ಅಂಗೈಯಲ್ಲಿ ಅರಮನೆ ತೋರಿಸಿದ ಪ್ರಧಾನಿ ಮೋದಿ ಸರ್ಕಾರ
ಬೆಂಗಳೂರು, ಆ. 28: ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಒಂದೇ ಪಕ್ಷದ ಆಡಳಿತವಿದ್ದರೆ ಸ್ವರ್ಗವನ್ನು ಸೃಷ್ಟಿಸಿ ಕೊಡುತ್ತೇವೆ ಎಂದು ಆಶ್ವಾಸನೆ ನೀಡಿದ್ದ ಬಿ.ಜೆ.ಪಿ. ಸರ್ಕಾರಗಳು ರಾಜ್ಯದ ಜನರನ್ನು ಇನ್ನಿಲ್ಲದಂತೆ ಶೋಷಿಸುತ್ತಿವೆ. ಕೊರೊನಾವೈರಸ್ ಸಂದರ್ಭದಲ್ಲಿ ಇಡೀ ದೇಶಾದ್ಯಂತ ಏಕಾಏಕಿ ಲಾಕ್ಡೌನ್ ಜಾರಿ ಮಾಡುವ ಮೂಲಕ ರಾಜ್ಯ ಸರ್ಕಾರಗಳಿಗೆ ಸಂಕಷ್ಟ ತಂದಿಟ್ಟಿದ್ದ ಕೇಂದ್ರ ಸರ್ಕಾರ ಈಗ ಮತ್ತೊಮ್ಮೆ ಅದಕ್ಕಿಂತ ದೊಡ್ಡ ಏಟು ಕೊಟ್ಟಿದೆ. ಕೋವಿಡ್-19 ನಿಂದಾಗಿ ಜಿಎಸ್ಟಿ ಸಂಗ್ರಹದಲ್ಲಿ ಕೊರತೆ ಉಂಟಾಗಿದ್ದು, ಜಿಎಸ್ಟಿ ಹಣವನ್ನು ಕೊಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಬದಲಿಗೆ ರಿಸರ್ವ್ ಬ್ಯಾಂಕ್ನಿಂದ ಸಾಲ ತೆಗೆದುಕೊಳ್ಳುವಂತೆ ಸೂಚಿಸಿದೆ.
Recommended Video
ಜಿಎಸ್ಟಿ ಸಂಗ್ರಹದಲ್ಲಿ ಸುಮಾರು 3 ಲಕ್ಷ ಕೋಟಿ ರುಪಾಯಿಗಳಷ್ಟು ಕೊರತೆಯಾಗಲಿದೆ ಎಂದು ನಿನ್ನೆ (ಆ.27) ನಡೆದ ಜಿ.ಎಸ್.ಟಿ. ಕೌನ್ಸಿಲ್ ಸಭೆಯಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ. ಜೊತೆಗೆ ಜಿಎಸ್ಟಿ ವ್ಯವಸ್ಥೆಯಿಂದ ಆಗಿರುವ ಆದಾಯ ಕೊರತೆಯಿಂದ 97 ಸಾವಿರ ಕೋಟಿ ರೂಪಾಯಿಗಳಷ್ಟಾಗಲಿದೆ. ಆದರಲ್ಲಿ 2.35 ಲಕ್ಷ ಕೋಟಿ ರೂಪಾಯಿಗಳ ಜಿ.ಎಸ್.ಟಿ ಪರಿಹಾರವನ್ನು ಈ ವರ್ಷ ನೀಡಲಾಗುವುದಿಲ್ಲವೆಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ತಿಳಿಸಿದೆ. ಕೊರತೆ ಹಣವನ್ನು ಆರ್.ಬಿ.ಐ. ನಿಂದ ಸಾಲ ಪಡೆದುಕೊಳ್ಳುವಂತೆ ರಾಜ್ಯಗಳಿಗೆ ಸೂಚಿಸಿರುವುದು ಸಂವಿಧಾನ ಬಾಹಿರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದ ದ್ರೋಹ
ಕೊರೊನಾ ವೈರಸ್ ಸಂಕಷ್ಟದ ನಡುವೆಯೂ ಕರ್ನಾಟಕ ಶೇ.71.61 ರಷ್ಟು ಜಿ.ಎಸ್.ಟಿ. ಸಂಗ್ರಹ ಮಾಡಿದೆ. ಆದರೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ರೂ.13,764 ಕೋಟಿಗಳನ್ನು ಬಾಕಿ ಉಳಿಸಿಕೊಂಡಿದೆ. ಜನವರಿಯವರೆಗೆ ಇದು ರೂ.27,000 ಕೋಟಿಗಳಿಗೆ ಏರಿಕೆಯಾಗಬಹುದು ಎಂದು ಅಂದಾಜು ಮಾಡಲಾಗಿದೆ. ಕೇಂದ್ರವು 15ನೇ ಹಣಕಾಸು ಆಯೋಗದ ವರದಿಯಲ್ಲೂ ರಾಜ್ಯಕ್ಕೆ ಭೀಕರ ತಾರತಮ್ಯ ಮಾಡಿದೆ. ಈಗ ಜಿ.ಎಸ್.ಟಿ.ಯಲ್ಲೂ ದ್ರೋಹ ಮಾಡುತ್ತಿದೆ.
