ರಾಷ್ಟ್ರ ರಾಜಕಾರಣದಲ್ಲಿ ಭಾರಿ ಬದಲಾವಣೆ: ಕೆಸಿಆರ್ ಕೊಟ್ಟ ಮುನ್ಸೂಚನೆ ಏನು?
ಬೆಂಗಳೂರು: ಶೀಘ್ರದಲ್ಲೇ ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ಆಗಲಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿಯಾದ ನಂತರ ಕೆಲವೇ ತಿಂಗಳಲ್ಲಿ ದೊಡ್ಡ ಸುದ್ದಿ ನೀಡುವುದಾಗಿ ತಿಳಿಸಿದ್ದಾರೆ.
ಮಾಜಿ ಪ್ರಧಾನಿಯನ್ನು ಭೇಟಿಯಾದ ನಂತರ ಮಾತನಾಡಿದ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು, "ಭಾಷಣ ಮಾಡುವುದನ್ನು ಮತ್ತು ಸುಳ್ಳು ಭರವಸೆ ನೀಡುವುದನ್ನು ಮೊದಲು ನಿಲ್ಲಿಸಿ, ದೇಶದ ಪರಿಸ್ಥಿತಿ ಹದಗೆಡುತ್ತಿದೆ. ಆರ್ಥಿಕತೆ ಕುಸಿಯುತ್ತಿದೆ, ರೈತರು, ದಲಿತರು ಮತ್ತು ಆದಿವಾಸಿಗಳು ತೊಂದರೆಗೊಳಗಾಗಿದ್ದಾರೆ" ಎಂದು ಹೇಳಿದರು.
ದೇವೇಗೌಡರನ್ನು ಭೇಟಿ ಮಾಡಿದ ತೆಲಂಗಾಣ ಸಿಎಂ ಕೆಸಿಆರ್: ತೃತೀಯ ರಂಗದ ಕನಸು
2024 ರ ರಾಷ್ಟ್ರೀಯ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ತೃತೀಯ ರಂಗವನ್ನು ಬಲಪಡಿಸುವ ಪ್ರಯತ್ನದಲ್ಲಿ ಕೆಸಿಆರ್ ಅವರು ದೇಶಾದ್ಯಂತ ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗುತ್ತಿದ್ದಾರೆ.
ರಾಷ್ಟ್ರ ರಾಜಕೀಯದಲ್ಲಿ ಬದಲಾವಣೆ
'" ಹೆಚ್.ಡಿ.ದೇವೇಗೌಡ ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಎಲ್ಲವನ್ನು ಚರ್ಚಿಸಿದ್ದೇನೆ. ರಾಷ್ಟ್ರಮಟ್ಟದಲ್ಲಿ ಬದಲಾವಣೆ ಆಗಲಿದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಭಾರತ ಬದಲಾಗುತ್ತದೆ, ಭಾರತ ಬದಲಾಗಬೇಕು. ದೇಶದ ಪರಿಸ್ಥಿತಿ ಬದಲಾಯಿಸಲು ನಾವು ಎಲ್ಲ ಪ್ರಯತ್ನ ಮಾಡಬೇಕು" ಎಂದು ಕೆ ಚಂದ್ರಶೇಖರ್ ರಾವ್ ಹೇಳಿದರು.
ಪ್ರಧಾನಿ ಮೋದಿ ಮಾಡಿದ ಕುಟುಂಬ ರಾಜಕೀಯ ಟೀಕೆಗೆ ತೆಲುಗು ರಾಷ್ಟ್ರ ಸಮಿತಿ (ಟಿಸಿಆರ್) ಪಕ್ಷದ ವಕ್ತಾರ ಪ್ರತಿಕ್ರಿಯೆ ನೀಡಿದ್ದು, " ಪ್ರಧಾನಿ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ, ಕುಟುಂಬ ರಾಜಕಾರಣದಲ್ಲಿ ನಂಬಿಕೆ ಇಲ್ಲದವರು ಭಾರತದ ಕ್ರಿಕೆಟ್ ಮಂಡಳಿಯಲ್ಲಿರುವ ಅಮಿತ್ ಶಾ ಪುತ್ರ ಜಯ್ ಶಾ, ರಾಜನಾಥ್ ಸಿಂಗ್ ಮತ್ತು ಅವರ ಮಗನನ್ನೂ ಉಚ್ಛಾಟಿಸಬೇಕು" ಎಂದಿದ್ದಾರೆ.
