ಉಗ್ರರ ಕೌರ್ಯಕ್ಕೆ ಬಲಿಯಾಗಿದ್ದ ಸುದರ್ಶನ್ ಅಂತ್ಯಕ್ರಿಯೆ
ಬೆಂಗಳೂರು, ಸೆ.28 : ನೈರೋಬಿಯಲ್ಲಿ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಕನ್ನಡಿಗ ಉದ್ಯಮಿ ಸುದರ್ಶನ್ ಅವರ ಅಂತ್ಯಕ್ರಿಯೆ ಶನಿವಾರ ಸಂಜೆ ನಡೆಯಿತು. ಕುಟುಂಬದವರು, ಸ್ನೇಹಿತರು, ಅಭಿಮಾನಿಗಳು ಸುದರ್ಶನ್ ಅವರ ಅಂತ್ಯ ಸಂಸ್ಕಾರದಲ್ಲಿ ಕಂಬನಿ ತುಂಬಿದ ಕಣ್ಗಳೊಂದಿಗೆ ಪಾಲ್ಗೊಂಡಿದ್ದರು.
ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ದುಬೈ ಎಮಿರೇಟ್ಸ್ ವಿಶೇಷ ವಿಮಾನದಲ್ಲಿ ಸುದರ್ಶನ್(50) ಶವ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಸುದರ್ಶನ್ ಕುಟುಂಬದವರು ಮತ್ತು ಸ್ನೇಹಿತರು ಭಾರವಾದ ಹೃದಯದೊಂದಿಗೆ ಸುದರ್ಶನ್ ಮೃತದೇಹವನ್ನು ಪಡೆದರು.

ಸುದರ್ಶನ್ ಅವರ ಮೃತದೇಹದೊಂದಿಗೆ ಕೀನ್ಯಾದಿಂದ ಘಾನದಲ್ಲಿ ಇಂಜಿನಿಯರ್ ಆಗಿರುವ ಅವರ ಆಪ್ತಮಿತ್ರ ಅನಿಲ್ ಕುಮಾರ್ ಸೇರಿದಂತೆ ಕೆಲವು ಕನ್ನಡಿಗರು ಬೆಂಗಳೂರಿಗೆ ಆಗಮಿಸಿದರು. ನಂತರ ಅವರ ಪಾರ್ಥಿವ ಶರೀರವನ್ನು ಶೇಷಗಿರಿ ಹಳ್ಳಿಯಲ್ಲಿರುವ ಅವರ ಫಾರ್ಮ ಹೌಸ್ ಗೆ ತರಲಾಯಿತು. ಸಂಜೆಯ ವರೆಗೂ ಅಂತಿಮ ದರ್ಶಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಶನಿವಾರ ಸಂಜೆ ಬನಶಂಕರಿಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಸುದರ್ಶನ್ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ನಡೆದವು. ಉಗ್ರರ ದುಷ್ಕೃತ್ಯಕ್ಕೆ ಬಲಿಯಾದ ಸುದರ್ಶನ್ ಪಂಚಭೂತಗಳಲ್ಲಿ ಲೀನವಾದರು.
ನಗುನಗುತ್ತಾ ನೈರೋಬಿಗೆ ಪ್ರಯಾಣ ಬೆಳೆಸಿದ್ದ ರಫ್ತು ಉದ್ಯಮಿ ಸುದರ್ಶನ್ ಮಾಲ್ ಹೊಕ್ಕ 15 ನಿಮಿಷಗಳಲ್ಲಿ ಉಗ್ರರ ಗುಂಡೇಟಿಗೆ ಬಲಿಯಾಗಿದ್ದರು. ಸುದರ್ಶನ್ ಮುಖಕ್ಕೆ ಗುಂಡುಗಳು ತಗುಲಿದ್ದರಿಂದ ಅವರ ಮುಖ ವಿಕಾರವಾಗಿತ್ತು. (ಉಗ್ರರದಾಳಿಯಲ್ಲಿ ಮೃತಪಟ್ಟ ಸುದರ್ಶನ್ ಯಾರು?)
ಕಂಬನಿಯ ವಿದಾಯ : ಸುದರ್ಶನ್ ಅವರ ಶವ ಕೆಂಗೇರಿ ಬಳಿಯ ಶೇಷಗಿರಿ ಹಳ್ಳಿಗೆ ಬರುತ್ತಿದ್ದಂತೆ ಸ್ನೇಹಿತರು ಮತ್ತು ಕುಟುಂಬವರ ದುಖಃದ ಕಟ್ಟೆಯೊಡೆದಿತ್ತು. ಸುದರ್ಶನ್ ಅಕ್ಕ ನಾಗವೇಣಿ, ಶವದ ಪೆಟ್ಟಿಗೆ ತಬ್ಬಿಕೊಂಡು ಜೋರಾಗಿ ಅಳುತ್ತಿದ್ದರೆ, ಅವರಿಗೆ ಸಾಂತ್ವನ ಹೇಳುವ ಧೈರ್ಯ ಯಾರೊಬ್ಬರಿಗೂ ಇರಲಿಲ್ಲ.
ಶ್ವಾನಗಳ ಮೂಕ ರೋದನ : ಸುದರ್ಶನ್ ಅವರು ಪ್ರತಿಬಾರಿ ಶೇಷಗಿರಿ ಫಾರ್ಮ್ ಹೌಸ್ ಗೆ ಬಂದಾಗಲೇ ಅವರನ್ನು ಸ್ವಾಗತಿಸುತ್ತಿದ್ದದ್ದು, ರಿಕ್ಕಿ ಮತ್ತು ಚಿಂಟು ಎಂಬ ನಾಯಿಗಳು. ಅವುಗಳಿಗೆ ಬಿಸ್ಕೆಟ್ ಹಾಕಿದರೆ, ಮಾತ್ರ ಸುದರ್ಶನ್ ವೊಳಗೆ ಹೋಗಲು ಅನುಮತಿ ದೊರೆಯುತ್ತಿತ್ತು.
ಆದರೆ, ಶನಿವಾರ ಸುದರ್ಶನ್ ಮೃತದೇಹ ಫಾರ್ಮ್ ಹೌಸ್ ತಲುಪಿದಾಗಲೇ ಶ್ವಾನಗಳು ಮೌನಕ್ಕೆ ಶರಣಾಗಿದ್ದವು. ಮನೆಯಲ್ಲಿ ಅಷ್ಟೊಂದು ಜನರು ಓಡಾಡುತ್ತಿದ್ದರು ಅದರ ಪರಿವೆ ಇಲ್ಲದಂತೆ, ಮೌನವಾಗಿ ಕುಳಿತಿದ್ದವು. ತಮ್ಮ ನೆಚ್ಚಿನ ಯಜಮಾನನನ್ನು ಕಳೆದುಕೊಂಡ ದುಖಃವನ್ನು ಮೌನವಾಗಿ ಅವು ವ್ಯಕ್ತಪಡಿಸುತ್ತಿದ್ದವು.












Click it and Unblock the Notifications