ಬೆಂಗಳೂರು ಸಬ್ ಅರ್ಬನ್ ರೈಲು; ಬೋಗಿಗಳ ಕುರಿತು ಅಪ್ಡೇಟ್
ಬೆಂಗಳೂರು, ಜನವರಿ 05: ಬೆಂಗಳೂರು ಉಪ ನಗರ ರೈಲು ಯೋಜನೆ ಕಾಮಗಾರಿಗಳು ಚುರುಕಿನಿಂದ ಸಾಗುತ್ತಿವೆ. 2024ರಲ್ಲಿ ಎರಡು ಕಾರಿಡಾರ್ಗಳಲ್ಲಿ ಸಂಚಾರ ಆರಂಭಗೊಂಡು ನಗರದ ಸಂಚಾರ ದಟ್ಟಣೆ ನಿವಾರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದು ಅಂದಾಜಿಸಲಾಗಿದೆ.
ಸಬ್ ಅರ್ಬನ್ ರೈಲು ಯೋಜನೆ ಅನುಷ್ಠಾನಗೊಳಿಸುತ್ತಿರುವ ಕರ್ನಾಟಕ ರೈಲು ಮೂಲ ಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) 306 ಹವಾನಿಯಂತ್ರಿತ ಬೋಗಿಗಳನ್ನು ಪೂರೈಕೆ ಮಾಡಲು ಟೆಂಡರ್ ಕರೆದಿದೆ. ನಮ್ಮ ಮೆಟ್ರೋ ಮಾದರಿಯಲ್ಲಿಯೇ ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್ಆರ್ಪಿ) ರೈಲು ಬೋಗಿಗಳು ಇರಲಿವೆ.

ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಸ್ಥಾಪನೆ ಮಾಡಿರುವ ಕೆ-ರೈಡ್ ಬೆಂಗಳೂರು ನಗರದಲ್ಲಿ ಸಂಪಿಗೆ, ಮಲ್ಲಿಗೆ, ಕನಕ ಮತ್ತು ಪಾರಿಜಾತ ಎಂಬ ಹೆಸರಿನಲ್ಲಿ 4 ಕಾರಿಡಾರ್ಗಳಲ್ಲಿ ಉಪ ನಗರ ರೈಲು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಇದರ ಉದ್ದ 149 ಕಿ. ಮೀ. ಆಗಿದೆ.
306 ಬೋಗಿಗಳು; ಕೆ-ರೈಡ್ ಸಬ್ ಅರ್ಬನ್ ರೈಲು ಯೋಜನೆಗಾಗಿ 306 ಹವಾನಿಯಂತ್ರಿತ ಬೋಗಿಗಳಿಗೆ ಟೆಂಡರ್ ಕರೆದಿದೆ. ಈ ಬೋಗಿಗಳ ಪೈಕಿ 264 ಪ್ರಯಾಣಿಕರ ಸಂಚಾರಕ್ಕೆ ಬಳಕೆ ಮಾಡಲಾಗುತ್ತದೆ. ಉಳಿದ ಬೋಗಿಗಳನ್ನು ಸಂಚಾರ ನಿಯಂತ್ರಣ, ನಿರ್ವಹಣೆಗಾಗಿ ಉಪಯೋಗ ಮಾಡಲಾಗುತ್ತದೆ.
2023ರ ಜನವರಿಯಲ್ಲಿ ಕೆ-ರೈಡ್ ಬೋಗಿಗಳ ಪೂರೈಕೆಗಾಗಿ ಆರ್ಎಫ್ಕ್ಯೂಎಸ್ ಆಹ್ವಾನಿಸಿತ್ತು. ವಿನ್ಯಾಸ, ಉತ್ಪಾದನೆ, ಪೂರೈಕೆ, ಹಸ್ತಾಂತರ, ನಿರ್ವಹಣೆ ಮುಂತಾದ ಅಂಶಗಳ ಕುರಿತು ಕಂಪನಿಗಳು ಪ್ರಸ್ತಾವನೆ ಸಲ್ಲಿಕೆ ಮಾಡಿದ್ದವು. ಇವುಗಳಲ್ಲಿ ಭಾರತೀಯ ಮೂಲದ ಬಿಹೆಚ್ಇಎಲ್ ಮತ್ತು ಬಿಇಎಂಎಲ್ ಹಾಗೂ ಜರ್ಮನಿ ಮೂಲದ ಸಿಎಎಫ್ ಕಂಪನಿಗಳು ಪ್ರಸ್ತಾವನೆ ಸಲ್ಲಿಸಿವೆ.
ಆರ್ಎಫ್ಕ್ಯೂಸ್ ಟೆಂಡರ್ ಪ್ರಕ್ರಿಯೆಯ ಮೊದಲ ಭಾಗವಾಗಿದೆ. ಕಂಪನಿಗಳು 2ನೇ ಹಂತದ ಪ್ರಕ್ರಿಯೆಯಲ್ಲಿ ಪಾಲ್ಗೊಂಡರೆ ಮಾತ್ರ ಅವುಗಳನ್ನು ಟೆಂಡರ್ ಪ್ರಕ್ರಿಯಿಗೆ ಪರಿಗಣಿಸಲಾಗುತ್ತದೆ. ಆರ್ಎಫ್ಪಿ 2ನೇ ಹಂತದ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಯಲ್ಲಿ ಕಂಪನಿಗಳು ಆರ್ಥಿಕ ಗ್ಯಾರಂಟಿ, ತಾಂತ್ರಿಕ ಅಂಶಗಳ ಕುರಿತು ವಿವರಗಳನ್ನು ಸಲ್ಲಿಸಬೇಕಿದೆ.
