ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮುಂದಾದ ಬಿಜೆಪಿ ಸರ್ಕಾರ
ಬೆಂಗಳೂರು, ಡಿ.17: ಹಿಂದಿನ ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆ ಇಂದಿರಾ ಕ್ಯಾಂಟೀನ್ಗಳ ಹೆಸರು ಬದಲಿಸಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿರುವುದು ವಿವಾದಕ್ಕೆ ಕಾರಣವಾಗುವ ಸಾಧ್ಯತೆಗಳಿವೆ. ಕಡು ಬಡವರ ಹಸಿವು ನೀಗಿಸಲು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಅಧಿಕಾರದಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೆ ತಂದಿದ್ದರು. ಈಗ ಇಂದಿರಾ ಕ್ಯಾಂಟೀನುಗಳ ಹೆಸರು ಬದಲಿಸಿ "ಮಹರ್ಷಿ ವಾಲ್ಮೀಕಿ ಅನ್ನಕುಟೀರ"ಗಳೆಂದು ಮರುನಾಮಕರಣ ಮಾಡಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಿ, "ಮಹರ್ಷಿ ವಾಲ್ಮೀಕಿ ಅನ್ನಕುಟೀರ" ಅಂತಾ ಮರುನಾಮಕರಣ ಮಾಡಲು ತೀರ್ಮಾನ ಮಾಡುತ್ತೇವೆ ಅಂತಾ ಕಂದಾಯ ಹಾಗೂ ಪೌರಾಡಳಿತ ಸಚಿವ ಆರ್. ಅಶೋಕ್ ಬೆಂಗಳೂರಿನಲ್ಲಿ ಇಂದು ಹೇಳಿರುವುದು ಮಹತ್ವ ಪಡೆದುಕೊಂಡಿದೆ.

ಆಹಾರದ ಕುರಿತು ದೂರುಗಳ ಬಗ್ಗೆಯೂ ತನಿಖೆ
ಇಂದಿರಾ ಕ್ಯಾಂಟೀನ್ ಹೆಸರು ಬದಲಿಸುವಂತೆ ಮಾಜಿ ಸಚಿವ, ಸುರಪುರ ಕ್ಷೇತ್ರದ ಬಿಜೆಪಿ ಶಾಸಕ ರಾಜೂಗೌಡ ಮನವಿ ಮಾಡಿದ್ದರು. ಅವರ ಮನವಿ ಪರಿಗಣಿಸುವುದು ಅತ್ಯಂತ ಸೂಕ್ತವೆಂದು ಕಂಡುಬಂದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಮಾಡುತ್ತೇವೆ ಅಂತಾ ಸಚಿವ ಆರ್. ಅಶೋಕ್ ವಿಧಾನಸೌಧದಲ್ಲಿ ಮಾಹಿತಿ ಕೊಟ್ಟಿದ್ದಾರೆ. ಇಂದಿರಾ ಕ್ಯಾಂಟೀನ್ ನಲ್ಲಿ ಕೊಡುವ ಆಹಾರದ ಬಗ್ಗೆಯೂ ದೂರುಗಳು ಬಂದಿವೆ. ಇಂದಿರಾ ಕ್ಯಾಂಟೀನ್ಗೆ ಅಮೂಲಾಗ್ರ ಬದಲಾವಣೆ ತರಲಾಗುವುದು ಅಂತಾ ಅಶೋಕ್ ಹೇಳಿದ್ದಾರೆ.

ಸಿಎಂ ಜೊತೆ ಚರ್ಚಿಸಿ ತೀರ್ಮಾನ
ಶಾಸಕ ರಾಜೂಗೌಡ ಮನವಿ ಪರಿಗಣಿಸ ಬಹುದಾಗಿದೆ ಎಂದು ಸರ್ಕಾರ ತೀರ್ಮಾನಿಸಿದೆ. ಆದರೆ ಬೆಂಗಳೂರು ಮಹಾನಗರ ಪೌರಾಡಳಿತ ಇಲಾಕೆ ವ್ಯಾಪ್ತಿಗೆ ಬರುವುದಿಲ್ಲ. ಅದರಿಂದಾಗಿ ಬೆಂಗಳೂರು ಮಹಾನಗರ ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿನ ಇಂದಿರಾ ಕ್ಯಾಂಟೀನ್ಗಳ ಹೆಸರು ಬದಲಾವಣೆಗೆ ಸಿಎಂ ಜೊತೆ ಚರ್ಚಿಸುತ್ತೇನೆ ಅಂತಾ ಪೌರಾಡಳಿತ ಖಾತೆಯನ್ನೂ ಹೊಂದಿರುವ ಸಚಿವ ಆರ್. ಅಶೊಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಹೆಸರನ್ನು ರಾಜ್ಯ ಬಿಜೆಪಿ ಸರ್ಕಾರ ಬದಲಾವಣೆ ಮಾಡುತ್ತದೆಯಾ? ಇಲ್ಲವಾ ನೋಡಬೇಕಿದೆ. ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಕಾಂಗ್ರೆಸ್ ಸರ್ಕಾರ ಆದೇಶ ಕೊಟ್ಟಿತ್ತು. ಸುಮಾರು 150ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್ಗಳಿವೆ.

