ಯೋಗಿ ಎಂದಾದ್ರೂ ದನ ಸಾಕಿದ್ರಾ,ಸೆಗಣಿ ಬಾಚಿದ್ರಾ? ಸಿದ್ದು ಟ್ವೀಟಾಸ್ತ್ರ!
ಬೆಂಗಳೂರು, ಜನವರಿ 09: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ವಾಕ್ಸಮರ ತಾರಕಕ್ಕೇರಿದೆ.
ಕರ್ನಾಟಕ ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸುವ ಸಲುವಾಗಿ ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ಯೋಗಿ ಆದಿತ್ಯನಾಥ್ ಅವರನ್ನು ಟ್ವೀಟ್ ಮೂಲಕ ಸ್ವಾಗತಿಸಿದ್ದ ಸಿದ್ದರಾಮಯ್ಯ, "ನಮ್ಮ ರಾಜ್ಯಕ್ಕೆ ಯೋಗಿ ಆದಿತ್ಯನಾಥ್ ಅವರನ್ನು ಸ್ವಾಗತಿಸುತ್ತೇನೆ. ನೀವು ನಮ್ಮ ರಾಜ್ಯದಿಂದ ಕಲಿಯುವುದು ಸಾಕಷ್ಟಿದೆ. ನೀವು ಇಲ್ಲಿಗೆ ಬಂದಾಗ ಒಮ್ಮೆ ಇಂದಿರಾ ಕ್ಯಾಂಟಿನ್ ಗೆ ಮತ್ತು ಒಂದು ರೇಷನ್ ಅಂಗಡಿಗೆ ಭೇಟಿ ನೀಡಿ. ಇದು ನಿಮ್ಮ ರಾಜ್ಯದಲ್ಲಿ ಹಸಿವಿನಿಂದ ಜನರು ಸಾವನ್ನಪ್ಪುತ್ತಿರುವ ಸಮಸ್ಯೆಯನ್ನು ನಿವಾರಿಸಲು ನೆರವಾದೀತು" ಎಂದಿದ್ದರು.
ಕರ್ನಾಟಕ ಸಿಎಂ vs ಉತ್ತರಪ್ರದೇಶ ಸಿಎಂ ಟ್ವಿಟ್ಟರ್ ವಾರ್
ನಂತರ ಬೆಂಗಳೂರಿಗೆ ಆಗಮಿಸಿದ್ದ ಯೋಗಿ ಆದಿತ್ಯನಾಥ್ ಅವರು, ಬಿಜೆಪಿ ಯಾತ್ರೆಯನ್ನುದ್ದೇಶಿಸಿ ಮಾತನಾಡುವಾಗ, "ಗುಜರಾತ್ ವಿಧಾನಸಭೆಯ ಚುನಾವಣೆಯ ಸಮಯದಲ್ಲಿ ರಾಹುಲ್ ಗಾಂಧಿ ಅನುಸರಿಸಿದ ಮಾರ್ಗವನ್ನೇ ಇಲ್ಲಿ ಸಿದ್ದರಾಮಯ್ಯ ಅನುಸರಿಸುತ್ತಿದ್ದಾರೆ. ಧರ್ಮ ಮತ್ತು ರಾಜಕೀಯವನ್ನು ಮಿಶ್ರಣ ಮಾಡುತ್ತಿದ್ದಾರೆ" ಎಂದು ದೂರಿದ್ದರು.
"ಯೋಗಿ ಮತ್ತೆ ರಾಜ್ಯಕ್ಕೆ ಬಂದ್ರೆ ಸಿದ್ದರಾಮಯ್ಯ 'ಜೈ ಶ್ರೀರಾಮ್' ಅಂತಾರೆ!"
ಆದರೆ ಯೋಗಿ ಆದಿತ್ಯನಾಥ್ ಬೆಂಗಳೂರಿನಿಂದ ಹಿಂತಿರುಗಿದ ಮೇಲೂ ಉಭಯ ನಾಯಕರ ನಡುವಿನ ವಾಕ್ಸಮರ ಮಾತ್ರ ನಿಂತಿಲ್ಲ. ಸಿದ್ದರಾಮಯ್ಯನವರು ಸಾಲು ಸಾಲು ಟ್ವೀಟ್ ಮೂಲಕ ಯೋಗಿ ಆದಿತ್ಯನಾಥ್ ಅವರ ಕಾಲೆಳೆದಿದ್ದಾರೆ.
