ರವಿ ಬೆಳಗೆರೆ ವಿರುದ್ಧದ ಕೇಸ್ ಬಲವಾಗಿದೆ : ಸಂಗ್ರಾಮ್ ಸಿಂಗ್
Recommended Video
ಬೆಂಗಳೂರು, ಡಿಸೆಂಬರ್ 9: "ಸುಪಾರಿ ಅಂದರೆ ಯಾರನ್ನಾದರೂ ಕೊಲೆ ಮಾಡುವಂತೆ ದುಡ್ಡು ಮತ್ತೊಂದು ನೀಡಿ, ಪ್ರೇರಣೆ ನೀಡೋದು. ರವಿ ಬೆಳಗೆರೆ ಅವರ ಪ್ರಕರಣದಲ್ಲಿ ಸುಪಾರಿ ಪಡೆದ ವ್ಯಕ್ತಿ ಹಾಗೂ ಮತ್ತೊಬ್ಬ ತಾಹೀರ್ ಸಾಕ್ಷಿಯಾಗಿ ಇದ್ದಾರೆ. ಈ ಹಂತದಲ್ಲಿ ಹೇಳಬಹುದಾದದ್ದು ಏನೆಂದರೆ, ಈ ಪ್ರಕರಣ ಗಟ್ಟಿಯಾಗಿದೆ" ಎಂದರು ನಿವೃತ್ತ ಎಸಿಪಿ ಸಂಗ್ರಾಮ್ ಸಿಂಗ್.
ಪತ್ರಕರ್ತ ರವಿ ಬೆಳಗೆರೆ ನಾಲ್ಕು ದಿನ ಸಿಸಿಬಿ ಪೊಲೀಸರ ವಶಕ್ಕೆ
ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ರವಿ ಬೆಳಗೆರೆ ಸುಪಾರಿ ನೀಡಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಶನಿವಾರ ಬೆಳಗ್ಗೆಯಿಂದ ವಿಚಾರಣೆ ಕೂಡ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಡೀ ಪ್ರಕರಣದ ಕಾನೂನು ಅಂಶಗಳ ಬಗ್ಗೆ ಒನ್ಇಂಡಿಯಾ ಕನ್ನಡವು ಸಂಗ್ರಾಮ್ ಸಿಂಗ್ ಅವರ ಸಂದರ್ಶನ ಮಾಡಿದೆ.
ಸುನಿಲ್ ಹತ್ಯೆಗೆ ಸುಪಾರಿ, ಬೆಳೆಗೆರೆ ವಿರುದ್ಧ ಎಫ್ಐಆರ್ : ಎಸಿಪಿ ಸತೀಶ್
ಸುಪಾರಿ ಹತ್ಯೆಗೆ ಪ್ರಯತ್ನ ಮಾಡಿರುವುದು ಐಪಿಸಿ ಸೆಕ್ಷನ್ 307 ಅಡಿ ಬರುತ್ತದೆ. ಇನ್ನು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಸೆಕ್ಷನ್ 3 ಹಾಗೂ 25ರ ಅಡಿಯಲ್ಲೂ ಪ್ರಕರಣ ದಾಖಲಾಗಿದೆ. ಒಂದು ವೇಳೆ ಕೊಲೆ ಯತ್ನದ ಪ್ರಕರಣ ದಾಖಲಾದರೆ ಏಳು ವರ್ಷದ ತನಕ ಶಿಕ್ಷೆ ಆಗಬಹುದು. ಅದು ನ್ಯಾಯಾಧೀಶರ ವಿವೇಚನೆಗೆ ಬಿಟ್ಟ ವಿಚಾರ ಆಗಿರುತ್ತದೆ ಎಂದರು ಸಂಗ್ರಾಮ್ ಸಿಂಗ್.
ರಾಜಕೀಯ ಪಿತೂರಿ ಆರೋಪ ಸಾಬೀತು ಮಾಡಬೇಕು
ರವಿ ಬೆಳಗೆರೆ ವಿರುದ್ಧ ರಾಜಕೀಯ ಪಿತೂರಿ ಮಾಡಲಾಗಿದೆ ಎಂಬ ಮಾತುಗಳನ್ನು ಹೇಳಲಾಗುತ್ತಿದೆ. ಅದರ ಆಧಾರದಲ್ಲಿ ಜಾಮೀನಿಗೆ ಪ್ರಯತ್ನಿಸಲು ಇರಬಹುದು. ಆದರೆ ಅಂಥ ಆರೋಪಗಳನ್ನು ಸಾಬೀತು ಮಾಡಬೇಕಾಗುತ್ತದೆ. ಸಾಬೀತು ಮಾಡುವಂಥ ಅಂಶಗಳನ್ನು ನ್ಯಾಯಾಧೀಶರ ಎದುರು ಮಂಡಿಸಿದರೆ ಮಾತ್ರ ಜಾಮೀನು ಸಿಗುತ್ತದೆ. ಆ ಸಾಧ್ಯತೆ ಕಡಿಮೆ ಎಂದರು.
ತಮ್ಮದೇ ಪಿಸ್ತೂಲು-ಗುಂಡು ನೀಡಿದ್ದರೆ ಶಿಕ್ಷಾರ್ಹ ಅಪರಾಧ
ಸದ್ಯಕ್ಕೆ ಕೇಳಿಬರುತ್ತಿರುವ ಆರೋಪ ಏನೆಂದರೆ, ಸುಪಾರಿ ಕೊಲೆಗಾರನಿಗೆ ತಮ್ಮದೇ ಪಿಸ್ತೂಲು ಹಾಗೂ ಗುಂಡು ನೀಡಿದ್ದಾರೆ. ಅದು ಸಾಬೀತಾದರೆ ಅಪರಾಧ ಕೃತ್ಯಕ್ಕೆ ತಮ್ಮ ಶಸ್ತ್ರಾಸ್ತ್ರ ನೀಡಿರುವುದು ಖಚಿತವಾದಂತಾಗುತ್ತದೆ. ಅದು ಶಿಕ್ಷಾರ್ಹ ಅಪರಾಧ. ಈ ಪ್ರಕರಣ ಮತ್ತಷ್ಟು ಗಟ್ಟಿಯಾದಂತೆ ಆಗುತ್ತದೆ ಎನ್ನುತ್ತಾರೆ ಅವರು.
ವಿಚಾರಣೆ ಈಗಿನ್ನೂ ಆರಂಭ
ಗೌರಿ ಲಂಕೇಶ್ ಹತ್ಯೆಗೂ ಹಾಗೂ ಈಗ ರವಿ ಬೆಳಗೆರೆ ಅವರ ಮೇಲೆ ಬಂದಿರುವ ಆರೋಪಕ್ಕೂ ಈ ಹಂತದಲ್ಲಿ ತಳುಕು ಹಾಕುವುದು ಸಾಧ್ಯವಿಲ್ಲ. ಶನಿವಾರವಿನ್ನೂ ರವಿ ಬೆಳಗೆರೆಯ ವಿಚಾರಣೆಯನ್ನು ಪೊಲೀಸರು ಆರಂಭಿಸಿದ್ದಾರೆ. ಮುಂದೆ ಏನೇನು ಸಂಗತಿ ಹೊರಬರುತ್ತದೋ ಹಾಗೂ ಸಾಕ್ಷ್ಯಗಳು ಸಿಗುತ್ತವೋ ಅದರ ಆಧಾರದ ಮೇಲಷ್ಟೇ ನಿರ್ಧರಿಸಬಹುದು ಎಂದರು.
90 ದಿನದೊಳಗೆ ಚಾರ್ಜ್ ಶೀಟ್
ಈ ಪ್ರಕರಣದಲ್ಲಿ 90 ದಿನದೊಳಗೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ಆ ನಂತರ ಕೋರ್ಟ್ ನಿಂದ ಜಾಮೀನು ಸಿಗುವುದು ಕಷ್ಟವಲ್ಲ. ದೂರುದಾರರಾಗಿ ಪೊಲೀಸ್ ಅಧಿಕಾರಿಯೇ ಇದ್ದಾರೆ. ಇನ್ನು ಸಾಕ್ಷ್ಯಾಧಾರಗಳೂ ಬಲವಾಗಿರುವುದರಿಂದ ಮುಂದೇನು ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಪೊಲೀಸರ ಮೇಲೆ ಯಾವುದೇ ರಾಜಕೀಯ ಒತ್ತಡ ತರದೆ ತನಿಖೆ ಮಾಡಲು ಅವಕಾಶ ನೀಡಬೇಕು ಎಂದು ನಿವೃತ್ತ ಎಸಿಪಿ ಸಂಗ್ರಾಮ್ ಸಿಂಗ್ ಹೇಳಿದರು.