ಡಿವಿಡೆಂಟನ್ನು ಬ್ಯಾಂಕಿಗೆ ಹಿಂತಿರುಗಿಸಿ, ವಿದ್ಯಾರ್ಥಿಗಳಿಗೆ ನೆರವಾದರು
ಬೆಂಗಳೂರು, ಜುಲೈ 15 2018: ರಾಜ್ಯದ ಸಹಕಾರ ಬ್ಯಾಂಕುಗಳಲ್ಲಿ ವರ್ಷದಿಂದ ವರ್ಷಕ್ಕೆ ಆರ್ಥಿಕ ಪ್ರಗತಿ ಕಾಣುತ್ತಾ ಬಂದಿರುವ ಸ್ವರ್ಣ ಭಾರತಿ ಸಹಕಾರ ಬ್ಯಾಂಕ್ ವತಿಯಿಂದ ಈ ಬಾರಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪುರಸ್ಕರಿಸಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಪಿ ಎಲ್ ವೆಂಕಟರಾಮ ರೆಡ್ಡಿ ಮಾತನಾಡಿ, ಪುರಸ್ಕಾರಗಳು ವಿದ್ಯಾರ್ಥಿಗಳಲ್ಲಿ ಹೊಸದನ್ನು ಸಾಧಿಸುವ ಉತ್ಸಾಹವನ್ನು ಹೆಚ್ಚಿಸುತ್ತವೆ ಎಂದರು. ಸ್ವರ್ಣ ಭಾರತಿ ಬ್ಯಾಂಕ್ನ ವತಿಯಿಂದ ಪ್ರತಿವರ್ಷ ಪ್ರತಿಭಾ ಪುರಸ್ಕಾರ ಮಾಡುತ್ತಾ ಬಂದಿದ್ದೇವೆ. ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪಾರಿತೋಷಕಗಳನ್ನು ನೀಡಲಾಗುತ್ತಿದೆ ಎಂದರು.

ಏಕಾಗ್ರತೆಯಿಂದ ಗುರಿಯನ್ನು ಮುಟ್ಟಲು ಸಾಧ್ಯ. ಅದೇ ರೀತಿ ವಿದ್ಯಾರ್ಥಿಗಳು ಅಂಕಗಳನ್ನು ಪಡೆಯುವ ಜೊತೆಯಲ್ಲಿಯೇ ಜೀವನದ ಸಾಮಾನ್ಯ ಜ್ಞಾನವನ್ನು ಪಡೆದುಕೊಳ್ಳುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಸಾಮಾನ್ಯವಾಗಿ ಬ್ಯಾಂಕ್ ಷೇರುಗಳಿಂದ ಪಡೆದ ಡಿವಿಡೆಂಟನ್ನು ಚಾಚೂ ತಪ್ಪದೆ ಸ್ವೀಕರಿಸುವ ಗ್ರಾಹಕರನ್ನು ನೋಡಿದ್ದೇವೆ. ಆದರೆ, ಸ್ವರ್ಣಭಾರತಿ ಬ್ಯಾಂಕಿನ ಸದಸ್ಯರು ತಮ್ಮ ಡಿವಿಡೆಂಟನ್ನು ಸುಮಾರು 25 ಲಕ್ಷರೂಪಾಯಿಗಳಷ್ಟು ಬ್ಯಾಂಕಿಗೆ ವಾಪಾಸ್ ನೀಡಿದ್ದಾರೆ. ಅಲ್ಲದೆ, ಬ್ಯಾಂಕು ಸ್ವಂತ ಕಟ್ಟಡ ಹೊಂದಲು ಸಹಕಾರ ನೀಡಿದ್ದು ಬಹಳ ಸಂತಸದ ವಿಷಯವಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಪಿ ಎಲ್ ವೆಂಕಟರಾಮ ರೆಡ್ಡಿ ಹೇಳಿದರು.

ಕಾರ್ಯಕ್ರಮದಲ್ಲಿ ಸ್ವರ್ಣ ಭಾರತಿ ಬ್ಯಾಂಕಿನ ನಿರ್ದೇಶಕರುಗಳಾದ ಟಿ ಎನ್ ಚೌಡಪ್ಪ, ಎಂ ತಿಬ್ಬೇಗೌಡ, ಕೆ ನರಸಿಂಹಮೂರ್ತಿ, ಡಿ ಸತೀಶ್ ಬಾಬು, ಜೆ.ಪಿ. ಎಸ್ ಗೌಡ, ಡಾ. ಡಿ.ಬಿ ಬಸವೇಗೌಡ, ಆರ್ ಹರೀಶ್, ಬಿ.ಎಸ್ ಕೀರ್ತಿಕುಮಾರ್, ಡಾ. ಲತಾ ನಾರಾಯಣ್, ಎನ್ ನಾಗರಾಜ್, ಕೆ ನಾರಾಯಣಸ್ವಾಮಿ, ಬಿ. ನಾಗರಾಜ್, ಶ್ರೀಮತಿ ಲಕ್ಷ್ಮೀ ರೆಡ್ಡಿ, ಶ್ರೀ. ಜಿ.ಎಂ ರವೀಂದ್ರ, ಎಸ್ ನಾಗರಾಜಯ್ಯ, ಡಿ.ವಿಶ್ವನಾಥ್, ಸಿ ವೆಂಕಟೇಶ್, ಎಸ್ ಸದಾನಂದ, ಕು. ಸುಷ್ಮಾ ವಿ ಎಸ್ ಹಾಗೂ ಸದಸ್ಯರು ಭಾಗವಹಿಸಿದ್ದರು.












Click it and Unblock the Notifications