Breaking; ಆಂಧ್ರದಲ್ಲಿ ಶಿವಾಜಿನಗರ ಪೊಲೀಸರ ವಾಹನ ಅಪಘಾತ, 2 ಸಾವು
ಅಮರಾವತಿ, ಜುಲೈ 24; ಬೆಂಗಳೂರಿನ ಶಿವಾಜಿನಗರ ಠಾಣೆ ಪೊಲೀಸ್ ಸಿಬ್ಬಂದಿ ಇದ್ದ ಕಾರು ಚಿತ್ತೂರಿನ ಬಳಿ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಚಿತ್ತೂರು-ತಿರುಮಲ ರಸ್ತೆಯ ಪೂತಲಪಟ್ಟು ಮಂಡಲದ ಪಿ. ಕೋಟಕೊಟ್ಟ ರೈಲ್ವೆ ಕೆಳಸೇತುವೆ ಬಳಿ ಈ ಅಪಘಾತ ಸಂಭವಿಸಿದೆ. ಅಪರಾಧ ಪ್ರಕರಣವೊಂದರ ಗ್ಯಾಂಗ್ ಹಿಡಿಯಲು ಶಿವಾಜಿನಗರ ಪೊಲೀಸರ ತಂಡ ಆಂಧ್ರ ಪ್ರದೇಶಕ್ಕೆ ತೆರಳಿತ್ತು.
ಸಬ್ ಇನ್ಸ್ಪೆಕ್ಟರ್ ಅವಿನಾಶ್, ಪ್ರೊಬೆಷನರಿ ಪಿಎಸ್ಐ ದೀಕ್ಷಿತ್, ಪೊಲೀಸ್ ಕಾನ್ಸ್ಟೇಬಲ್ ಅನಿಲ್ ಸೇರಿದಂತೆ 6 ಜನರ ತಂಡ ಖಾಸಗಿ ಟ್ರಾವೆಲ್ಸ್ನ ಇನ್ನೋವಾ ಕಾರಿನಲ್ಲಿ ತೆರಳಿತ್ತು.

ಭಾನುವಾರ ಮುಂಜಾನೆ 3 ಗಂಟೆ ಸುಮಾರಿಗೆ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಬಳಿಕ ಪಕ್ಕದ ರಸ್ತೆಗೆ ಹೋಗಿ ಬಿದ್ದಿದೆ. ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಪಿಎಸ್ಐ ಅವಿನಾಶ್, ಕಾನ್ಸ್ಟೇಬಲ್ ಅನಿಲ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕಾರಿನ ಚಾಲಕ ಸಹ ಮೃತಪಟ್ಟಿದ್ದು, ಹೆಸರು ಇನ್ನೂ ತಿಳಿದಿಲ್ಲ.
ಪ್ರೊಬೆಷನರಿ ಪಿಎಸ್ಐ ದೀಕ್ಷಿತ್ ಸೇರಿದಂತೆ ಇತರರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೆಂಗಳೂರಿನ ಪುಲಿಕೇಶಿ ನಗರ ಎಸಿಪಿ ಅಬ್ದುಲ್ಲಾ ಮತ್ತು ಶಿವಾಜಿನಗರ ಠಾಣೆಯ ಇತರ ಸಿಬ್ಬಂದಿ ಸ್ಥಳಕ್ಕೆ ತೆರಳುತ್ತಿದ್ದಾರೆ.
ಗೃಹ ಸಚಿವರ ಸಂತಾಪ; ಶಿವಾಜಿನಗರ ಪೊಲೀಸ್ ಠಾಣೆಯ ಸಿಬ್ಬಂದಿ ಅಪಘಾತದಲ್ಲಿ ಸಾವನ್ನಪ್ಪಿರುವುದಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಸಂತಾಪ ಸೂಚಿಸಿದ್ದಾರೆ.
ತುರ್ತಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪೊಲೀಸ್ ಸಿಬ್ಬಂದಿ ಮೃತಪಟ್ಟಿರುವುದು ಅತ್ಯಂತ ನೋವು ತಂದಿದೆ ಎಂದು ಸಚಿವರು ಕಂಬನಿ ಮಿಡಿದಿದ್ದಾರೆ.
ಗಾಂಜಾ ಪ್ರಕರಣವೊಂದರ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಚಿತ್ತೂರಿನ ಬಳಿ ಗ್ಯಾಂಗ್ ಇರುವ ಮಾಹಿತಿ ಸಿಕ್ಕಿತ್ತು. ಆದ್ದರಿಂದ ಖಾಸಗಿ ಟ್ರಾವೆಲ್ಸ್ನ ಕಾರಿನಲ್ಲಿ ಪೊಲೀಸರ ತಂಡ ಅವರನ್ನು ಹಿಡಿಯಲು ತೆರಳಿತ್ತು ಎಂಬ ಮಾಹಿತಿ ಸಿಕ್ಕಿದೆ.
ಮುಖ್ಯಮಂತ್ರಿಗಳ ಟ್ವೀಟ್; ಘಟನೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ. ಕರ್ತವ್ಯದ ನಿಮಿತ್ತ ಆಂಧ್ರದ ಚಿತ್ತೂರಿಗೆ ತೆರಳಿದ್ದ ಬೆಂಗಳೂರು ಪೋಲಿಸ್ ಸಿಬ್ಬಂದಿಗಳ ವಾಹನ ಅಪಫಾತಕ್ಕೀಡಾಗಿ, ಇಬ್ಬರು ಪೋಲಿಸ್ ಸಿಬ್ಬಂದಿ ಹಾಗೂ ಓರ್ವ ವಾಹನ ಚಾಲಕ ದುರ್ಮರಣಕ್ಕೀಡಾದ ವಿಷಯ ಅತ್ಯಂತ ದುರದೃಷ್ಟಕರ ಎಂದು ಹೇಳಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ಕೋರಿ ಅವರ ಕುಟುಂಬದವರಿಗೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಗಾಯಾಳುಗಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸಲು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.












Click it and Unblock the Notifications