ಬೆಂಗಳೂರು : ಅಪಾರ್ಟ್ಮೆಂಟ್ನಲ್ಲಿ ಮಹಿಳಾ ಟೆಕ್ಕಿ ಹತ್ಯೆ
ಬೆಂಗಳೂರು, ಜನವರಿ 21 : ಲ್ಯಾಪ್ಟಾಪ್ ಚಾರ್ಜರ್ ವೈರ್ನಿಂದ ಕುತ್ತಿಗೆ ಬಿಗಿದು ಸಾಫ್ಟ್ವೇರ್ ಇಂಜಿನಿಯರ್ ವೊಬ್ಬರನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಾಡುಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಮೃತಪಟ್ಟವರನ್ನು ಐಬಿಎಂ ಉದ್ಯೋಗಿ ಕುಸುಮಾ ರಾಣಿ ಸಿಂಗ್ಲಾ (31) ಎಂದು ಗುರುತಿಸಲಾಗಿದೆ. ಪಂಜಾಬ್ ಮೂಲದ ಕುಸುಮಾ ರಾಣಿ ಅವರು, ಕಾಡುಗೋಡಿ ಸಮೀಪದ ಮಹಾವೀರ್ ಕಿಂಗ್ಸ್ ಪ್ಲೇಸ್ ಅಪಾರ್ಟ್ಮೆಂಟ್ನಲ್ಲಿ ದೆಹಲಿ ಮೂಲದ ನಿಧಿ ಶರ್ಮಾ ಅವರ ಜೊತೆ ವಾಸವಾಗಿದ್ದರು. [ಬೆಂಗಳೂರಿನ ಟೆಕ್ಕಿಯನ್ನು ಗುಂಡಿಕ್ಕಿ ಕೊಂದ ಕರೀಂನಗರ ಪೊಲೀಸರು!]

ಮೊದಲು ಕಂಪೆನಿಯ ನೋಯ್ಡಾ ಶಾಖೆಯಲ್ಲಿದ್ದ ಕುಸುಮಾ ರಾಣಿ ಅವರು ಆರು ತಿಂಗಳ ಹಿಂದೆ ವೈಟ್ಫೀಲ್ಡ್ ಶಾಖೆಗೆ ವರ್ಗಾವಣೆಗೊಂಡಿದ್ದರು. ಮಂಗಳವಾರ ಕೆಲಸಕ್ಕೆ ರಜೆ ಹಾಕಿದ್ದ ಕುಸುಮಾ ಅವರು ಮನೆಯಲ್ಲಿದ್ದರು. ಸಂಜೆ 7.30ರ ಸುಮಾರಿಗೆ ನಿಧಿ ಶರ್ಮಾ ಅವರು ಮನೆಗೆ ವಾಪಸ್ ಆದಾಗ ಕುಸುಮಾ ಮೃತದೇಹ ಪತ್ತೆಯಾಗಿದೆ. [ಚೆನ್ನೈ ಪ್ರವಾಹದಿಂದ ಬದುಕುಳಿದು ಬಂದ ಮೈಸೂರು ಟೆಕ್ಕಿ]
ಪರಿಚಿತರಿಂದಲೇ ಕೊಲೆ? : ಮಂಗಳವಾರ ಮಧ್ಯಾಹ್ನ 12.30ರ ಸುಮಾರಿಗೆ ವ್ಯಕ್ತಿಯೊಬ್ಬರು ಕುಸುಮಾ ಅವರನ್ನು ಕೇಳಿಕೊಂಡು ಅಪಾರ್ಟ್ಮೆಂಟ್ಗೆ ಬಂದಿದ್ದರು ಎಂದು ಅಲ್ಲಿನ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಆಗ ಕುಸುಮಾ ಅವರು ಮನೆಯಲ್ಲಿರಲಿಲ್ಲ. [ಬೆಂಗಳೂರು : ಯುವಕರಿಗೆ ಬುದ್ಧಿವಾದ ಹೇಳಿದ ಟೆಕ್ಕಿ ಕೊಲೆ]
ಮಧ್ಯಾಹ್ನ 1 ಗಂಟೆ ಸುಮಾರಿಗೆ ವಾಪಸ್ ಆದ ಕುಸುಮಾ ಅವರು ಆತನನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಮಧ್ಯಾಹ್ನ 3 ಗಂಟೆಗೆ ಆ ವ್ಯಕ್ತಿ ಅಪಾರ್ಟ್ಮೆಂಟ್ನಿಂದ ಹೊರಹೋಗಿದ್ದಾನೆ. ನಂತರ ಕುಸುಮಾ ಅವರ ಮನೆಗೆ ಯಾರೂ ಆಗಮಿಸಿಲ್ಲ ಎಂದು ಭದ್ರತಾ ಸಿಬ್ಬಂದಿ ಪೊಲೀಸರಿಗೆ ಹೇಳಿದ್ದಾರೆ.
ಕುಸುಮಾ ಅವರ ಕುತ್ತಿಗೆಗೆ ಲ್ಯಾಪ್ಟಾಪ್ ಚಾರ್ಜ್ರ್ ವೈರ್ ಬಿಗಿದು ಕೊಲೆ ಮಾಡಲಾಗಿದೆ. ಆದರೆ, ಮನೆಯ ಯಾವುದೇ ವಸ್ತು ಕಳವಾಗಿಲ್ಲ. ಮನೆಯಲ್ಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿಲ್ಲ. ಆದ್ದರಿಂದ, ಪರಿಚಿತರೇ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಠಾಣೆಗೆ ದೂರು ನೀಡಿದ್ದರು : ಪತಿಯಿಂದ ವಿಚ್ಛೇದನ ಪಡೆದಿದ್ದ ಕುಸುಮಾ ಅವರು ಮತ್ತೊಂದು ವಿವಾಹವಾಗಲು ಶಾದಿ ಡಾಟ್ ಕಾಂ ಸೇರಿದಂತೆ ಇತರ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ಗಳಲ್ಲಿ ಸ್ವವಿವರಗಳನ್ನು ಪ್ರಕಟಿಸಿದ್ದರು. ಶಾದಿ ಡಾಟ್ ಕಾಂ ಮೂಲಕ ಪರಿಚಿತರಾದ ವ್ಯಕ್ತಿಯೊಬ್ಬರು ಮದುವೆ ಆಗುವುದಾಗಿ ನಂಬಿಸಿ, ಹಣದ ಸಹಾಯ ಪಡೆದು ವಂಚಿಸಿದ್ದಾರೆ ಎಂದು ಕುಸುಮಾ ಡಿ.30ರಂದು ಕಾಡುಗೋಡಿ ಪೊಲೀಸರಿಗೆ ದೂರು ನೀಡಿದ್ದರು.
ಇದೇ ವ್ಯಕ್ತಿ ಕುಸುಮಾ ಅವರನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಪಾರ್ಟ್ಮೆಂಟ್ ಸಿಸಿಟಿವಿ ದೃಶ್ಯಾವಳಿಗಳನ್ನು ಕಾಡುಗೋಡಿ ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications