ಬೆಂಗಳೂರಿನಲ್ಲಿ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಮೂರು ದಿನಗಳ ತರಬೇತಿ ಶಿಬಿರ!
ಬೆಂಗಳೂರು, ಮಾ. 20: ಯುವಕರು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಯುವಕರು ಹಣದ ಹಿಂದೆ ಬೀಳದೆ ಸೇವಾ ಮನೋಭಾವವನ್ನು ಬೆಳೆಸಿಕೊಂಡು ಹಣ ಮತ್ತು ಪ್ರತಿಷ್ಠೆ ತಾನಾಗಿಯೇ ಬರುವುದು ನಿಶ್ಚಿತ ಎಂದು ನಿವೃತ್ತ ಐಜಿಪಿ ಗೋಪಾಲ್ ಬಿ. ಹೊಸೂರು ಹೇಳಿದರು. ಕಳೆದ ಮೂರು ದಿನಗಳಿಂದ ರೆಡ್ಕ್ರಾಸ್ ಸಂಸ್ಥೆ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಜಂಟಿಯಾಗಿ ಜಿ.ಕೆ.ವಿ.ಕೆ ಆವರಣದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಯುವ ರೆಡ್ಕ್ರಾಸ್ ತರಬೇತಿ ಮತ್ತು ಪ್ರೇರಣಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಭಾವೈಕ್ಯತೆ, ಭ್ರಾತೃತ್ವ, ಸೇವಾಪರತೆ ಮೂಡಿಸುವಲ್ಲಿ ಜಗತ್ತಿನಾದ್ಯಂತ ಹೆಸರುವಾಸಿಯಾಗಿದೆ. ಅಂತಹ ಸಂಸ್ಥೆ ಕೈಗೊಂಡಿರುವ ಈ ಕಾರ್ಯಾಗಾರದಲ್ಲಿ ಭಾಗವಹಿಸಿರುವ ತಾವೆಲ್ಲರೂ ಅದೃಷ್ಟವಂತರು. ಈ ಒಂದು ಕಾರ್ಯಾಗಾರದಿಂದ ಪಡೆದಂತಹ ಅನುಭವವನ್ನು ಇತರರೊಂದಿಗೆ ಹಂಚಿಕೊಂಡು ಪ್ರಕೃತಿ ವಿಕೋಪಗಳಾಗಿರಬಹುದು, ಅಪಘಾತಗಳಾಗಿರಬಹುದು ಅಥವಾ ಇನ್ಯಾವುದೇ ತುರ್ತು ಸಂದರ್ಭಗಳಲ್ಲಿ ಸದಾ ಮುಂಚೂಣಿಯಲ್ಲಿದ್ದು ಸಹಾಯಹಸ್ತ ನೀಡುತ್ತಿರುವಂತಹ ಕೆಲಸವನ್ನು ಯುವಜನತೆ ಮಾಡಬೇಕು ಎಂದರು.
ಯುವಜನತೆ ನಮ್ಮ ದೇಶದ ಭವಿಷ್ಯ: ಆನಂದ್ ಜಿಗಜಿನ್ನಿ
ಇದೇ ಸಂದರ್ಭದಲ್ಲಿ ಮಾತನಾಡಿದ ರೆಡ್ಕ್ರಾಸ್ ಸಂಸ್ಥೆಯ ರಾಜ್ಯ ಕೋಶಾಧ್ಯಕ್ಷ ಆನಂದ್ ಜಿಗಜಿನ್ನಿ ಮಾತನಾಡಿ, ಇಂದಿನ ಯುವಜನತೆ ನಮ್ಮ ದೇಶದ ಭವಿಷ್ಯ ಅವರು ಸದೃಢರಾದಾಗ ಮಾತ್ರ ದೇಶ ವಿಶ್ವದ ಮುಂಚೂಣಿಯಲ್ಲಿ ಇರಲು ಸಾಧ್ಯ. ಹೀಗಾಗಿ ಯುವಜನತೆ ಎಲ್ಲಾ ರೀತಿಯಿಂದಲೂ ಸಶಕ್ತರಾಗಿರಬೇಕು. ಸ್ನೇಹಪರತೆ, ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂಬುದು ರೆಡ್ಕ್ರಾಸ್ ಧ್ಯೇಯವಾಗಿದೆ. ಶತಮಾನೋತ್ಸವದ ಸಂಭ್ರಮಾಚರಣೆಯಲ್ಲಿರುವ ರಾಜ್ಯ ರೆಡ್ ಕ್ರಾಸ್ ಸಂಸ್ಥೆ, ಸಾಕಷ್ಟು ಶಿಬಿರ ಹಾಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಸೇವಾಭಾವನೆ ಮತ್ತು ಹಿರಿಯರ ಬಗ್ಗೆ ಗೌರವ
ಯುವಕರಲ್ಲಿ ಸೇವಾ ಮನೋಭಾವ ಮತ್ತು ಮಾನವೀಯ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಪ್ರಥಮ ಚಿಕಿತ್ಸೆ, ರಕ್ತದಾನ ಶಿಬಿರಗಳು, ವಿಪತ್ತು ನಿರ್ವಹಣೆ ತರಬೇತಿ ಕಾರ್ಯಾಗಾರಗಳನ್ನು ಸಾಕಷ್ಟು ಹಮ್ಮಿಕೊಳ್ಳಲಾಗುತ್ತದೆ. ಜೂನಿಯರ್ ರೆಡ್ಕ್ರಾಸ್ ವತಿಯಿಂದಲೂ ಕೂಡ ರಾಜ್ಯದ 18 ಸಾವಿರ ಶಾಲೆಗಳಲ್ಲಿ ರೆಡ್ಕ್ರಾಸ್ ವತಿಯಿಂದ ಕಾರ್ಯಚಟುವಟಿಕೆಗಳನ್ನು ಆರಂಭಿಸಲಾಗುತ್ತಿದೆ. ಪ್ರತಿಯೊಂದು ಮಗುವು ಸುಸಂಸ್ಕೃತರಾಗಿ ದೇಶದ ಬಗ್ಗೆ ದೇಶಾಭಿಮಾನ, ಸೇವಾಭಾವ ಮತ್ತು ಹಿರಿಯರ ಬಗ್ಗೆ ಗೌರವವನ್ನು ಬೆಳೆಸುವಲ್ಲಿ ಬಹಳಷ್ಟು ಸಹಕಾರಿಯಾಗಿದೆ ಎಂದು ಆನಂದ್ ಜಿಗಜಿನ್ನಿ ಹೇಳಿದರು.