ಡಿಸೆಂಬರ್ 29ರಂದು ಕೆ-ರೈಡ್ ಕಂಪನಿಗಳಿಂದ ಆರ್ಎಫ್ಪಿ ಆಹ್ವಾನಿಸಿದೆ. ಸಲ್ಲಿಕೆಯಾದ ಪ್ರಸ್ತಾವನೆಗಳನ್ನು ಫೆಬ್ರವರಿ 28ರಂದು ತೆರೆಯಲಾಗುತ್ತದೆ. ಸಿಎಎಫ್, ಬಿಹೆಚ್ಇಎಲ್ ಮತ್ತು ಬಿಇಎಂಎಲ್ ಮೂರು ಕಂಪನಿಗಳು ಸಹ ಆರ್ಎಫ್ಕ್ಯೂ ಹಂತದಲ್ಲಿ ಆಯ್ಕೆಯಾಗಿವೆ.
ಟೆಂಡರ್ ಪಡೆಯುವ ಕಂಪನಿಗಳು 90 ವಾರಗಳಲ್ಲಿ ಅವರು ವಿವರಿಸಿದ ವಿನ್ಯಾಸದ ಮಾದರಿಯಲ್ಲಿ ಮೂರು ಮತ್ತು ಆರು ಬೋಗಿಯ ಎರಡು ಮಾದರಿಗಳನ್ನು ತಯಾರಿಸಿ ತೋರಿಸಬೇಕಿದೆ. ಒಂದು ಬೋಗಿ ಸುಮಾರು 300 ಪ್ರಯಾಣಿಕರ ಸಂಚಾರ ನಡೆಸುವ ಸಾಮರ್ಥ್ಯವನ್ನು ಹೊಂದಿರುತ್ತವೆ.
ಬೆಂಗಳೂರು ಉಪನಗರ ರೈಲು ಯೋಜನೆಯ ಕಾಡಿಡಾರ್- 4 (ಕನಕ) ಸಿವಿಲ್ ಕಾಮಗಾರಿ ಟೆಂಡರ್ ಎಲ್ & ಟಿ ಪಾಲಾಗಿದೆ. ಈ ಕಾರಿಡಾರ್ 46.88 ಕಿ. ಮೀ. ದೂರವಿದ್ದು, ಹೀಲಲಿಗೆ-ರಾಜಾನಕುಂಟೆ ನಡುವೆ ಸಂಪರ್ಕವನ್ನು ಕಲ್ಪಿಸುತ್ತದೆ. ಮುಂದಿನ ಎರಡೂವರೆ ವರ್ಷದಲ್ಲಿ ಈ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ನಮ್ಮ ಮೆಟ್ರೋ ಯೋಜನೆಯ ಬಳಿಕ ಬೆಂಗಳೂರು ನಗರದ ಸಂಚಾರ ದಟ್ಟಣೆಗೆ ಸಬ್ ಅರ್ಬನ್ ರೈಲು ಪರಿಹಾರ ಎಂದು ನಿರೀಕ್ಷೆ ಮಾಡಲಾಗಿದೆ. ಈ ಉಪ ನಗರ ರೈಲು ಯೋಜನೆ ಬೆಂಗಳೂರು ನಗರದ 4 ದಶಕಗಳ ಕನಸಾಗಿದೆ.
1983ರಲ್ಲಿಯೇ ಉಪ ನಗರಕ್ಕೆ ಸಂಪರ್ಕ ಕಲ್ಪಿಸುವ ಯೋಜನೆಯ ಪ್ರಸ್ತಾವನೆ ಸಿದ್ಧವಾಗಿತ್ತು. 2019ರಲ್ಲಿ ಕೇಂದ್ರ ಸರ್ಕಾರ ಬಜೆಟ್ನಲ್ಲಿ ಇದನ್ನು ಪ್ರಸ್ತಾಪಿಸಿತ್ತು. 2021ರಲ್ಲಿ ರೈಲ್ವೆ ಮಂಡಳಿ ಇದಕ್ಕೆ ಒಪ್ಪಿಗೆ ನೀಡಿತ್ತು. 2022ರ ಜೂನ್ 21ರಂದು ಪ್ರಧಾನಿ ನರೇಂದ್ರ ಮೋದಿ ಯೋಜನೆಗೆ ಶಂಕುಸ್ಥಾಪನೆ ಮಾಡಿದರು. ಈಗ ಎರಡು ಕಾರಿಡಾರ್ನ ಕಾಮಗಾರಿ ನಡೆಯುತ್ತಿದೆ.












Click it and Unblock the Notifications