|
ಧನ್ಯವಾದ ಅರ್ಪಿಸಿದ ಯೋಗಿ
"ನನ್ನನ್ನು ಕರ್ನಾಟಕಕ್ಕೆ ಸ್ವಾಗತಿಸಿದ್ದಕ್ಕೆ ಧನ್ಯವಾದಗಳು ಸಿದ್ದರಾಮಯ್ಯನವರೇ. ನನಗೆ ತಿಳಿದಿರುವಂತೆ ಕರ್ನಾಟಕದಲ್ಲಿ ಅತೀ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ನಿಮ್ಮದೇ ಆಡಳಿತಾವಧಿಯಲ್ಲಿ. ಅಷ್ಟೇ ಅಲ್ಲ, ಹಲವು ಪ್ರಾಮಾಣಿಕ, ಪಾರದರ್ಷಕ ಅಧಿಕಾರಿಗಳು ನಿಮ್ಮ ಆಡಳಿತಾವಧಿಯಲ್ಲೇ ಸಾವಿಗೀಡಾದರು ಎಂಬುದನ್ನೂ ಕೇಳಿದ್ದೇನೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ನಾನು ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದೇನೆ ಮತ್ತು ಕಾನೂನು-ಸುವ್ಯವಸ್ಥೆಯನ್ನು ಕಾಪಾಡುತ್ತಿದ್ದೇನೆ" ಎಂದು ಸಿದ್ದರಾಮಯ್ಯನವರ ಸ್ವಾಗತ ಟ್ವೀಟ್ ಗೆ ಖಡಕ್ ಉತ್ತರ ನೀಡಿದ್ದರು ಯೋಗಿ.
|
ಯೋಗಿ ಆದಿತ್ಯನಾಥ್ ದನ ಸಾಕಿದ್ದಾರಾ..?
ಯೋಗಿ ಆದಿತ್ಯನಾಥ್ ಅವರ ಟ್ವೀಟ್ ಗೆ ಮತ್ತು ಬಿಜೆಪಿ ಯಾತ್ರೆಯಲ್ಲಿ ಅವರು ಸಿದ್ದರಾಮಯ್ಯ ಅವರ ವಿರುದ್ಧ ನಡೆಸಿದ ವಾಗ್ದಾಳಿಗೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 'ನಾನು ದನ ಸಾಕಿದ್ದೇನೆ, ಮೇಯಿಸಿದ್ದೇನೆ, ಸೆಗಣಿ ಬಾಚಿದ್ದೇನೆ. ಗೋರಕ್ಷಣೆ-ಪಾಲನೆ ಬಗ್ಗೆ ಪಾಠ ಮಾಡುವ ಯೋಗಿ ಆದಿತ್ಯನಾಥ್ ದನ ಸಾಕಿದ್ದಾರಾ? ಇವರಿಗೆ ಗೋರಕ್ಷಣೆ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕಿದೆ?' ಎಂದು ಪ್ರಶ್ನಿಸಿದ್ದಾರೆ.
ನಮ್ಮದು ಗೋಡ್ಸೆ ಪರಂಪರೆಯ ಹಿಂದುತ್ವವಲ್ಲ!
"ನಮ್ಮದು ವಿವೇಕಾನಂದ ಪರಂಪರೆಯ ಹಿಂದುತ್ವ, ಗೋಡ್ಸೆ ಪರಂಪರೆಯ ಹಿಂದುತ್ವ ಅಲ್ಲ. ಗೋಹತ್ಯೆ ನಿಷೇಧದ ಬಗ್ಗೆ ನಮಗೆ ಪಾಠಮಾಡುವ ಮೊದಲು ಆ ಬಗ್ಗೆ ಸ್ವಾಮಿ ವಿವೇಕಾನಂದರು ಏನು ಹೇಳಿದ್ದರೆಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಓದಿಕೊಳ್ಳಲಿ." ಎಂದು ತೀಕ್ಷ್ಣವಾಗಿ ಸಿದ್ದರಾಮಯ್ಯ ಟ್ವೀಟಿಸಿದ್ದಾರೆ.
|
ನನಗೆ ಗೋಮಾಂಸ ಇಷ್ಟವಾಗೋಲ್ಲ, ಅದಿಕ್ಕೇ ತಿನ್ನೋಲ್ಲ!
"ನಮ್ಮ ಆಹಾರ ಪದ್ಧತಿಯನ್ನು ಪ್ರಶ್ನಿಸಲು ಇವರು ಯಾರು? ಹಿಂದುಗಳಲ್ಲಿಯೇ ಬಹಳ ಮಂದಿ ಗೋಮಾಂಸ ತಿನ್ನುತ್ತಾರೆ. ನನಗೆ ತಿನ್ನಬೇಕೆಂದರೆ ತಿನ್ನುತ್ತೇನೆ, ಬೇಡ ಎನ್ನಲು ಇವರು ಯಾರು? ನನಗೆ ಗೋಮಾಂಸ ಇಷ್ಟವಿಲ್ಲ ಅದಕ್ಕೆ ತಿನ್ನುವುದಿಲ್ಲ" ಎಂದು ಸಹ ಅವರು ಪ್ರತಿಕ್ರಿಯೆ ನೀಡಿದ್ದಾರೆ.