ಜೆಡಿಎಸ್ ಅಧ್ಯಕ್ಷ ವಿಶ್ವನಾಥ್ಗೆ ಅನಾರೋಗ್ಯ: ರಾಜೀನಾಮೆ ಸಾಧ್ಯತೆ
Recommended Video
ಬೆಂಗಳೂರು, ಅಕ್ಟೋಬರ್ 24: ಜೆಡಿಎಸ್ ಅಧ್ಯಕ್ಷ ಎಚ್ ವಿಶ್ವನಾಥ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕಾರಣದಿಂದಾಗಿ ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.
ವೈದ್ಯರ ಸಲಹೆ ಮೇರೆಗೆ ಇನ್ನೂ ಕೆಲ ದಿನಗಳ ಕಾಲ ಅವರು ವಿಶ್ರಾಂತಿ ಪಡೆಯಬೇಕಾಗುತ್ತದೆ. ಉಪ ಚುನಾವಣೆ ಪ್ರಚಾರಕ್ಕೆ ತೆರಳುವುದೂ ಅನುಮಾನವಾಗಿದೆ. ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವ ಅವರು ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ಅಥವಾ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಯವರು ವಿಶ್ವನಾಥ್ ಅವರನ್ನು ಭೇಟಿ ಮಾಡದಿರುವ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ಹಿಂದಿದೆ ದೇವೇಗೌಡರ ತಂತ್ರ!
ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಸೌಜನ್ಯಕ್ಕೂ ಭೇಟಿ ನೀಡಿಲ್ಲ, ಇದರಿಂದ ತಮಗೆ ಬಹಳ ನೋವಾಗಿದೆ ಎಂದು ತಮ್ಮ ಹಿತೈಶಿಗಳ ಬಳಿ ಅಳಲು ತೋಡಿಕೊಂಡಿದ್ದಾರೆ. ಆಸ್ಪತ್ರೆಗೆ ದಾಖಲಾದ ವೇಳೆ ದೇವೇಗೌಡ ಹಾಗೂ ಕುಮಾರಸ್ವಾಮಿ ಇಬ್ಬರೂ ಭೇಟಿ ಮಾಡಿದ್ದರು ಆದರೆ ಈಗ ಇಬ್ಬರೂ ಭೇಟಿ ನೀಡದೆ ಇರುವುದು ಅವರಿಗೆ ನೋವುಂಟು ಮಾಡಿದೆ.
ಅನಾರೋಗ್ಯದ ಕಾರಣದಿಂದಾಗಿ ದೀರ್ಘ ಪ್ರಯಾಣ ಮಾಡುವುದು ಅವರಿಗೆ ಕಷ್ಟವಾಗಲಿದೆ. ಹೀಗಾಗಿ ಉಪ ಚುನಾವಣೆ ಪ್ರಚಾರಕ್ಕೂ ತೆರಳುವುದು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನದಲ್ಲಿ ಇರಬೇಕೋ, ಬೇಡವೋ ಎಂಬ ಗೊಂದಲ ಸೃಷ್ಟಿಯಾಗಿದೆ. ರಾಜೀನಾಮೆ ನೀಡಿ ಆರೋಗ್ಯದ ಕಡೆ ಗಮನ ಹರಿಸಲು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಜೆಡಿಎಸ್ ಸಾರಥ್ಯ ವಹಿಸಿದ್ದ ವಿಶ್ವನಾಥ್ ಸಚಿವ ಸ್ಥಾನದ ಆಸೆ ಬಿಟ್ಟಿದ್ದರು
ಜೆಡಿಧ್ಯಕ್ಷರನ್ನಾಗಿ ಪರಿಯಾಪಟ್ಟಣದ ಶಾಸಕ ಅಡಗೂರು ಎಚ್ ವಿಶ್ವನಾಥ್ ಅವರನ್ನು ಪಕ್ಷದ ರಾಷ್ಟ್ರೀಯ ವರಿಷ್ಠ ಎಚ್ಡಿ ದೇವೇಗೌಡ ಅವರು ನೇಮಕ ಮಾಡಿದ್ದರು. ಇದರಿಂದ ಅವರು ಸಚಿವರಾಗುವ ಆಸೆಯನ್ನು ಅಲ್ಲಿಗೆ ಬಿಟ್ಟಿದ್ದರು. ಜೆಡಿಎಸ್ ಸಾರಥ್ಯ ವಹಿಸಿಕೊಂಡ ಮೇಲೆ ಸಚಿವರಾಗುವ ಕನಸು ಇಟ್ಟುಕೊಳ್ಳುವುದು ಸೂಕ್ತವಲ್ಲ ಎಂದುಕೊಂಡಿದ್ದರು.
