ಬೆಂಗಳೂರಿನಲ್ಲಿ ಎಸ್ ಟಿಪಿ ವಿರೋಧಿಸಿ ಬಿಜೆಪಿ ಪ್ರತಿಭಟನೆ
ಬೆಂಗಳೂರು, ಡಿಸೆಂಬರ್ 14 : ನಗರದಲ್ಲಿ 50 ಮನೆಗಳಿರುವ ಅಪಾರ್ಟ್ ಮೆಂಟ್ ಗಳಲ್ಲಿ ತ್ಯಾಜ್ಯ ನೀರು ಸಂಸ್ಕ್ರಣಾ ಘಟಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕೆಂಬ ಜಲಮಂಡಳಿ ಆದೇಶಕ್ಕೆ ಬಿಜೆಪಿ ವಿರೋಧಿಸಿದೆ.
ಜಲಮಂಡಳಿಯು ಆದೇಶವನ್ನು ಹಿಂಪಡೆಯಬೇಕು ಎಂದು ಬಿಜೆಪಿ ಡಿಸೆಂಬರ್ 16 ರಂದು ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ. ಬಿಜೆಪಿ ಶಾಸಕ ಸುರೇಶ್ ಕುಮಾರ್, ವಿಜಯ್ ಕುಮಾರ್ ಹಾಗೂ ಡಾ. ಅಶ್ವತ್ಥ ನಾರಾಯಣ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಲಮಂಡಳಿ ತಾರತಮ್ಯ: ಅಪಾರ್ಟ್ ಮೆಂಟ್ ನಿವಾಸಿಗಳ ಪ್ರತಿಭಟನೆ
ಮೆರವಣಿಗೆ ಡಿಸೆಂಬರ್ 16 ರಂದು ಬೆಳಗ್ಗೆ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ನಡೆಯಲಿದೆ. ಪ್ರತಿಭಟನೆಯಲ್ಲಿ ಅಪಾರ್ಟ್ ಮೆಂಟ್ ನಿವಾಸಿಗಳು ಪಾಲ್ಗೊಳ್ಳಲಿದ್ದಾರೆ.
ಬಹುವಸತಿ ಸಮುಚ್ಛಯಗಳಿಗೆ ಎಸ್ಟಿಪಿ ಅಳವಡಿಕೆ ಕಡ್ಡಾಯಗೊಳಿಸಿ2016 ರಲ್ಲೇ ಬೆಂಗಳೂರು ಜಲಮಂಡಳಿ ಆದೇಶ ಹೊರಡಿಸಿತ್ತು. ಅದರ ಮುಂದುವರಿದ ಭಾಗವಾಗಿ 20 ಕ್ಕೂ ಹೆಚ್ಚು ಮನೆಗಳಿರುವ ಅಪಾರ್ಟ್ ಮೆಂಟ್ಗಳಿಗೆ ಎಸ್ಟಿಪಿ ಅಳಡಿಕೆ ಕಡ್ಡಾಯಗೊಳಿಸಲು ಜಲಮಂಡಳಿ ಮುಂದಾಗಿತ್ತು.
