ರಾಜಕಾಲುವೆಗೆ ತ್ಯಾಜ್ಯ, ಜಲಮಂಡಳಿ ವಿರುದ್ಧ ದೂರು
ಬೆಂಗಳೂರು, ಅಕ್ಟೋಬರ್ 03 : ತ್ಯಾಜ್ಯಗಳನ್ನು ರಾಜಕಾಲುವೆಗೆ ಸುರಿಯುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯುನೈಟೆಡ್ ಬೆಂಗಳೂರು ಭಾಗವಾಗಿರುವ 'ನಾಗರಿಕ' ಪೊಲೀಸರಿಗೆ ದೂರು ನೀಡಿದೆ.
ಬೆಂಗಳೂರು ಜಲಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಶೋಕ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ರಾಜಕಾಲುವೆಗೆ ಅಕ್ರಮವಾಗಿ ತಾಜ್ಯಗಳನ್ನು ಸುರಿಯುತ್ತಿರುವುದಕ್ಕೆ ಜಲಮಂಡಳಿಯೇ ಹೊಣೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
HOSMAT ಆಸ್ಪತ್ರೆ ಸಮೀಪ ಸೆ.19ರಂದು ಸಂಜೆ 5 ಗಂಟೆಗೆ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ರಾಜ ಕಾಲುವೆಯಲ್ಲಿ ತಾಜ್ಯಗಳನ್ನು ಸುರಿಯಲಾಗಿದೆ ಎಂಬುದು ಆರೋಪವಾಗಿದೆ. ಈ ರಾಜಕಾಲುವೆ ಬೆಳ್ಳಂದೂರು ಕೆರೆಗೆ ಸಂಪರ್ಕ ಕಲ್ಪಿಸುತ್ತದೆ.

ಬೆಳ್ಳಂದೂರು ಕೆರೆ ಈಗಾಗಲೇ ಭಾರಿ ಮಾಲಿನ್ಯಕ್ಕೆ ಒಳಗಾಗಿದೆ. ಆದರೆ, ಜಲ ಮಂಡಳಿ ಅಧಿಕಾರಿಗಳು ತ್ಯಾಜ್ಯವನ್ನು ಸುರಿಯುತ್ತಿರುವುದನ್ನು ತಡೆಯಲು ವಿಫಲರಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಜಲಮಂಡಳಿ ಟ್ಯಾಂಕರ್ ಕೆಎ 53, ಬಿ3472 ಸೆ.19ರಂದು ರಾಜಕಾಲುವೆಗೆ ತ್ಯಾಜ್ಯವನ್ನು ಸುರಿದಿದೆ. ಇದನ್ನು ಗಮನಿಸಿದ ಪಾದಚಾರಿಗಳು ಈ ಬಗ್ಗೆ ಕೇಳಿದಾಗ ನಿರಂತರವಾಗಿ ರಾಜಕಾಲುವೆಗೆ ತ್ಯಾಜ್ಯ ಸುರಿಯುತ್ತಿರುವುದಾಗಿ ಹೇಳಿದ್ದಾರೆ.
ಅಸಿಸ್ಟೆಂಟ್ ಇಂಜಿನಿಯರ್ ರಮೇಶ್ ಈ ರೀತಿ ಮಾಡಲು ಹೇಳಿದ್ದಾರೆ ಎಂದು ಟ್ಯಾಂಕರ್ ಚಾಲಕ ಹೇಳಿದ್ದಾನೆ. ಈ ಕುರಿತು ಡ್ರೈವರ್ ನೀಡಿದ ಹೇಳಿಕೆಯ ವಿಡಿಯೋವನ್ನು ಸಹ ದೂರಿನೊಂದಿಗೆ ಸಲ್ಲಿಸಲಾಗಿದೆ.
ನಮ್ಮ ಬೆಂಗಳೂರು ಫೌಂಡೇಷನ್ನ ರಿಸರ್ಚ್ ಅನಾಲಿಸ್ಟ್ ಎಂ.ಲಕ್ಷ್ಮೀಕಾಂತ್ ಅವರು ಈ ಕುರಿತು ಮಾತನಾಡಿದ್ದಾರೆ, 'ಪೊಲೀಸರಿಗೆ ದೂರು ನೀಡಿದ್ದೇವೆ. ಎಫ್ಐಆರ್ ದಾಖಲು ಮಾಡಲಾಗಿದೆ. ಎರಡು ದಿನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಲಾಗುತ್ತದೆ' ಎಂದು ಹೇಳಿದ್ದಾರೆ.












Click it and Unblock the Notifications