Breaking; ಬೆಂಗಳೂರು ಮಳೆ, ಸಿದ್ದರಾಮಯ್ಯ ನಗರ ಸಂಚಾರ
ಬೆಂಗಳೂರು, ಸೆಪ್ಟೆಂಬರ್ 08: ಬೆಂಗಳೂರು ನಗರದಲ್ಲಿ ಮಳೆ ಅವಾಂತರ ಸೃಷ್ಟಿ ಮಾಡಿದೆ. ನಗರದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಹಲವು ಬಡಾವಣೆಗಳಲ್ಲಿ ತುಂಬಿಕೊಂಡಿದ್ದ ನೀರು ನಿಧಾವಾಗಿ ಕಡಿಮೆಯಾಗುತ್ತಿದೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗುರುವಾರ ಬೆಂಗಳೂರು ನಗರ ಸಂಚಾರ ಕೈಗೊಂಡಿದ್ದಾರೆ. ಮಳೆಯಿಂದ ಹಾನಿಗೊಳಗಾದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಜನರ ಸಮಸ್ಯೆ ಆಲಿಸುತ್ತಿದ್ದಾರೆ.
Recommended Video

ಮಳೆಯಿಂದ ಜಲಾವೃತವಾಗಿರುವ ಬೆಳ್ಳಂದೂರು ರಿಂಗ್ ರಸ್ತೆಯ ಇಕೋ ಸ್ಪೇಸ್ ಬಡಾವಣೆಗೆ ಭೇಟಿ ನೀಡಿದರು. ಸ್ಥಳೀಯ ನಿವಾಸಿಗಳ ಸಮಸ್ಯೆ ಆಲಿಸಿ, ಶಾಶ್ವತ ಪರಿಹಾರಕ್ಕಾಗಿ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು.

ನೀರು ತುಂಬಿರುವ ಪ್ರದೇಶಗಳಲ್ಲಿ ಬೋಟ್ ಮೂಲಕ ಸಂಚಾರ ನಡೆಸಿ ಸಿದ್ದರಾಮಯ್ಯ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಸೇರಿದಂತೆ ಇತರ ನಾಯಕರು ಸಿದ್ದರಾಮಯ್ಯ ಜೊತೆಗಿದ್ದಾರೆ.
ಯಮಲೂರು, ಮಾರತ್ತಹಳ್ಳಿ ರಿಂಗ್ ರಸ್ತೆ, ಸರ್ಜಾಪುರ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಸಿದ್ದರಾಮಯ್ಯ ಪರಿಶೀಲನೆ ನಡೆಸಿದರು. "ಪ್ರವಾಹ ಪರಿಸ್ಥಿತಿಯ ಕಾರಣ ಬ್ರಾಂಡ್ ಬೆಂಗಳೂರಿಗೆ ಧಕ್ಕೆ ಉಂಟಾಗುತ್ತಿದೆ" ಎಂದು ಅವರು ಕಳವಳ ವ್ಯಕ್ತಪಡಿಸಿದರು.
"ಒತ್ತುವರಿಯಿಂದಾಗಿ ಸಮಸ್ಯೆಯಾಗುತ್ತಿದೆ ಎಂದರೆ ಶಾಸಕರು ಕಾರಣವಲ್ಲವೇ?. ಒತ್ತುವರಿ ಆಗುತ್ತಿರುವುದು ಅವರಿಗೆ ತಿಳಿದಿಲ್ಲವೇ?" ಎಂದು ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಮಳೆಯಿಂದ ಹಾನಿ ವೀಕ್ಷಣೆ ಮಾಡಲು ಕೇಂದ್ರದ ತಂಡ ಆಗಮಿಸಿದೆ. ಒಟ್ಟು ಮೂರು ತಂಡಗಳು ರಾಜ್ಯದಲ್ಲಿ ಮಳೆ ಹಾನಿ ವೀಕ್ಷಣೆ ಮಾಡಲಿವೆ.
ಒಂದು ತಂಡ ಗುರುವಾರ ಬೆಂಗಳೂರಿನ ಮಹದೇವಪುರಕ್ಕೆ ಭೇಟಿ ನೀಡಿದೆ. ಬೆಂಗಳೂರು ನಗರದಲ್ಲಿ ಮಹದೇವಪುರ ವ್ಯಾಪ್ತಿಯಲ್ಲಿಯೇ ಇತ್ತೀಚೆಗೆ ಭಾರೀ ಮಳೆಯಾಗಿದೆ. ಅಲ್ಲದೇ ಅಪಾರ ಹಾನಿಯೂ ಉಂಟಾಗಿದೆ.
ಬೆಂಗಳೂರು ನಗರದಲ್ಲಿ ಮಂಗಳವಾರ ಸಂಜೆಯಿಂದ ಮಳೆ ಆರ್ಭಟ ಕಡಿಮೆಯಾಗಿದೆ. ಆದರೆ ಸೆಪ್ಟೆಂಬರ್ 11ರ ತನಕ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications