ಮರೆಯಾದ ಮಾನವೀಯತೆ, ಮಕ್ಕಳ ಕಳ್ಳ ಎಂದು ಮಾನಸಿಕ ಅಸ್ವಸ್ಥನಿಗೆ ಥಳಿತ
ಬೆಂಗಳೂರು, ಸೆಪ್ಟೆಂಬರ್ 7: ಇತ್ತೀಚಿನ ದಿನಗಳಲ್ಲಿ ಮಕ್ಕಳ ಕಳ್ಳತನ ಸುದ್ದಿ ಎಲ್ಲೆಡೆ ಹೆಚ್ಚಾಗಿದೆ ಅದೆಷ್ಟು ಸತ್ಯ ಎನ್ನುವುದು ಯಾರಿಗೂ ಗೊತ್ತಿಲ್ಲ ಆದರೆ ಮಕ್ಕಳ ಕಳ್ಳನೆಂದು ಭಾವಿಸಿ ಅಮಾಯಕರನ್ನು ಬಲಿ ತೆಗೆದುಕೊಳ್ಳಲಾಗುತ್ತಿದೆ ಎನ್ನುವುದು ಕೂಡ ಸತ್ಯ.
ಒಮ್ಮೆ ಉಡುಪಿಯಲ್ಲಿ ಮಕ್ಕಳ ಕಳ್ಳನೆಂದು ಮಾನಸಿಕ ಅಸ್ವಸ್ಥನನ್ನು ಸಾರ್ವಜನಿಕರು ಥಳಿಸಿದ್ದ ಘಟನೆ ವರದಿಯಾಗಿತ್ತು, ಇದೀಗ ಬೆಂಗಳೂರಿನಲ್ಲಿಯೂ ಅಂಥದ್ದೇ ಘಟನೆಯೊಂದು ನಡೆದಿದೆ.
ಮಕ್ಕಳ ಕಳ್ಳನೆಂದು ತಿಳಿದು ಅಮಾಯಕನನ್ನು ಸಾಮೂಹಿಕವಾಗಿ ಥಳಿಸಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಪಟಾಲಮ್ಮ ಲೇಔಟ್ ನಲ್ಲಿ ನಡೆದಿದೆ.

ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಅಮಾಯಕನನ್ನು ರಕ್ಷಿಸಿದ್ದಾರೆ. ಹಾಗಾದರೆ ನಡೆದ ಘಟನೆ ಏನೆಂದು ನೋಡುವುದಾದರೆ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದ. ಕನ್ನಡ ಮಾತನಾಡಲು ಬಾರದ ಈಶಾನ್ಯ ಭಾರತ ಮೂಲದ ವ್ಯಕ್ತಿಯೊಬ್ಬ ಕಾಡುಗೋಡಿಯ ಪಟಾಲಮ್ಮ ಲೇಔಟ್ ನ ಮನೆಯೊಂದರ ಆವರಣದಲ್ಲಿ ನುಗ್ಗಿದ್ದ, ಮಾಸಿದ ಬಟ್ಟೆ, ಕೆದರಿದ್ದ ತಲೆಕೂದಲು ಮತ್ತು ಆತನ ಆಕಾರವನ್ನು ನೋಡಿದ ಕೆಲವರು, ಈತನನ್ನು ಮಕ್ಕಳ ಕಳ್ಳ ಎಂದು ಭ್ರಮಿಸಿದ್ದರು.
ತಕ್ಷಣ ಅವರವರೇ ಮಾತನಾಡಿಕೊಂಡು ಸಂಘಟಿತರಾಗಿ ಆತನನ್ನು ಹಿಡಿದು ಮರಕ್ಕೆ ಕಟ್ಟಿಹಾಕಿ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಸುಳ್ಳು ಸುದ್ದಿ ಸೃಷ್ಟಿಸಿ, ಕಾನೂನು ಕೈಗೆತ್ತಿಕೊಂಡು ಹಲ್ಲೆ ನಡೆಸಿದ ಆರೋಪದ ಮೇಲೆ ರಾಜೇಶ್ ರಾಮಕೃಷ್ಣ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಯಾವುದೇ ಅಧಿಕೃತ ಮಾಹಿತಿ ಇಲ್ಲದೆ ಯಾರ ಮೇಲೂ ಹಲ್ಲೆಗೆ ಮುಂದಾಗಬಾರದು ಇದರಿಂದ ಎಷ್ಟೋ ಅಮಾಯಕರ ಜೀವ ಬಲಿಯಾಗುತ್ತದೆ. ಒಂದೊಮ್ಮೆ ಅಂತಹ ಅನುಮಾನ ಬಂದಲ್ಲಿ ತಕ್ಷಣ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ ಪೊಲೀಸರು ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ.












Click it and Unblock the Notifications