ಆದರೆ ಕೊನೆಗೆ 50 ಕ್ಕೂ ಹೆಚ್ಚು ಮನೆಗಳ ಅಪಾರ್ಟ್ ಮೆಂಟ್ಗಳಿಗೆ ಎಸ್ಟಿಪಿ ಅಳವಡಿಕೆ ಕಡ್ಡಾಯಗೊಳಿಸಿ ಈಗಾಗಲೇ ನಿರ್ಮಾಣಗೊಂಡಿರುವ ಕಟ್ಟಡಗಳಿಗೂ ಪೂರ್ವಾನ್ವಯ ಎಂದು ಆದೇಶ ಹೊರಡಿಸಿದೆ. ಇನ್ನು ಮುಂದೆ ಹೊಸದಾಗಿ ನಿರ್ಮಾಣವಾಗುವ ಅಪಾರ್ಟ್ ಮೆಂಟ್ಗಳಿಗೆ ಇಂತಹ ನಿಯಮ ಹೇರಬಹುದು. ಆದರೆ ಈಗಾಗಲೇ ನಿರ್ಮಾಣಗೊಂಡಿರುವ ಅಪಾರ್ಟ್ ಮೆಂಟ್ಗಳು ಎಸ್ಟಿಪಿ ಅಳವಡಿಸಿಕೊಳ್ಳುವುದು ಅವೈಜ್ಞಾನಿಕ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಯಾವುದೇ ಕಾರಣಕ್ಕೂ ಜಲಮಂಡಳಿಯು ಈ ಆದೇಶವನ್ನು ಪೂರ್ವಾನ್ವಯವಾಗುವಂತೆ ಜಾರಿಗೊಳಿಸಬಾರದು. ಈಗಾಗಲೇ ನಿರ್ಮಿಸಿರುವ ಅಪಾರ್ಟ್ ಮೆಂಟ್ ಗಳು ಎಸ್ಟಿಪಿ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಈ ಆದೇಶ ಅಪಾರ್ಟ್ ಮೆಂಟ್ ನಿವಾಸಿಗಳ ವಿರೋಧಿಯಾಗಿದೆ ಎಂದು ಕಿಡಿಕಾರಿದರು.
ಜನವಿರೋಧಿ ನಿಯಮವನ್ನು ಕೂಡ ವಾಪಸ್ ಪಡೆಯುವಂತೆ ಬೆಂಗಳೂರು ಅಭಿವೃದ್ಧಿ ಸಚಿವರ ಗಮನ ಸೆಳೆಯಲಾಗಿದೆ. ಬಿಬಿಎಂಪಿ ಸಾಮಾನ್ಯ ಸಭೆಯಲ್ಲೂ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಲಾಗಿದೆ. ಆದಾಗ್ಯೂ ಕೂಡ ಬೆಂಗಳೂರು ಜಲಮಂಡಳಿ 50 ಕ್ಕಿಂತ ಹೆಚ್ಚು ಮನೆಗಳಿರುವ 960 ಅಪಾರ್ಟ್ ಗಳಿಗೆ ನೋಟಿಸ್ ಜಾರಿ ಮಾಡಿದೆ.
ಇಂತಹ ಹಠಮಾರಿ ಧೋರಣೆಯಿಂದ ಜಲಮಂಡಳಿ ಹಿಂದೆ ಸರಿಯಬೇಕು. ಜನರಿಗೆ ಗುಣಮಟ್ಟದ ಹಾಗೂ ಶುದ್ಧ ನೀರನ್ನು ಒದಗಿಸುವ ತನ್ನ ಮೂಲ ಕರ್ತವ್ಯವನ್ನು ನಿರ್ವಹಿಸಲು ಜಲಮಂಡಳಿ ಒತ್ತು ನೀಡಬೇಕು ಎಂದು ಆಗ್ರಹಿಸಿದರು.
ಬೀದಿಗಿಳಿಯಲಿರುವ ಅಪಾರ್ಟ್ ಮೆಂಟ್ ಮಾಲೀಕರು: ತ್ಯಾಜ್ಯ ನೀರು ಸಂಸ್ಕರಣಾ ಘಟಕ ಅಳವಡಿಕೆ ಕಡ್ಡಾಯ ಗೊಳಿಸಲು ಮುಂದಾಗಿರುವ ಬಿಬಿಎಂಪಿ ಹಾಗೂ ಜಲಂಂಡಳಿ ನಿರ್ಣಯ ವಿರೋಧಿಸಿ ಬೀದಿಗಿಳಿಯಲು ಅಪಾರ್ಟ್ ಎಂಟ್ ಮಾಲೀಕರು ನಿರ್ಧರಿಸಿದ್ದಾರೆ.
ಡಿಸೆಂಬರ್ 16 ರಂದು ಶನಿವಾರ ಬೃಹತ್ ಪ್ರತಿಭಟನೆ ನಡೆಸಿ ವಿಧಾನಸೌಧಕ್ಕೆ ಜಾಥಾ ಮೂಲಕ ತೆರಳಿ ಎಸ್ ಟಿ ಪಿ ಕಡ್ಡಾಯಗೊಳಿಸುವುದನ್ನು ಕೈಬಿಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಿದ್ದಾರೆ.