ಕೇರಳದ ಸುಪಾರಿ ಕಿಲ್ಲರ್ಸ್ ಗಳಿಂದ ರುದ್ರೇಶ್ ಹತ್ಯೆ ಶಂಕೆ?
ಬೆಂಗಳೂರು, ಅಕ್ಟೋಬರ್ 18: ಸುಳ್ಯದ ಇಸ್ಮಾಯಿಲ್ ಹತ್ಯೆ, ಕಣ್ಣೂರಿನ ಮರ್ಡರ್ಸ್ ಸೇರಿದಂತೆ ಸರಣಿ ಹತ್ಯೆಗೆ ಕಾರಣವಾದ ಸುಪಾರಿ ಕಿಲ್ಲರ್ಸ್ ಗಳಿಂದಲೇ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯಾಗಿರುವ ಶಂಕೆ ವ್ಯಕ್ತವಾಗಿದೆ.
ರುದ್ರೇಶ್ ಹತ್ಯೆಗೆ ವೃತ್ತಿಪರ ಹಂತಕರ ಬಳಕೆ ಬಗ್ಗೆ ಸಂಶಯ ಮೂಡಿದೆ. ಕೇರಳ ಮೂಲದ ಹಂತಕರು ಎಂಬ ಶಂಕೆ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ತನಿಖಾ ತಂಡವೊಂದನ್ನು ಕೇರಳಕ್ಕೆ ಕಳಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್ ಎಸ್ ಮೇಘರಿಕ್ ಹೇಳಿದ್ದಾರೆ.[ರುದ್ರೇಶ್ ಕೊಲೆ ಹಿಂದೆ ಕಾರ್ಪೊರೇಟರ್ ಕೈವಾಡ?]
ದುಷ್ಕರ್ಮಿಗಳಿಂದ ಭೀಕರವಾಗಿ ಹತ್ಯೆಯಾದ ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಅವರ ಅಂತ್ಯ ಸಂಸ್ಕಾರ ಮಂಗಳವಾರ ಕಾಕ್ಸ್ ಟೌನ್ ಬಳಿಯ ಜೀವನಹಳ್ಳಿ ಬಳಿಯ ಕಲ್ಲಪಳ್ಳಿ ಸ್ಮಶಾನದಲ್ಲಿ ಯಾದವ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಶಾಸಕರು, ಸಂಘ ಪರಿವಾರ, ಬಿಜೆಪಿ ಸೇರಿದಂತೆ ಹಲವಾರು ಸಂಘಟನೆಗಳ ಸಾವಿರಾರು ಮಂದಿ ಪಾಲ್ಗೊಂಡಿದ್ದರು.['ರುದ್ರೇಶ್ ಏನು ಗೋಕಳ್ಳನಲ್ಲ, ಇದು ತಾಲಿಬಾನಿ ಮಾದರಿ ಹತ್ಯೆ']

ಯಾದವ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ
ಬೆಳಗ್ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಂತರ ರುದ್ರೇಶ್ ಅವರ ಪಾರ್ಥಿವ ಶರೀರವನ್ನು ಕುಟುಂಬ ಸದಸ್ಯರಿಗೆ ಹಸ್ತಂತರಿಸಲಾಯಿತು. ಕೆಲಕಾಲ ಸಾರ್ವಜನಿಕರ ದರ್ಶನಕ್ಕಿಟ್ಟು ನಂತರ ಮೆರವಣಿಗೆ ಮುಖಾಂತರ ಯಾದವ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಶಾಸಕರು, ಸಂಘ ಪರಿವಾರ, ಬಿಜೆಪಿ ಸೇರಿದಂತೆ ಹಲವಾರು ಸಂಘಟನೆಗಳ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ಸಿಸಿಟಿವಿ ಮಾಹಿತಿಯಿಂದ ಮಾಹಿತಿ
ಘಟನೆ ನಡೆದ ದಿನದಂದು ರುದ್ರೇಶ್ ಅವರು ಗಣವೇಷಧಾರಿಯಾಗಿ ರಸ್ತೆ ಬದಿಯ ಟೀ ಅಂಗಡಿಯ ಬಳಿ ಚಹಾ ಸೇವಿಸುತ್ತಿದ್ದರು. ಬೈಕಿನಿಂದ ಬಂದ ಹೆಲ್ಮೆಟ್ ಧರಿಸಿದ್ದ ಸವಾರ ಹಾಗೂ ಮಂಕಿ ಕ್ಯಾಪ್ ಧರಿಸಿದ್ದ ಹಿಂಬದಿ ಸವಾರರು ಏಕಾಏಕಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ರೀತಿ ಲಾಂಗ್ ಬೀಸಿದ ರೀತಿಯನ್ನು ಗುರುತಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹಳೇ ವೈಷಮ್ಯ ಕಾರಣ
ವೃತ್ತಿಪರ ಹಂತಕರನ್ನು ಬಳಸಿಕೊಂಡು ಸುಪಾರಿ ನೀಡಿ ರುದ್ರೇಶ್ ರನ್ನು ಕೊಲೆಗೈಯಲಾಗಿದೆ. ಹತ್ಯೆ ನಡೆದಿರುವ ಶೈಲಿಯಿಂದಷ್ಟೇ ಹಂತಕರು ಕೇರಳ ಮೂಲದವರು ಇರಬಹುದು ಎಂಬ ಸಣ್ಣ ಸುಳಿವು ಸಿಕ್ಕಿದೆ. ಸಿವಿಲ್ ಗುತ್ತಿಗೆದಾರರಾಗಿದ್ದ ರುದ್ರೇಶ್ ಅವರು ಈ ಹಿಂದೆ ಕೆಲವು ಬಾರಿ ಸ್ಥಳೀಯರೊಂದಿಗೆ ಜಗಳವಾಡಿಕೊಂಡಿದ್ದರು. ವೃತ್ತಿ ವೈಷಮ್ಯ, ಹಳೆ ದ್ವೇಷ ಕಾರಣ ಇರಬಹುದು ಎಂದು ಸಂಶಯಿಸಲಾಗಿದೆ.

