳ ಪ್ರದರ್ಶನ
ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಮೂರು ದಶಕಗಳಿಗೂ ಹೆಚ್ಚು ಹಳೆಯದಾದ ಅತ್ಯಮೂಲ್ಯ ಕಲಾಕೃತಿಗಳನ್ನು ಸಂಗ್ರಹಿಸಲಾಗಿದೆ. ಕಲಾವಿದರಾದ ಎಸ್.ಜಿ. ವಾಸುದೇವ್, ಬಿಕೆಎಸ್ ವರ್ಮಾ, ಕೆ.ಕೆ. ಹೆಬ್ಬಾರ್, ಜಯರಾಂ ಪಾಟೀಲ್, ಜೆ.ಎಸ್. ಖಂಡೇರಾವ್ ಸೇರಿದಂತೆ ದೇಶದ ಪ್ರಖ್ಯಾತ ಹಿರಿಯ ಕಲಾವಿದರು ಈವರೆಗೂ ಪ್ರದರ್ಶನ ಕಾಣದ ಅಪರೂಪದ 100 ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ.