ಪ್ರಚಾರಕ್ಕೆ 'ಬೈ' ಹೇಳಿ, ವಿದೇಶಕ್ಕೆ ಹಾರಿದ 'ಕೈ' ನಾಯಕ
ಬೆಂಗಳೂರು, ನವೆಂಬರ್ 26: ರಾಜ್ಯದಲ್ಲಿ ಉಪ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಉಪ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಜಿದ್ದಿಗೆ ಬಿದ್ದಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಪ್ರಚಾರದ ಆಖಾಡಕ್ಕೆ ಧುಮುಕಿವೆ.
ಆದರೂ ಪಕ್ಷಗಳಲ್ಲಿನ ಆಂತರಿಕ ಬೇಗುದಿ ಆಗಾಗ ಹೊರಬರುತ್ತಲೇ ಇವೆ. ಅದರಲ್ಲೂ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಜಾಸ್ತಿನೇ ಇದ್ದಂಗಿದೆ. ಪಕ್ಷವು ತಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಯಿಂ ಚುನಾವಣಾ ಪ್ರಚಾರಕ್ಕೆ ಕೈಕೊಟ್ಟು ವಿದೇಶಕ್ಕೆ ಹಾರಿದ್ದಾರೆ.
ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಇಬ್ರಾಯಿಂ ಹೆಸರು ಇದ್ದರೂ ಸಹ ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲಿನ ಮುನಿಸಿನಿಂದಾಗಿ ಎಲೆಕ್ಷನ್ ಪ್ರಚಾರದಿಂದ ದೂರವುಳಿದಿದ್ದಾರೆ. ಆ ಕಡೆ ವಿಪಕ್ಷ ನಾಯಕ ಸ್ಥಾನವೂ ಸಿಗಲಿಲ್ಲ, ಈ ಕಡೆ ತಾವು ಸೂಚಿಸಿದವರಿಗೆ ಶಿವಾಜಿನಗರ ಟಿಕೆಟ್ ಕೊಡಲಿಲ್ಲ ಎಂಬ ಅಸಮಾಧಾನ ಇಬ್ರಾಯಿಂ ಅವರಿಗಿದೆ.

ಪಕ್ಷದ ಮೇಲೆಯೂ ಅವರು ಮುನಿಸಿಕೊಂಡಿದ್ದಾರೆ ಎಂಬ ಮಾತಿದೆ. ಸದ್ಯ ಎಲೆಕ್ಷನ್ ಆಖಾಡ ಬಿಟ್ಟು ಅಬುಧಾಬಿ ಪ್ರವಾಸದಲ್ಲಿದ್ದಾರೆ. ಶಿವಾಜಿನಗರ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಲು ಸೂಚನೆ ನೀಡಿತ್ತು. ಆದರೆ ತಮಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗಲಿಲ್ಲ ಎಂದು ಉಪ ಚುನಾವಣಾ ಪ್ರಚಾರದಿಂದ ದೂರವುಳಿದಿದ್ದಾರೆ.
ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣಾ ಕಣದಲ್ಲಿ ಕಾಂಗ್ರೆಸ್ ನಿಂದ ರಿಜ್ವಾನ್ ಅರ್ಷದ್, ಬಿಜೆಪಿಯಿಂದ ಸರವಣ್, ಜೆಡಿಎಸ್ ನಿಂದ ತನ್ವೀರ್ ಇದ್ದು, ಮತದಾನ ಡಿಸೆಂಬರ್ 05 ರಂದು ನಡೆಯಲಿದ್ದು, ಫಲಿತಾಂಶ ಡಿಸೆಂಬರ್ 09 ರಂದು ಪ್ರಕಟಗೊಳ್ಳಲಿದೆ.












Click it and Unblock the Notifications