ವಿಧಾನಸಭೆಯಲ್ಲಿ ಪ್ರಸ್ತಾಪವಾಗಿದ್ದ ಇಂದಿರಾ ಕ್ಯಾಂಟೀನ್ ಹಗರಣ
ಬಡವರ ಹಸಿವು ನೀಗಿಸಲು ಜಾರಿಗೆ ಬಂದ ಇಂದಿರಾ ಕ್ಯಾಂಟೀನ್ ಯೋಜನೆ ಆರಂಭ ಕಾಲದಿಂದಲೂ ಹಗರಣಗಳ ಆರೋಪ ಎದುರಿಸುತ್ತಿದೆ. ಒಂದು ಕ್ಯಾಂಟೀನ್ ನಿರ್ಮಾಣಕ್ಕೆ 28 ಲಕ್ಷ ರೂ. ವ್ಯಯಿಸಲಾಗಿದೆ. ವಾಸ್ತವವಾಗಿ ಕೇವಲ 9 ಲಕ್ಷ ರೂ.ಗಳಲ್ಲಿ ನಿರ್ಮಾಣವಾತ್ತವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 174 ಕ್ಯಾಂಟೀನ್ಗಳು, 15 ಮೊಬೈಲ್ ಕ್ಯಾಂಟೀನ್ಗಳು ಹಾಗೂ 20 ಅಡುಗೆ ಮನೆಗಳನ್ನ ನಿರ್ಮಾಣ ಮಾಡಲಾಗಿದೆ. ಅವುಗಳ ನಿರ್ಮಾಣದಲ್ಲಿ ಕೋಟ್ಯಂತರ ರೂಪಾಯಿಗಳ ಹಗರಣ ನಡೆದಿದೆ. ಇದಲ್ಲದೆ 62.70 ಲಕ್ಷ ಜನರಿಗೆ ಮೂರು ಹೊತ್ತು ಊಟ, ಉಪಹಾರ ವಿತರಣೆ ಮಾಡುತ್ತಿರುವ ಲೆಕ್ಕ ಕೊಟ್ಟು, ಗುತ್ತಿಗೆ ಪಡೆದಿರುವ ಚೆಫ್ಟಾಕ್ ಮತ್ತು ರಿವಾರ್ಡ್ಸ್ ಸಂಸ್ಥೆಗಳು ಪ್ರತಿ ತಿಂಗಳು 6,82,81,373 ರೂ.ಗಳನ್ನು ಸಬ್ಸಿಡಿ ರೂಪದಲ್ಲಿ ಪಡೆಯುತ್ತಿವೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ದಾಖಲೆ ಸಮೇತ ಸಿಎಂ ಯಡಿಯೂರಪ್ಪ ಅವರಿಗೆ ದೂರು ಕೊಟ್ಟಿದ್ದರು.
ದೂರಿನ ಹಿನ್ನೆಲೆಯಲ್ಲಿ ಮೂರು ತಿಂಗಳುಗಳಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಕಳೆದ ಆಗಷ್ಟ್ ತಿಂಗಳಿನಲ್ಲಿಯೆ ಸಿಎಂ ಯಡಿಯೂರಪ್ಪ ಸೂಚಿಸಿದ್ದರು. ಆದರೆ ಈ ವರೆಗೆ ವರದಿ ಬಂದಿಲ್ಲ ಎಂಬ ಮಾಹಿತಿಗೆ. ಇಂದಿರಾ ಕ್ಯಾಂಟೀನ್ ಹಗರಣದ ಬಗ್ಗೆ ವಿಧಾನಸಭೆಯಲ್ಲಿಯೂ ಮಾಜಿ ಸಚಿವ, ಬಿಜೆಪಿ ಶಾಸಕ ಎ.ಎಸ್. ರಾಮದಾಸ್ ದಾಖಲೆ ಬಿಡುಗಡೆ ಮಾಡಿದ್ದರು.

ಅಮ್ಮಾ ಕ್ಯಾಂಟೀನ್ ಎಂದಿದ್ದ ರಾಹುಲ್
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ 10 ರೂಪಾಯಿಗಳನ್ನು ಕೊಟ್ಟು ಉಪಹಾರ ಸೇವಿಸುವ ಮೂಲಕ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಿದ್ದರು. ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ. ಜಿ. ಪರಮೇಶ್ವರ್ ಅವರಿಂದ 10 ರೂ. ಗಳನ್ನ ಪಡೆದು ವಾಂಗೀಬಾತ್ ತೆಗೆದುಕೊಂಡಿದ್ದರು. ಇದೀಗ ರಾಜ್ಯ ಬಿಜೆಪಿ ಸರ್ಕಾರದ ಮರು ನಾಮಕರಣದ ನಿರ್ಧಾರಕ್ಕೆ ಕಾಂಗ್ರೆಸ್ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನ ನೋಡಬೇಕಿದೆ.












Click it and Unblock the Notifications