ಕೇಂದ್ರ ಸರ್ಕಾರದ ಈ ನಿಲುವು ಸಂವಿಧಾನ ಬಾಹಿರ. ಸೆಕ್ಷನ್ 18 ರ ಪ್ರಕಾರ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಜಿ.ಎಸ್.ಟಿ. ಪರಿಹಾರವನ್ನು ಕಡ್ಡಾಯವಾಗಿ ನೀಡಬೇಕಾಗಿದೆ. ಇದನ್ನು ಪಡೆದುಕೊಳ್ಳುವುದು ರಾಜ್ಯಗಳ ಸಂವಿಧಾನಾತ್ಮಕ ಅಧಿಕಾರವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕೇಂದ್ರ ಸರ್ಕಾರವೇ ಸಾಲ ಮಾಡಲಿ
ಆದರೆ ಕೇಂದ್ರ ಸರ್ಕಾರವು ಒಕ್ಕೂಟ ತತ್ವದ ನಿಯಮಗಳಿಗೆ ವಿರುದ್ಧವಾಗಿ ವರ್ತಿಸುತ್ತಿದೆ. ತಾನು ಪರಿಹಾರ ನೀಡುವುದನ್ನು ತಪ್ಪಿಸಿಕೊಂಡು ರಾಜ್ಯಗಳು ಆರ್.ಬಿ.ಐ.ನಿಂದ ಸಾಲ ಪಡೆದುಕೊಂಡು ಪರಿಸ್ಥಿತಿಯನ್ನು ನಿಭಾಯಿಸುವಂತೆ ಹೇಳುತ್ತಿರುವುದು ರಾಜ್ಯದ ಜನರಿಗೆ ಮಾಡುತ್ತಿರುವ ಅತ್ಯಂತ ದೊಡ್ಡ ದ್ರೋಹವೆಂದು ಪರಿಗಣಿಸಬೇಕಾಗಿದೆ. ರಾಜ್ಯಗಳಿಗೆ ನ್ಯಾಯಯುತವಾಗಿ ನೀಡಬೇಕಾದ ಪರಿಹಾರದ ಬದಲಾಗಿ ಸಾಲದ ರೂಪದಲ್ಲಿ ಹಣ ಪಡೆದರೆ ಅದನ್ನು ಬಡ್ಡಿ ಸಮೇತ ತೀರಿಸುವ ಜವಾಬ್ದಾರಿ ರಾಜ್ಯಗಳದ್ದಾಗಿರುತ್ತದೆ. ಇದರಿಂದಾಗಿ ರಾಜ್ಯಗಳ ಅಭಿವೃದ್ಧಿಗೆ ತೊಂದರೆಯಾಗುತ್ತದೆ.
ಜಿ.ಎಸ್.ಟಿ. ನಿಯಮಗಳ ಪ್ರಕಾರ ಕೇಂದ್ರ ಸರ್ಕಾರವೇ ಸಾಲ ಪಡೆದು ರಾಜ್ಯಗಳಿಗೆ ಪರಿಹಾರವನ್ನು ನೀಡಬೇಕು. ಸಾಲಕ್ಕೆ ಕೇಂದ್ರ ಸರ್ಕಾರವೇ ಜವಾಬ್ದಾರಿಯಾಗಬೇಕೆ ಹೊರತು ಅದನ್ನು ಯಾವುದೇ ಕಾರಣಕ್ಕೂ ರಾಜ್ಯಗಳ ಮೇಲೆ ಹೊರಿಸಬಾರದು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಬನಾನ ರಿಪಬ್ಲಿಕ್ ರೀತಿಯ ಆಡಳಿತ
ಈಗಾಗಲೇ ಕೇಂದ್ರ ಸರ್ಕಾರವು ತನ್ನ ದುಷ್ಟ ಆರ್ಥಿಕ ನೀತಿಗಳಿಂದಾಗಿ ರಾಜ್ಯಗಳ ತೆರಿಗೆಯ ಅಧಿಕಾರವನ್ನು ನಿಧಾನವಾಗಿ ಕಿತ್ತುಕೊಳ್ಳುತ್ತಿದೆ. ಎ.ಪಿ.ಎಂ.ಸಿ. ಕಾಯ್ದೆಯ ತಿದ್ದುಪಡಿ ಇದಕ್ಕೆ ಅತ್ಯುತ್ತಮ ನಿದರ್ಶನ. ರಾಜ್ಯಗಳ ಆರ್ಥಿಕ ಚೈತನ್ಯವನ್ನು ಸಂಪೂರ್ಣ ನಾಶ ಮಾಡಿ ದೇಶವನ್ನು ‘ಬನಾನ ರಿಪಬ್ಲಿಕ್' ರೀತಿಯ ಆಡಳಿತ ವ್ಯವಸ್ಥೆಗೆ ದೇಶವನ್ನು ದೂಡಲು ಯತ್ನಿಸುತ್ತಿದೆ. ಕೇಂದ್ರ-ರಾಜ್ಯಗಳ ನಡುವೆ ಸಹಕಾರ ತತ್ವದ ಪ್ರಜಾಪ್ರಭುತ್ವ ಮಾದರಿಯ ವ್ಯವಸ್ಥೆ ಇರಬೇಕಾದ ಬದಲಿಗೆ ಸರ್ವಾಧಿಕಾರಿ ಪ್ರವೃತ್ತಿಯ ಕಡೆಗೆ ದೇಶವನ್ನು ದೂಡಲಾಗುತ್ತಿದೆ.
ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಒಂದೇ ಪಕ್ಷದ ಆಡಳಿತವಿದ್ದರೆ ಸ್ವರ್ಗವನ್ನು ಸೃಷ್ಟಿಸಿ ಕೊಡುತ್ತೇವೆ ಎಂದು ಆಶ್ವಾಸನೆ ನೀಡಿದ್ದ ಬಿ.ಜೆ.ಪಿ. ಸರ್ಕಾರಗಳು ರಾಜ್ಯದ ಜನರನ್ನು ಇನ್ನಿಲ್ಲದಂತೆ ಶೋಷಿಸುತ್ತಿವೆ.

ಅಮಾನವೀಯ ತೆರಿಗೆ
ಪೆಟ್ರೋಲ್, ಡೀಸೆಲ್ ದರ ನೂರು ರೂ.ಗಳನ್ನು ಮುಟ್ಟುತ್ತಿದೆ. ಪೆಟ್ರೋಲ್, ಡೀಸೆಲ್ಗಳ ಮೇಲೆ ಕೇಂದ್ರವು ಅಮಾನವೀಯ ರೀತಿಯಲ್ಲಿ ತೆರಿಗೆ ಹಾಕುತ್ತಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 40 ರಿಂದ 45 ಡಾಲರ್ಗಳಿಗೆ ಒಂದು ಬ್ಯಾರಲ್ ಕಚ್ಚಾ ತೈಲ ದೊರೆಯುತ್ತಿದೆ. ಸಂಸ್ಕರಣೆ, ಸಾಗಾಟ ಇತ್ಯಾದಿಗಳೆಲ್ಲವು ಸೇರಿದರೂ ರೂ.30 ಗಳಿಗೆ ಒಂದು ಲೀಟರ್ ಪೆಟ್ರೋಲ್ನ್ನು ಮಾರಬೇಕು. ಆದರೆ ಕೇಂದ್ರ ಸರ್ಕಾರವು ಜನರನ್ನು ಶತ್ರುಗಳೆಂದು ಭಾವಿಸಿ ತೆರಿಗೆ ಹಾಕುತ್ತಿದೆ. ಸಾಧ್ಯವಿರುವ ರೀತಿಯಲ್ಲೆಲ್ಲಾ ಜನರನ್ನು ಶೋಷಿಸುತ್ತಿರುವ ಅತ್ಯಂತ ಅಮಾನವೀಯ ಸರ್ಕಾರ ಇದು.
ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೂ ಆರ್.ಬಿ.ಐ.ನಿಂದ ಸಾಲ ಪಡೆಯುವ ಆಯ್ಕೆಯನ್ನು ಮಾಡಿಕೊಳ್ಳಬಾರದು. ಹೀಗೆ ಮಾಡಿದರೆ ರಾಜ್ಯದ ಸಂವಿಧಾನಾತ್ಮಕ ಅಧಿಕಾರಗಳನ್ನು ಕೇಂದ್ರದ ಕಾಲಿನ ಕೆಳಗೆ ದೂಡಿದಂತಾಗುತ್ತದೆ. ಇದರಿಂದ ರಾಜ್ಯವು ಇನ್ನಷ್ಟು ಗುಲಾಮಗಿರಿಯ ಕಡೆಗೆ ಸಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದ ಪಾಲಿಗೆ ಬರಬೇಕಾದ ಜಿ.ಎಸ್.ಟಿ. ಪಾಲನ್ನು ನಿರ್ದಾಕ್ಷಿಣ್ಯವಾಗಿ ಕೇಂದ್ರದಿಂದ ಪಡೆದುಕೊಳ್ಳಬೇಕು. ಈ ಮೂಲಕ ರಾಜ್ಯದ ಹಕ್ಕನ್ನು ಎತ್ತಿ ಹಿಡಿಯಬೇಕೆಂದು ಸಿದ್ದರಾಮಯ್ಯ ಅವರು ಆಗ್ರಹಿದ್ದಾರೆ.












Click it and Unblock the Notifications