ಬೆಂಗಳೂರು ಟೋಲ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರ
ಬೆಂಗಳೂರು, ಮೇ 8 : ವಿವಿಧ ಸಂಘಟನೆಗಳು ಮತ್ತು ವಾಹನ ಸವಾರರ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಕೆಂಪೇಗೌಡ ವಿಮಾನ ನಿಲ್ದಾಣ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಕೆಲವೊಂದು ರಿಯಾಯಿತಿಗಳನ್ನು ನೀಡಿದೆ. ಟೋಲ್ ಕಡಿಮೆ ಮಾಡುವ ಕುರಿತು ಕೇಂದ್ರ ಭೂ ಸಾರಿಗೆ ಸಚಿವರೊಂದಿಗೆ ಮಾತುಕತೆ ನಡೆಸಿ, ಮನವಿ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಟೋಲ್ ದರ ಕಡಿಮೆ ಮಾಡುವ ಕುರಿತು ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಸದ್ಯ ಟೋಲ್ ಸುತ್ತಮುತ್ತಲಿನ ಐದು ಕಿ.ಮೀ.ವ್ಯಾಪ್ತಿಯ ಜನರಿಗೆ ಟೋಲ್ ಶುಲ್ಕದಿಂದ ಸಂಪೂರ್ಣ ರಿಯಾಯಿತಿ ನೀಡಲಾಗಿದೆ ಎಂದರು. [ನಾಲ್ಕನೇ ದಿನಕ್ಕೆ ತಲುಪಿದ ಟೋಲ್ ಗಲಾಟೆ]

ದೇವನಹಳ್ಳಿ ಟೋಲ್ ಸುತ್ತ-ಮುತ್ತಲಿನ 40 ಕಿ.ಮೀ ವ್ಯಾಪ್ತಿಯೊಳಗಿನ ಸ್ಥಳೀಯರಿಗೆ ಮಾಸಿಕ 220 ರೂ.ನ ಮಾಸಿಕ ಪಾಸು ನೀಡಲಾಗುವುದು. ಟೋಲ್ ದರ ಇಳಿಕೆ ಬಗ್ಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು. ಇದರಿಂದ ಐದು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಟೋಲ್ ಸುತ್ತಮುತ್ತಲಿನ ಜನರಿಗೆ ಸಮಾಧಾನ ದೊರಕಿದಂತಾಗಿದೆ. [ಟೋಲ್ ದರವನ್ನು ಕೇಂದ್ರ ಸರ್ಕಾರ ಇಳಿಸಬೇಕು]
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಳೆದ ಶನಿವಾರ ಟೋಲ್ ದರವನ್ನು ಹೆಚ್ಚಳ ಮಾಡಿತ್ತು. ಹೊಸ ದರದಂತೆ 22 ಕಿ.ಮೀ ಮಾರ್ಗದ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಒಂದು ಬಾರಿ ಪ್ರಯಾಣಿಸಲು ಕಾರು, ಜೀಪು, ಹಗುರ ವಾಹನಗಳು 75 ರೂ., ಲಘು ವಾಣಿಜ್ಯ ವಾಹನ ಹಾಗೂ ಮಿನಿ ಬಸ್ಸುಗಳು 120 ರೂ., ಬಸ್, ಲಾರಿ ಹಾಗೂ ಎರಡು ಆ್ಯಕ್ಸಲ್ ವಾಹನಗಳು 235, ಮೂರರಿಂದ ಆರು ಆ್ಯಕ್ಸಲ್ ವಾಹನಗಳು 380 ರೂ. ಹಾಗೂ ಜೆಸಿಬಿಯಂತಹ ಬೃಹತ್ ಗಾತ್ರದ ವಾಹನಗಳು 470 ರೂ. ಶುಲ್ಕ ಪಾವತಿ ಮಾಡಬೇಕಾಗಿತ್ತು.
ಈ ಮಾರ್ಗದಲ್ಲಿ ಸರ್ವೀಸ್ ರಸ್ತೆಯೂ ಇಲ್ಲದ ಕಾರಣ ಟೋಲ್ ಗೇಟ್ ಸುತ್ತಮುತ್ತಲಿನ ಜನರು ಮಾರ್ಗದಲ್ಲಿ ಸಂಚರಿಸುವಾಗ ದುಬಾರಿ ಟೋಲ್ ಕಟ್ಟುವುದು ಅನಿವಾರ್ಯವಾಗಿತ್ತು. ಸದ್ಯ ಸರ್ಕಾರದ ನಿರ್ಧಾರದಿಂದ ಗ್ರಾಮಸ್ಥರಿಗೆ ಸಮಾಧಾನ ಸಿಕ್ಕಿದೆ. ವಾಹನ ಸವಾರರ ಪರದಾಟ ಮುಂದುವರೆದಿದೆ.












Click it and Unblock the Notifications