ಉಗ್ರಪ್ಪ ಅವರಿಗೆ ಸುರೇಶ್ ಕುಮಾರ್ ಫೇಸ್ಬುಕ್ನಲ್ಲಿ ತಿರುಗೇಟು
ಬೆಂಗಳೂರು, ಮೇ 15 : ಬೆಂಗಳೂರಿನಲ್ಲಿ ನಡೆಯುತ್ತಿರುವ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ವಿರುದ್ಧ ರಾಜಕೀಯ ನಾಯಕರ ಮಾತಿನ ಸಮರ ಮುಂದುವರೆದಿದೆ. 'ಕುಮಾರಸ್ವಾಮಿ ಮತ್ತು ಸುರೇಶ್ ಕುಮಾರ್ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡುತ್ತೇವೆ' ಎಂದು ಹೇಳಿದ್ದ ವಿ.ಎಸ್.ಉಗ್ರಪ್ಪ ಅವರಿಗೆ ಸುರೇಶ್ ಕುಮಾರ್ ತಿರುಗೇಟು ಕೊಟ್ಟಿದ್ದಾರೆ.
ಬುಧವಾರ ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಅವರು, 'ಒತ್ತುವರಿ ಕುರಿತು ವರದಿ ನೀಡಲು ರಚಿಸಿರುವ ಸದನ ಸಮಿತಿಯಲ್ಲಿರುವ ಸುರೇಶ್ ಕುಮಾರ್ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸದಿದ್ದರೆ ಹಕ್ಕುಚ್ಯುತಿ ಮಂಡಿಸಲಾಗುವುದು' ಎಂದು ಹೇಳಿದ್ದರು. [ಕೆರೆ ಒತ್ತುವರಿ ತೆರವು ಹೋರಾಟ ಆರಂಭಿಸಿದ ಬಿಜೆಪಿ]
ರಾಜಾಜಿನಗರ ಕ್ಷೇತ್ರದ ಶಾಸಕ ಸುರೇಶ್ ಕುಮಾರ್ ಫೇಸ್ಬುಕ್ ಉಗ್ರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. 'ನನ್ನ ಸ್ನೇಹಿತರಾದ ಶ್ರೀ ವಿ.ಎಸ್.ಉಗ್ರಪ್ಪ ನವರ ಕಾನೂನು ಪಾಂಡಿತ್ಯದ ಬಗ್ಗೆ ಅಪಾರ ಗೌರವವಿದೆ. ಭಾರತದ ಸಂವಿಧಾನದ ತಜ್ಞರಾಗಿರುವ ಅವರ ಆಳವಾದ ಜ್ಞಾನದ ಬಗ್ಗೆ ಮೆಚ್ಚುಗೆ ಇದೆ' ಎಂದು ಬರೆದಿದ್ದಾರೆ.
'ಬಡವರ, ಮಧ್ಯಮ ವರ್ಗದ ದನಿಯಾಗಿ ಕೆಲಸ ಮಾಡಿದ್ದಕ್ಕೆ ಜೈಲಿಗೆ ಕಳಿಸುವುದು ಉಗ್ರಪ್ಪನವರ ಉದ್ದೇಶವಾಗಿದ್ದರೆ, ಗೆಳೆಯ ಉಗ್ರಪ್ಪನವರೇ ನಾನು ಜೈಲುವಾಸಕ್ಕೆ ಸಿದ್ಧನಾಗಿದ್ದೇನೆ' ಎಂದು ಹೇಳಿದ್ದಾರೆ. [ಕೆರೆ ಒತ್ತುವರಿ ತೆರವು, ಕುಮಾರಸ್ವಾಮಿ ಹೇಳುವುದೇನು?]
'ಜೈಲಿಗೆ ಹೋಗಲು ನಾನು ಸಿದ್ಧವಾಗಿದ್ದೇನೆ'
'ಬಡವರ, ಮಧ್ಯಮ ವರ್ಗದ ದನಿಯಾಗಿ ಕೆಲಸ ಮಾಡಿದ್ದಕ್ಕೆ ಜೈಲಿಗೆ ಕಳಿಸುವುದು ಉಗ್ರಪ್ಪನವರ ಉದ್ದೇಶವಾಗಿದ್ದರೆ, ಗೆಳೆಯ ಉಗ್ರಪ್ಪನವರೇ ನಾನು ಜೈಲುವಾಸಕ್ಕೆ ಸಿದ್ಧನಾಗಿದ್ದೇನೆ. ಇದೇನು ಹೊಸದಲ್ಲ ಎಂಬುದು ತುರ್ತು ಪರಿಸ್ಥಿತಿಯ ದಿನಗಳಲ್ಲಿ ನನ್ನ ಸಹಬಂಧಿಯಾಗಿದ್ದ ಉಗ್ರಪ್ಪನವರಿಗೆ ಮರೆತಿದ್ದರೆ ನಾನು ಕನಿಕರಿಸುತ್ತೇನೆ'. ಎಂದು ಸುರೇಶ್ ಕುಮಾರ್ ಫೇಸ್ಬುಕ್ನಲ್ಲಿ ಬರೆದಿದ್ದಾರೆ.