ರೆಡ್ಕ್ರಾಸ್ ಸಂಸ್ಥೆಯ ಇತಿಹಾಸ
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ. ಟಿ. ನರೇಂದ್ರಪ್ಪ ಅವರು ಮಾತನಾಡಿ, ಯಾವುದೇ ಒಂದು ಸಂಸ್ಥೆ ಬಲಿಷ್ಠವಾಗಿ ಸದೃಢವಾಗಿ ರೂಪುಗೊಳ್ಳಬೇಕಾದರೆ ತಮ್ಮ ಸಂಸ್ಥೆಯ ಕುರಿತು ಅಲ್ಲಿ ಕೆಲಸ ನಿರ್ವಹಿಸುತ್ತಿರುವರಿಗೆ ಗೊತ್ತಿರಬೇಕು. ಅಲ್ಲಿನ ಸದಸ್ಯರು, ಸ್ವಯಂಸೇವಕರಿಗೆ ಸಂಸ್ಥೆಯ ಇತಿಹಾಸ, ಹಿನ್ನೆಲೆ ಮತ್ತು ಮೈಲಿಗಲ್ಲುಗಳ ಬಗ್ಗೆ ಪರಿಚಯವಿರಬೇಕು ಎಂದರು. ಈ ನಿಟ್ಟಿನಲ್ಲಿ ಇಂತಹ ಪರಿಚಯ ಕಾರ್ಯವನ್ನು ತನ್ನ ಸ್ವಯಂಸೇವಕರಿಗೆ ಮಾಡಿಕೊಡುವ ನಿಟ್ಟಿನಲ್ಲಿ ರೆಡ್ಕ್ರಾಸ್ ಆಯೋಜಿಸಿರುವ ಈ ಮೂರು ದಿನಗಳ ತರಬೇತಿ ಶಿಬಿರವು ಗಮನಾರ್ಹ ಎಂದು ಅಭಿಪ್ರಾಯಪಟ್ಟರು.
Recommended Video
ಸ್ವಯಂ ಸೇವೆ ಮತ್ತು ವ್ಯಕ್ತಿತ್ವ ವಿಕಸನ
ಮೂರು ದಿನಗಳ ಶಿಬಿರದಲ್ಲಿ ರಾಜ್ಯದ 24 ವಿಶ್ವವಿದ್ಯಾನಿಲಯದಿಂದ 158 ಯುವ ರೆಡ್ಕ್ರಾಸ್ ಸ್ವಯಂ ಸೇವಕರು ಭಾಗವಹಿಸಿದ್ದರು. ತರಬೇತಿಯಲ್ಲಿ ಪ್ರಥಮ ಚಿಕಿತ್ಸೆ, ಪ್ರಕೃತಿ ವಿಕೋಪ, ಸ್ವಯಂ ಸೇವೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ವಿಷಯಗಳಿಗೆ ತರಬೇತಿಯನ್ನು ನೀಡಲಾಗಿತ್ತು. ಸಮಾರೋಪ ಸಮಾರಂಭದಲ್ಲಿ ಡಾ. ಡಿ.ಎಲ್. ಸಾವಿತ್ರಮ್ಮ ಡಾ. ಎಂ. ಶ್ರೀನಿವಾಸ, ಎಸ್. ನಾಗಶೇಖರ್, ಪ್ರೊ. ಕೆ.ಎಂ. ಹರಣಿ ಕುಮಾರ್, ಡಾ. ಮಾರಪ್ಪ, ಡಾ. ಭವಾನಿ, ಡಾ. ಕುಮಾರ್, ಡಾ. ಕೆ.ಜಿ. ಪರಶುರಾಮ್, ಸಚೇತ್, ಡಾ. ಅಚ್ಯುತರಾವ್, ಡಾ. ಅನುರಾಧಾ ಕುರುಂಜಿ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿಯಲ್ಲಿ ಭಾಗವಹಿಸಿದ್ದರು.