ಬಿಬಿಎಂಪಿ ಚುನಾವಣೆ ಸುಪ್ರೀಂ ತೀರ್ಪು, ಮುಂದೇನು?
ಬೆಂಗಳೂರು, ಜುಲೈ 04 : ಕರ್ನಾಟಕ ಸರ್ಕಾರ ಬಯಸಿದಂತೆ ಸುಪ್ರೀಂಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಮುಂದೂಡಿದೆ. ಆದರೆ, ವಾರ್ಡ್ ಪುನರ್ ವಿಂಗಡನೆ ಮತ್ತು ಹೊಸ ಮೀಸಲಾತಿ ಪಟ್ಟಿ ಪ್ರಕಟಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಸುಪ್ರೀಂ ಆದೇಶದಂತೆ ಅಕ್ಟೋಬರ್ 5ರೊಳಗೆ ಚುನಾವಣೆ ಪ್ರಕ್ರಿಯೆ ಮುಗಿಯಬೇಕಾಗಿದೆ.
ಬಿಬಿಎಂಪಿ ಚುನಾವಣೆಗೆ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದರೂ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. 2011ರ ಜನಗಣತಿ ಅನ್ವಯ ವಾರ್ಡ್ ಪುನರ್ ವಿಂಗಡಿಸಿ, ಮೀಸಲಾತಿ ನಿಗದಿಪಡಿಸಲು ಇನ್ನೂ 3 ತಿಂಗಳ ಕಾಲಾವಕಾಶ ನೀಡುವಂತೆ ಮನವಿ ಸಲ್ಲಿಸಿತ್ತು. [ಬಿಬಿಎಂಪಿ ಚುನಾವಣೆ ವೇಳಾಪಟ್ಟಿ ಹೀಗಿತ್ತು]

ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎಚ್.ಎಲ್.ದತ್ತು ಅವರ ನೇತೃತ್ವದ ತ್ರಿ ಸದಸ್ಯ ಪೀಠ, ಚುನಾವಣೆಯನ್ನು ಎಂಟು ವಾರಗಳ ಕಾಲ ಮುಂದೂಡಿ ಆದೇಶ ಹೊರಡಿಸಿತು. ಆದರೆ, ಮೀಸಲಾತಿ ಪಟ್ಟಿ, ವಾರ್ಡ್ ಪುನರ್ ವಿಂಗಡನೆ ಮಾಡುವಂತಿಲ್ಲ, 2001ರ ಜನಗಣತಿ ಆಧಾರದಲ್ಲಿಯೇ ಚುನಾವಣೆ ನಡೆಸಬೇಕು ಎಂದು ಸ್ಪಷ್ಟಪಡಿಸಿತು. [ಬಿಬಿಎಂಪಿ ವಿಭಜನೆ ಹೇಗೆ, ಇಲ್ಲಿದೆ ಮಾಹಿತಿ]
ಸುಪ್ರೀಂಕೋರ್ಟ್ ತೀರ್ಪು : ಹಿಂದೆ ಬಿಬಿಎಂಪಿ ಚುನಾವಣೆ ಬಗ್ಗೆ ಅರ್ಜಿ ಸಲ್ಲಿಕೆಯಾಗಿದ್ದಾಗ 2015ರ ಮೇ 5ರೊಳಗೆ ಚುನಾವಣೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿತ್ತು. ಈಗ ಎಂಟು ವಾರಗಳ ಕಾಲಾವಕಾಶ ನೀಡಿದ್ದು, ಅಕ್ಟೋಬರ್ 5ರೊಳಗೆ ಚುನಾವಣೆ ನಡೆಯಬೇಕಾಗಿದೆ.
ಸರ್ಕಾರದ ಮನವಿ ಏನು? : ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲ ಕೆ.ಪರಾಶರನ್ ವಾದ ಮಂಡನೆ ಮಾಡಿದರು. 2011ರ ಜನಗಣತಿ ಅನ್ವಯ ವಾರ್ಡ್ ಪುನರ್ ವಿಂಗಡೆನೆ ಮಾಡುವ ಉದ್ದೇಶವಿದೆ. ಆದ್ದರಿಂದ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೋರ್ಟ್ 2011ರ ಅನ್ವಯ ವಾರ್ಡ್ ಪುನರ್ ವಿಂಗಡಣೆ ಮಾಡುವ ಆಲೋಚನೆ ಇದ್ದರೆ ಮೊದಲೇ ಏಕೆ ತಿಳಿಸಲಿಲ್ಲ? ಎಂದು ಪ್ರಶ್ನಿಸಿತು. ವಾರ್ಡ್, ಮೀಸಲಾತಿ ಪಟ್ಟಿ ಬದಲಾವಣೆ ಮಾಡದೇ ಚುನಾವಣೆಯನ್ನು ನಡೆಸಿ ಎಂದು ಆದೇಶ ನೀಡಿತು.
ವಾರ್ಡ್ ವಿಂಗಡನೆ ಸಾಧ್ಯವಿಲ್ಲ : ಚುನಾವಣಾ ಆಯೋಗದ ಪರ ವಾದ ಮಂಡಿಸಿದ ವಕೀಲ ಕೆ.ಎನ್.ಫಣೀಂದ್ರ ಅವರು, ಮತದಾರರ ಪಟ್ಟಿಯನ್ನು 2014ರವರೆಗೆ ಪರಿಷ್ಕರಣೆ ಮಾಡಲಾಗಿದೆ. ಈಗ ವಾರ್ಡ್ ಪುನರ್ ವಿಂಗಡಣೆಗೆ ಮುಂದಾದರೆ ಮೂರು ತಿಂಗಳು ಬೇಕಾಗುತ್ತದೆ. ಇದಕ್ಕೆ ಕಾಲಾವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಅಂತಿಮವಾಗಿ ಸುಪ್ರೀಂಕೋರ್ಟ್ ಚುನಾವಣೆಯನ್ನು 8 ವಾರಗಳ ಕಾಲ ಮುಂದೂಡಿತು. ಹೊಸ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತು. 2015ರ ಅಕ್ಟೋಬರ್ 5ರೊಳಗೆ ಚುನಾವಣೆ ನಡೆಯಬೇಕು ಎಂದು ಆದೇಶಿಸಿತು.
ಈಗಾಗಲೇ ರಾಜ್ಯ ಚುನಾವಣಾ ಆಯುಕ್ತ ಪಿ.ಎನ್. ಶ್ರೀನಿವಾಸಾಚಾರಿ ಅವರು ಬಿಬಿಎಂಪಿ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದರು. ಅದರಂತೆ ಅವಿಭಜಿತ ಬಿಬಿಎಂಪಿಯ 198 ವಾರ್ಡ್ಗಳಿಗೆ ಒಂದೇ ಹಂತದಲ್ಲಿ ಜುಲೈ 28ರ ಮಂಗಳವಾರ ಮತದಾನ ನಡೆಯಬೇಕಿತ್ತು, ಜು.31ರ ಶುಕ್ರವಾರ ಫಲಿತಾಂಶ ಘೋಷಣೆಯಾಗಬೇಕಿತ್ತು. ಆದರೆ, ಈಗ ವೇಳಾಪಟ್ಟಿ ಬದಲಾವಣೆಯಾಗಲಿದೆ.












Click it and Unblock the Notifications