ಸ್ಪೀಕರ್ ರಮೇಶ್ ಕುಮಾರ್ ವಿದೇಶ ಪ್ರವಾಸ: ಸಮ್ಮಿಶ್ರ ಸರ್ಕಾರ ಬಚಾವ್?
ಬೆಂಗಳೂರು, ಜನವರಿ 15: ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡೆದ್ದು ರಾಜೀನಾಮೆ ನೀಡಲು ಕೆಲ ಕಾಂಗ್ರೆಸ್ ಶಾಸಕರು ಮುಂದಾಗಿದ್ದಾರೆ ಎಂಬ ಬೆಳವಣಿಗೆ ಹಿನ್ನೆಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ವಿದೇಶ ಪ್ರವಾಸಕ್ಕೆ ಹೊರಟಿದ್ದಾರೆ ಎಂಬ ಸುದ್ದಿ ಕಾಂಗ್ರೆಸ್ ವಲಯದಲ್ಲಿ ಕೇಳಿಬಂದಿದೆ.
ಮಂಗಳವಾರ ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ನಡೆದ ಕಾಂಗ್ರೆಸ್ ಹಿರಿಯ ನಾಯಕರ ಸಭೆಯಲ್ಲಿ ಈ ರೀತಿ ಚರ್ಚೆ ನಡೆದಿದ್ದು, ಸ್ಪೀಕರ್ ರಮೇಶ್ ಕುಮಾರ್ ವಿದೇಶ ಪ್ರವಾಸಕ್ಕೆ ತೆರಳಿದರೆ, ಜತೆಗೆ ಸರ್ಕಾರಕ್ಕೆ ಎದುರಾಗಿರುವ ಕಂಟಕದಿಂದ ಪಾರಾಗಬಹುದು ಎಂಬ ಸಲಹೆಯನ್ನು ಹಿರಿಯ ನಾಯಕರೊಬ್ಬರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ವಿದೇಶಕ್ಕೆ ತೆರಳಲಿದ್ದಾರೆ.
ಅತೃಪ್ತ ಶಾಸಕರ ರಾಜೀನಾಮೆ ತಡೆಯಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್
ಒಂದು ವೇಳೆ ಸ್ಪೀಕರ್ ರಮೇಶ್ ಕುಮಾರ್, ಬೆಂಗಳೂರು ಅಥವಾ ಕೋಲಾರದಲ್ಲಿ ವಾಸ್ತವ್ಯ ಮಾಡಿದರೆ ಕಾಂಗ್ರೆಸ್ನ ಐವರು ಮಂದಿ ಶಾಸಕರು ದಿನಕ್ಕೆ ಮೂರರಿಂದ ನಾಲ್ಕು ಜನರಂತೆ ಸರಣಿ ರಾಜೀನಾಮೆ ನೀಡುತ್ತಾರೆ ಎಂದಬ ಮಾಹಿತಿಯನ್ನು ಗುಪ್ತದಳ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಯವರಿಗೆ ನೀಡಿದೆ.
ಈ ಹಿನ್ನೆಲೆಯಲ್ಲಿ ಶಾಸಕರನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಉರುಳಿಸಲು ಮುಂದಾಗಿರುವ ಬಿಜೆಪಿಗೆ ಟಾಂಗ್ ಕೊಡಲು ಸರ್ಕಾರ ನಿರ್ಧರಿಸಿದ್ದು ಸ್ಪೀಕರ್ನ್ನು ವಿದೇಶಕ್ಕೆ ರವಾನಿಸುತ್ತಿದೆ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ ಸ್ಪೀಕರ್ ರಮೇಶ್ ಕುಮಾರ್ ಬುಧವಾರ ಬೆಳಗಿನ ಜಾವ ವಿದೇಶಕ್ಕೆ ತೆರಳಲಿದ್ದು ಜನವರಿ 26ರ ನಂತರವೇ ವಾಪಸಾಗಲಿದ್ದಾರೆ ಎನ್ನಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರವನ್ನು ಕೆಡವಲು ಜನವರಿ 23ರ ಗಡುವು ನೀಡಿದ್ದು ಆ ತರಾತುರಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಇತರರು ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಪ್ರಯತ್ನ ನಡೆಸುತ್ತಿದ್ದಾರೆ.
ಹೀಗಾಗಿ ಸ್ಪೀಕರ್ ಜನವರಿ 26ರ ನಂತರವೇ ವಾಪಸಾಗಲಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಸ್ಪೀಕರ್ ವಿದೇಶಕ್ಕೆ ತೆರಳಿದರೆ ಕಾಂಗ್ರೆಸ್ನ ಅತೃಪ್ತ ಶಾಸಕರ ರಾಜೀನಾಮೆ ಪ್ರಯತ್ನ ಟುಸ್ ಆಗಲಿದೆ ಆಗ ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಎದುರಾಗಿರುವ ಕಂಟಕ ದೂರವಾಗಲಿದೆ ಎನ್ನಲಾಗುತ್ತಿದೆ.
ಫೆ.1ರಿಂದ ಪ್ರಧಾನಿ ಮೋದಿ ಕೇಂದ್ರ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ, ಫೆ.8ಕ್ಕೆ ಕರ್ನಾಟಕದಲ್ಲಿ ಎಚ್ಡಿ ಕುಮಾರಸ್ವಾಮಿ ರಾಜ್ಯ ಬಜೆಟ್ ಮಂಡಿಸಲಿದ್ದಾರೆ.