ಮೋದಿ ಭೇಟಿ ತಪ್ಪಿಸಿಕೊಂಡ ಕೆಸಿಆರ್
ಪ್ರಧಾನಿ ಮೋದಿ ಹೈದರಾಬಾದ್ಗೆ ಆಗಮಿಸುವ ಕೆಲವೇ ಗಂಟೆಗಳ ಮೊದಲು ಕೆಸಿಆರ್ ಬೆಂಗಳೂರಿಗೆ ಆಗಮಿಸಿದರು. ಕಳೆದ ನಾಲ್ಕು ತಿಂಗಳಲ್ಲಿ ಪ್ರಧಾನಿ ಮೋದಿ ತೆಲಂಗಾಣ ಭೇಟಿ ವೇಳೆ ಎರಡನೇ ಬಾರಿ ಪ್ರಧಾನಿ ಭೇಟಿಯನ್ನು ತಪ್ಪಿಸಿಕೊಂಡಿದ್ದಾರೆ. ಕಳೆದ ಬಾರಿ ಸಂತ ರಾಮಾನುಜಾಚಾರ್ಯರ ದೈತ್ಯ ಪ್ರತಿಮೆಯನ್ನು ಅನಾವರಣಗೊಳಿಸುವ ಸಂದರ್ಭದಲ್ಲಿ ಭೇಟಿ ನೀಡಿದ ವೇಳೆ ಅನಾರೋಗ್ಯ ಕಾರಣ ನೀಡಿ ಪ್ರಧಾನಿ ಭೇಟಿಯನ್ನು ತಪ್ಪಿಸಿಕೊಂಡಿದ್ದರು.
ಸ್ವಾತಂತ್ಯ್ರ ಬಂದು 75 ವರ್ಷವಾದರೂ ಸಮಸ್ಯೆ ಮುಗಿದಿಲ್ಲ
"ದೇಶ ಸ್ವಾತಂತ್ಯ್ರದ 75 ವರ್ಷಗಳ ಅಮೃತ ಮಹೋತ್ಸವ ಆಚರಿಸುತ್ತಿದೆ. ಆದರೆ ಇಂದಿಗೂ ದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ, ಕೃಷಿಗಾಗಿ ನೀರಿನ ಸಮಸ್ಯೆಯಿಂದ ನರಳುತ್ತಿದ್ದೇವೆ. ಮುಂದಿನ ಚುನಾವಣೆಯಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆ ಎಂದು ಹೇಳಲಾರೆ, ಆದರೆ ಭಾರತಕ್ಕೆ ಭವ್ಯವಾದ ಭವಿಷ್ಯವಿದೆ ಎಂದು ಹೇಳಬಲ್ಲೆ" ಎಂದು ಕೆಸಿಆರ್ ತಿಳಿಸಿದ್ದಾರೆ.
ದೇಶದ ಹಲವು ರಾಜ್ಯಗಳ ಪ್ರಮುಖ ವಿರೋಧ ಪಕ್ಷದ ಮುಖಂಡರನ್ನು ಭೇಟಿ ಮಾಡುತ್ತಿರುವ ಕೆಸಿಆರ್ ಇತ್ತೀಚೆಗೆ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರನ್ನು ಭೇಟಿ ಮಾಡಿದ್ದರು.
(ಒನ್ಇಂಡಿಯಾ ಸುದ್ದಿ)
Recommended Video