ಗೌರಿ ಹತ್ಯೆ ಪ್ರಕರಣ: ಹುಬ್ಬಳ್ಳಿಯಲ್ಲಿ ಇಬ್ಬರನ್ನು ಬಂಧಿಸಿದ ಎಸ್ಐಟಿ
ಬೆಂಗಳೂರು, ಜುಲೈ 23: ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್ಐಟಿ ತಂಡ ಅತ್ಯಂತ ಚುರುಕಾಗಿ ಕಾರ್ಯ ನಿರ್ವಹಿಸುತ್ತಿದ್ದು, ನಿನ್ನೆ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಎಸ್ಐಟಿ ಅವರನ್ನು ಇಂದು ನಗರದ 3ನೇ ಎಎಂಸಿ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು.
ಬಂಧನಕ್ಕೊಳಗಾದವರನ್ನು ಗಣೇಶ್ ವಿಸ್ಕಿನ್ ಮತ್ತು ಅಮಿತ್ ರಾಮಚಂದ್ರ ಬದ್ದಿ ಎಂದು ಗುರುತಿಸಲಾಗಿದ್ದು, ಆರೋಪಿಗಳು ಹುಬ್ಬಳ್ಳಿಯ ಬನಶಂಕರಿ ದೇವಾಲಯ ಬೀದಿಯಲ್ಲಿ ವಾಸವಿದ್ದರು.

ಶಸ್ತ್ರಾಸ್ತ್ರ ನೀಡಿದ್ದ ಆರೋಪ
ಈ ಇಬ್ಬರು ಆರೋಪಿಗಳು ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದರು ಎನ್ನಲಾಗಿದ್ದು, ಗೌರಿ ಹತ್ಯೆಗೆ ಅಕ್ರಮ ಶಸ್ತ್ರಾಸ್ತ್ರವನ್ನು ಇವರೇ ನೀಡಿದ್ದರು ಎಂದು ಆರೋಪಿಸಲಾಗಿದೆ. ಬಂಧನ ವೇಳೆ ಈ ಇಬ್ಬರ ಬಳಿಯಿಂದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.

ಸುಳ್ಯ ಬಳಿ ಒಬ್ಬ ಆರೋಪಿ ಬಂಧನ
ಮೂರು ದಿನದ ಹಿಂದೆಯಷ್ಟೆ ಇದೇ ಕೇಸಿಗೆ ಸಂಬಂಧಪಟ್ಟಂತೆ ಸುಳ್ಯ ಬಳಿಯ ಸಂಪಂಜೆ ನಿವಾಸಿ ಮೋಹನ ನಾಯಕ್ ಎಂಬುವರನ್ನು ಬಂಧಿಸಿದ್ದರು. ಆತನೇ ಪರಶುರಾಮ್ ವಾಘ್ಮೋರೆಗೆ ಮನೆ ಕೊಡಿಸಿದ್ದಲ್ಲದೆ, ಹತ್ಯೆ ಮಾಡಲು ವಿವಿಧ ಹಂತಗಳಲ್ಲಿ ಸಹಾಯ ಮಾಡಿದ್ದ ಎಂದು ಆರೋಪಿಸಲಾಗಿದೆ.

ಪರಶುರಾಮ್ ವಾಘ್ಮೋರೆ ಖುಲಾಸೆ
ಈ ಮಧ್ಯೆ ಗೌರಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪರಶುರಾಮ್ ವಾಘ್ಮೋರೆಗೆ ಹಳೆಯ ಕೇಸೊಂದರಿಂದ ಬಿಡುಗಡೆ ದೊರೆತಿದೆ. ಆರು ವರ್ಷದ ಹಿಂದೆ ಸಿಂಧಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದ್ದ ಪ್ರಕರಣದಲ್ಲಿ ವಾಘ್ಮೋರೆಯನ್ನು ವಿಜಯಪುರ ಜಿಲ್ಲಾ ನ್ಯಾಯಾಲಯ ಖುಲಾಸೆ ಮಾಡಿದೆ. ಆತ ಈ ಪ್ರಕರಣದ 5ನೇ ಆರೋಪಿ ಆಗಿದ್ದ.

ಈವರೆಗೆ 10 ಮಂದಿ ಬಂಧನ
ಹುಬ್ಬಳ್ಳಿಯಲ್ಲಿ ನಿನ್ನೆ ಬಂಧಿಸಿರುವ ಇಬ್ಬರು ಸೇರಿದಂತೆ ಎಸ್ಐಟಿ ತಂಡವು ಗೌರಿ ಹತ್ಯೆ ಪ್ರಕರಣದಲ್ಲಿ ಈವರೆಗೆ 10 ಮಂದಿಯನ್ನು ಬಂಧಿಸಿದ್ದಾರೆ. ಮೊದಲಿಗೆ ಹೊಟ್ಟೆ ಮಂಜ ಅಲಿಯಾಸ್ ನವೀನ್ ಕುಮಾರ್ನನ್ನು ಬಂಧಿಸಿದ್ದ ಎಸ್ಐಟಿ ಆ ನಂತರ 9 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.












Click it and Unblock the Notifications