ಮಗುವಿನ ಸಲುವಾಗಿ 'ಯಾರೊಂದಿಗಾದರೂ ಮಲಗು' ಎಂಬ ಒತ್ತಡ, ಮಹಿಳೆ ದೂರು
ಬೆಂಗಳೂರು, ಜುಲೈ 10: ಮಗುವೊಂದು ಆದರೆ ಮಾತ್ರ ಬೆಂಗಳೂರಿನ ಜಯನಗರದಲ್ಲಿ ಇರುವ ವಾಣಿಜ್ಯ ಕಟ್ಟಡವನ್ನು ಮಗಳ ಹೆಸರಿಗೆ ನೋಂದಣಿ ಮಾಡುವುದಾಗಿ ತಂದೆ ಹೇಳಿದ್ದು, ಆ ಮಹಿಳೆ ಪಾಲಿಗೆ ಉಲ್ಟಾ ಹೊಡೆದಿದೆ. ಒಂಬತ್ತು ವರ್ಷಗಳ ಹಿಂದೆಯೇ ಮದುವೆ ಆಗಿರುವ ಮಹಿಳೆ ಮತ್ತು ಆಕೆ ಪತಿಗೆ ಮಕ್ಕಳಿಲ್ಲ.
ಆದರೆ, ಆಸ್ತಿಯನ್ನು ಹೇಗಾದರೂ ಪಡೆಯಬೇಕು ಎಂಬ ಕಾರಣಕ್ಕೆ ಆಕೆಯ ಪತಿ, "ಯಾರೊಂದಿಗಾದರೂ ಮಲಗು", ಒಟ್ಟಿನಲ್ಲಿ ಮಗು ಆಗಲಿ ಎಂದು ಪೀಡಿಸುತ್ತಿರುವುದಾಗಿ ಮಹಿಳೆಯು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರಿನ ಪ್ರಕಾರ, ಮಹಿಳೆಯ ಮದುವೆಯನ್ನು ಅರಮನೆ ಮೈದಾನದಲ್ಲಿ ಮಾಡಿದ್ದು, ಅದಕ್ಕಾಗಿ ಐವತ್ತು ಲಕ್ಷ ರುಪಾಯಿ ಖರ್ಚು ಮಾಡಲಾಗಿದೆ. ಹತ್ತು ಕೋಟಿ ಮೌಲ್ಯದ ಚಿನ್ನ, ನೂರೈವತ್ತು ಕೇಜಿ ಬೆಳ್ಳಿ , ಬಿಎಂಡಬ್ಲ್ಯು ಕಾರು ಸೇರಿ ಇತರ ವಸ್ತುಗಳನ್ನು ವರದಕ್ಷಿಣೆಯಾಗಿ ನೀಡಲಾಗಿದೆ.

ಕೆಲ ತಿಂಗಳ ನಂತರ ಮಹಿಳೆಯ ಪತಿ, ಪೋಷಕರು ಹಾಗೂ ನಾದಿನಿ ಸೇರಿ ವರದಕ್ಷಿಣೆ ಹಾಗೂ ಸಣ್ಣ ವಿಷಯಗಳಿಗೂ ಹಿಂಸೆ ನೀಡಲು ಆರಂಭಿಸಿದ್ದಾರೆ. ಕೊನೆಗೆ ಮಹಿಳೆಯ ತಂದೆ ವರ್ಷಕ್ಕೆ ಒಂದು ಕೋಟಿ ರುಪಾಯಿ ನೀಡಲು ಒಪ್ಪಿಕೊಂಡು, ಜಯನಗರದ ವಾಣಿಜ್ಯ ಕಟ್ಟಡದ ಬಾಡಿಗೆಯಿಂದ ಬರುವ ಹಣವನ್ನು ಆರು ವರ್ಷ ನೀಡಿದ್ದಾರೆ. ಆಕೆಗೆ ಮಗುವಾದ ಕೂಡಲೇ ಆ ಕಟ್ಟಡವನ್ನು ಆಕೆ ಹೆಸರಿಗೇ ನೋಂದಣಿ ಮಾಡುವುದಾಗಿ ಹೇಳಿದ್ದಾರೆ.
ಆದರೆ, ಮಹಿಳೆಯ ಪತಿಗೆ ಲೈಂಗಿಕ ಆರೋಗ್ಯ ಸಮಸ್ಯೆಗಳು ಇವೆ. ಆದ್ದರಿಂದ ದಂಪತಿಗೆ ಮಗು ಪಡೆಯುವುದು ಸಾಧ್ಯವಿರಲಿಲ್ಲ. ಆ ಕಾರಣಕ್ಕೆ, ಯಾರೊಂದಿಗಾದರೂ ಮಲಗು ಎಂದು ಮಹಿಳೆಯನ್ನು ಆಕೆಯ ಪತಿ ಮತ್ತು ಅತ್ತೆ- ಮಾವ ಒತ್ತಡ ಹಾಕಲು ಆರಂಭಿಸಿದ್ದಾರೆ. ಇದೇ ವಿಷಯಕ್ಕೆ ಪದೇ ಪದೇ ಥಳಿಸುತ್ತಿದ್ದರು ಎಂದು ಮಹಿಳೆ ದೂರಿದ್ದಾರೆ.
ಮಹಿಳೆ ಪತಿಯ ತಂಗಿಗೆ ಹೈದರಾಬಾದ್ ನ ಉದ್ಯಮಿಯೊಬ್ಬರ ಜತೆ ಮದುವೆ ಆಗಿದೆ. ಆತ ಬೆಂಗಳೂರಿಗೆ ಬಂದಾಗಲೆಲ್ಲ ಅವನಿಂದ ಮಗು ಪಡೆಯುವಂತೆ ಒತ್ತಾಯಿಸಿದ್ದಾರೆ. ಒಪ್ಪದಿದ್ದಾಗ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಇದೀಗ ಮಹಿಳೆಯ ಪತಿ ಮತ್ತು ಕುಟುಂಬದವರ ವಿರುದ್ಧ ವರದಕ್ಷಿಣೆ ಕಿರುಕುಳ, ಕೊಲೆ ಯತ್ನ ಸೇರಿ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ.












Click it and Unblock the Notifications