ರುದ್ರೇಶ್ ಹತ್ಯೆಗೆ ಶಾರ್ಪ್ ಶೂಟರ್ಸ್ ಏಕೆ
ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಅವರ ಹತ್ಯೆಗೆ ಶಾರ್ಪ್ ಶೂಟರ್ಸ್ ಏಕೆ ಬಳಸಲಿಲ್ಲ ಎಂಬುದಕ್ಕೆ ಉತ್ತರ ಸರಳವಿದೆ. ಶಾರ್ಪ್ ಶೂಟರ್ಸ್ ಗೆ ಸುಪಾರಿ ನೀಡಿದರೆ ಸುಪಾರಿ ಮೊತ್ತವೂ ದುಬಾರಿ. ಅಲ್ಲದೆ ಅವರು ಬಳಸುವ ಬುಲೆಟ್ ಏನಾದರೂ ಪೊಲೀಸರ ಕೈಗೆ ಸಿಕ್ಕರೆ, ಅದರ ಆಧಾರದ ಮೇಲೆ ಕೊಲೆಗಡುಕರನ್ನು ಪೊಲೀಸರು ಪತ್ತೆ ಹಚ್ಚುತ್ತಾರೆ. ಸುಲಭ ಸಿಕ್ಕಿ ಬೀಳದೆ ಎದುರಾಳಿಯನ್ನು ಈ ರೀತಿ ಕೊಚ್ಚಿ ಕೊಳ್ಳುವ ಯೋಜನೆ ಇತ್ತೀಚೆಗೆ ಜಾರಿಯಲ್ಲಿದೆ.

ಹತ್ಯೆ ನಡೆದಿರುವ ಶೈಲಿಯಿಂದಷ್ಟೇ ಹಂತಕರ ಸುಳಿವು
ಹಂತಕರು ಕೊಲೆ ಮಾಡಿ ಪರಾರಿಯಾದ ನಂತರ ಯಾವುದೇ ಸುಳಿವು ಬಿಟ್ಟು ಹೋಗದೆ ಇರುವುದು ಅವರ ವೃತ್ತಿಪರತೆಗೆ ಸಾಕ್ಷಿಯಂತಿದೆ. ಆದರೆ ಹತ್ಯೆ ನಡೆದಿರುವ ಶೈಲಿಯಿಂದಷ್ಟೇ ಹಂತಕರು ಕೇರಳ ಮೂಲದವರು ಇರಬಹುದು ಎಂಬ ಸಣ್ಣ ಸುಳಿವು ಮಾತ್ರ ಪೊಲೀಸರಿಗೆ ದೊರೆತಿದೆ. ಇದುವರೆವಿಗೂ 20 ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ತನಿಖೆಗೆ ಯಾವುದೇ ಗಡುವು ವಿಧಿಸಲ್ಲ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಮೊದಲ ಆದ್ಯತೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.












Click it and Unblock the Notifications