'ಮನೆಗಳನ್ನು ಒಡೆದು ಹಾಕುವುದು ಹಕ್ಕುಚ್ಯುತಿಯಲ್ಲವೇ?'
'ಹೌದು, ಕುಮಾರಸ್ವಾಮಿಯವರು ಹಾಗೂ ನಾನು ಕೆರೆ ಒತ್ತುವರಿ ಕುರಿತು ವರದಿ ಕೊಡಲು ರಚಿತವಾಗಿರುವ ಸದನ ಸಮಿತಿಯಲ್ಲಿ ಸದಸ್ಯರು. ಅದರ ಕಲಾಪದಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದೇವೆ. ಸದನಸಮಿತಿ ವರದಿ ಹೊರಬರುವ ಮುನ್ನವೇ ಮನೆಗಳನ್ನು ಒಡೆದು ಹಾಕುವುದು ಹಕ್ಕುಚ್ಯುತಿಯಲ್ಲವೇ? ಎಂಬುದು ನಮ್ಮ ಹೆಸರಾಂತ ಕಾನೂನು ಪಂಡಿತರಿಗೆ ನನ್ನ ಪ್ರಶ್ನೆ'.
'ಕಷ್ಟಪಟ್ಟು ಕಟ್ಟಿದ ಮನೆ ಒಡೆಯುವುದು ಸರಿಯೇ?'
'ದಾಖಲೆಗಳನ್ನು ಪ್ರಾಮಾಣಿಕವಾಗಿ ನಂಬಿ, ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಪಾವತಿಮಾಡಿ, ಮನೆಕಟ್ಟಿ ತಮ್ಮದೊಂದು ಗೂಡಿನಲ್ಲಿ ವಾಸಮಾಡುತ್ತಿರುವ ಬಡ, ಮಧ್ಯಮವರ್ಗವನ್ನು ಬೀದಿಪಾಲು ಮಾಡುವುದು ಸರ್ವರಿಗೂ ಸಮ ಪಾಲು, ಸರ್ವರಿಗೂ ಸಮಬಾಳು ಎಂದು ಘೋಷಿಸಿದವರು ಮಾಡಿರುವ ಸಮಾಜದ ಹಕ್ಕುಚ್ಯುತಿಯಲ್ಲವೇ?'.
'ಕರ್ತವ್ಯಚ್ಯುತಿಯಲ್ಲವೇ'
'ಹೌದು. ಅಮಾಯಕ ಜನರ ರಕ್ಷಣೆಗೆ ಹೋಗುವುದು, ಅವರ ಅಳಲಿಗೆ ಸಾಂತ್ವನ ನೀಡುವುದು, ಅವರಿಗೆ ಧ್ವನಿಯಾಗಿ ನಿಲ್ಲುವುದು ಹಕ್ಕುಚ್ಯುತಿಯಾದರೆ, ನಾವು ಹಾಗೆ ಮಾಡದೆ ಉಗ್ರಪ್ಪನವರ ರೀತಿ ಸಮರ್ಥಿಸಿದ್ದರೆ ನಾವು ಕರ್ತವ್ಯಚ್ಯುತಿ ಎಸಗಿದಂತಾಗುತ್ತಿತ್ತು'. [ಸುರೇಶ್ ಕುಮಾರ್ ಫೇಸ್ ಬುಕ್ ಪುಟ]
ಎಷ್ಟು ಒತ್ತುವರಿ ತೆರವಾಗಿದೆ?
ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಅವರು ನೀಡಿರುವ ಮಾಹಿತಿಯಂತೆ ಸಾರಕ್ಕಿ, ಪುಟ್ಟೇನಹಳ್ಳಿ, ಜರಗನಹಳ್ಳಿ ಕೆರೆಯ 82.23 ಎಕರೆ ಪ್ರದೇಶದ ಪೈಕಿ 34.20 ಎಕರೆ ಒತ್ತುವರಿಯಾಗಿತ್ತು. ಶೇ.99ರಷ್ಟು ತೆರವುಗೊಳಿಸಲಾಗಿದೆ. ಬಾಣಸವಾಡಿ ಕೆರೆಯ 3 ಎಕರೆಯಲ್ಲಿ ನಿರ್ಮಿಸಿದ್ದ ವಾಣಿಜ್ಯ ಕಟ್ಟಡಗಳನ್ನು ತೆರವು ಮಾಡಲಾಗಿದೆ. ಚಿಕ್ಕಲಸಂದ್ರ ಕೆರೆ ಒತ್ತುವರಿ ತೆರವು ಸಂಬಂಧ ನೋಟಿಸ್ ನೀಡಲಾಗಿದೆ.