ಜೆಡಿಎಸ್ ಅಧ್ಯಕ್ಷ ಎಚ್.ವಿಶ್ವನಾಥ್ಗೆ ದಸರಾ ಉಡುಗೊರೆ ನೀಡಿದ ಪಕ್ಷ
ಆಗಸ್ಟ್ 5 ರಂದು ಜೆಡಿಎಸ್ ಅಧ್ಯಕ್ಷರಾಗಿ ವಿಶ್ವನಾಥ್ ನೇಮಕ
ಆಗಸ್ಟ್ 5ರಂದು ಜೆಡಿಎಸ್ ನ ನೂತನ ರಾಜ್ಯಾಧ್ಯಕ್ಷರಾಗಿ ಎಚ್ ವಿಶ್ವನಾಥ್ ಅವರನ್ನು ಆಯ್ಕೆ ಮಾಡಲಾಯಿತು. ಕುರುಬ ಸಮುದಾಯದ ಪ್ರಮುಖ ನಾಯಕರೂ ಆಗಿರುವ ವಿಶ್ವನಾಥ್ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದರು. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆಗಸ್ಟ್ 5 ರಂದು ಜೆಡಿಎಸ್ ಅಧ್ಯಕ್ಷ ರಾಗಿ ಅಧಿಕಾರ ವಹಿಸಿಕೊಂಡಿದ್ದ ವಿಶ್ವನಾಥ್ ಆಟಕ್ಕೆ ಉಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದರು.
ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಅಡಗೂರು ಎಚ್ ವಿಶ್ವನಾಥ್ ಸಂದರ್ಶನ
ಜೆಡಿಎಸ್ ಅಧ್ಯಕ್ಷರಾದರೂ ಸಮನ್ವಯ ಸಮಿತಿ ಸದಸ್ಯರೇ ಆಗಲಿಲ್ಲ
ಸಿದ್ದರಾಮಯ್ಯ ಅಧ್ಯಕ್ಷ ರಾಗಿರುವ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಗೆ ಜೆಡಿಎಸ್ ಅಧ್ಯಕ್ಷ ವಿಶ್ವನಾಥ್ ಅವರನ್ನು ಸದಸ್ಯರಾಗಿ ಸೇರ್ಪಡೆ ಮಾಡಿರಲಿಲ್ಲ. ಹಾಗಾಗಿ ವಿಶ್ವನಾಥ್ ಜೆಡಿಎಸ್ ಅಧ್ಯಕ್ಷರಾಗಿದ್ದರೂ ಕೂಡ ಸಮನ್ವಯ ಸಮಿತಿ ಸದಸ್ಯರು ಆಗಿರಲಿಲ್ಲ.
ಉಪ ಚುನಾವಣೆ ಟಿಕೆಟ್ ಹಂಚಿಕೆ ವಿಶ್ವನಾಥ್ ಜತೆ ಚರ್ಚಿಸದ ದೇವೇಗೌಡ
ಎರಡು ವಿಧಾನಸಭೆ ಹಾಗೂ ಮೂರು ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ವೇಳೆ ವಿಶ್ವನಾಥ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ ಎನ್ನುವ ಅಸಮಾಧಾನ ಇತ್ತು. ಇದೀಗ ವಿಶ್ವನಾಥ್ ಅವರು ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಆಲೋಚಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.