ಡಿಕೆ ಶಿವಕುಮಾರ್ ರನ್ನು ಬಿಜೆಪಿಗೆ ಸೆಳೆಯಲು ಯತ್ನಿಸಿಲ್ಲ: ಸುರೇಶ್ ಕುಮಾರ್
ಬೆಂಗಳೂರು, ಆಗಸ್ಟ್ 07: 'ಇಂಧನ ಸಚಿವ ಡಿಕೆಶಿಗೆ ಬಿಜೆಪಿ ಸೇರುವಂತೆ ಕೇಂದ್ರ ಸಚಿವರೊಬ್ಬರು ಆಹ್ವಾನ ನೀಡಿದ್ದರು. ಅದನ್ನು ತಿರಸ್ಕರಿಸಿದ್ದಕ್ಕೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಲಾಗಿದೆ' ಎಂದು ಕೆಲ ಮಾಧ್ಯಮಗಳಲ್ಲಿ ಬಂದಿರುವ ವರದಿಯನ್ನು ಶಾಸಕ ಸುರೇಶ್ ಕುಮಾರ್ ತಳ್ಳಿಹಾಕಿದ್ದಾರೆ. ಮಲ್ಲೇಶ್ವರಂನ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಈ ಸಂಬಂಧ ಕಾಂಗ್ರೆಸ್ ಆರೋಪ ಮಾಡುತ್ತಿರುವುದು ಸುಳ್ಳು ಆರೋಪ. ನಮ್ಮ ಪುಣ್ಯ ಮಾನ್ಸೂನ್ ನಿಧಾನ ಆಗೋದಕ್ಕೂ ಬಿಜೆಪಿ ಕಾರಣ ಅಂತ ಕಾಂಗ್ರೆಸ್ ಹೇಳಿಲ್ಲವೆಂದು ವ್ಯಂಗ್ಯವಾಡಿದರು.
ಐಟಿ ದಾಳಿ ನಡೆಯುತ್ತದೆ. ದಾಳಿ ತಪ್ಪಿಸಿಕೊಳ್ಳಬೇಕಾದರೆ ಬಿಜೆಪಿ ಸೇರಿ ಅಂತಾ ಯಾರೂ ಹೇಳಿಲ್ಲ. ಅಷ್ಟೊಂದು ವಿವೇಚನೆ ಇಲ್ಲದಿರುವ ಕೇಂದ್ರ ಸಚಿವರು ನಮ್ಮಲ್ಲಿ ಯಾರು ಇಲ್ಲ. ಈ ಸಂಬಂಧ ಕಾಂಗ್ರೆಸ್ ಆರೋಪ ಮಾಡುತ್ತಿರುವುದು ಸುಳ್ಳು ಆರೋಪ ಎಂದರು.
ಡಿಕೆಶಿ ನಿವಾಸದ ಮೇಲಿನ ಐಟಿ ದಾಳಿ ಬಗ್ಗೆ ರಾಜ್ಯ ಬಿಜೆಪಿ ಸಾಫ್ಟು ಇಲ್ಲ, ಹಾರ್ಡು ಇಲ್ಲ ಸೂಕ್ಷ್ಮವಾಗಿ ನಮ್ಮ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಯಡಿಯೂರಪ್ಪ ಕೂಡ ಸೂಕ್ಷ್ಮವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅದನ್ನು ತಿಳಿದುಕೊಳ್ಳುವುದು ಅವರಿಗೆ ಬಿಟ್ಟಿದ್ದು. ಕಾಂಗ್ರೆಸ್ನವರು ದೇವೇಗೌಡರಿಗೆ, ಬಿಎಸ್ ವೈಗೆ ಧನ್ಯವಾದ ಹೇಳಿದ್ದಾರೆ. ಹಾಗಾಗಿ ಬಿಜೆಪಿಯಿಂದಲೂ ನಾವು ಅವರಿಗೆ ಧನ್ಯವಾದ ಹೇಳುತ್ತಿದ್ದೇವೆ ಎಂದು ಸುರೇಶ್ ಕುಮಾರ್ ಹೇಳಿದರು.