ಮಾರ್ಚ್ನಲ್ಲಿ ಬೆಂಗಳೂರಿನಲ್ಲೇ ಆರ್ಎಸ್ಎಸ್ ಅಧಿವೇಶನ
ಬೆಂಗಳೂರು,ಜನವರಿ 19: ರಾಷ್ಟ್ರೀಯ ಸ್ವಯಂಸೇವಕ ಸಂಘವು ರಾಷ್ಟ್ರೀಯ ಅಧಿವೇಶನವಾದ ಅಖಿಲ ಭಾರತ ಪ್ರತಿನಿಧಿ ಸಭಾವನ್ನು ಈ ಬಾರಿಯೂ ಬೆಂಗಳೂರಿನಲ್ಲಿ ಮಾರ್ಚ್ 19 ಹಾಗೂ 20ರಂದು ನಡೆಸಲು ನಿರ್ಧರಿಸಿದೆ.
ಕಳೆದ ವರ್ಷ ಬೆಂಗಳೂರಿನಲ್ಲಿ ಸಭೆ ಆಯೋಜನೆಯಾಗಿತ್ತಾದರೂ ಕೊರೊನಾ ಸೋಂಕು ಏರಿಕೆಯ ಹಂತದಲ್ಲಿದ್ದರಿಂದ ರದ್ದುಪಡಿಸಲಾಗಿತ್ತು.
ಪ್ರತಿ ಮೂರು ವರ್ಷಕ್ಕೊಮ್ಮೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆಯುವ ಅಧಿವೇಶನದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಚುನಾವಣೆ ನಡೆಯುತ್ತದೆ. ಸದ್ಯ ಸರಕಾರ್ಯವಾಹರಾಗಿ ಸುರೇಶ್ ಜೋಷಿ ಇದ್ದಾರೆ. ಈ ಬಾರಿ ಬೆಂಗಳೂರಿನ ಅಧಿವೇಶನದಲ್ಲೇ ಚುನಾವಣೆ ನಡೆಯಲಿದೆ.

ಇತ್ತೀಚಿನ ವರ್ಷಗಳಲ್ಲಿ ನಾಗಪುರದಿಂದ ಹೊರಗೆ ಚುನಾವಣೆ ನಡೆಯುತ್ತಿರುವುದು ಬಹಶಃ ಇದೇ ಮೊದಲು ಎನ್ನಲಾಗಿದೆ. ಚನ್ನೇನಹಳ್ಳಿಯ ಜನಸೇವಾ ಕೇಂದ್ರದಲ್ಲೇ ಈ ಬಾರಿಯೂ ಅಧಿವೇಶನ ನಡೆಯಲಿದೆ.
ಸಾಮಾನ್ಯವಾಗಿ 1400 ಪ್ರತಿನಿಧಿಗಳು ದೇಶದ ವಿವಿಧ ಭಾಗಗಳಿಂದ ಆಗಮಿಸುತ್ತಾರೆ. ಆದರೆ ಕೊರೊನಾ ಸೋಂಕು ಇರುವುದರಿಂದ ಎಷ್ಟು ಜನರನ್ನು ಆಹ್ವಾನಿಸಬೇಕು ಎಂಬ ನಿರ್ಧಾರವನ್ನು ಶೀಘ್ರ ತೆಗೆದುಕೊಳ್ಳಲಾಗುತ್ತದೆ.
ಈ ಬಾರಿ ಮಹಾರಾಷ್ಟ್ರದ ನಾಗಪುರದಲ್ಲಿ ನಡೆಯಬೇಕಿದ್ದ ಸಭೆಯನ್ನು ಬೆಂಗಳೂರಿನಲ್ಲೇ ನಡೆಸಲು ತೀರ್ಮಾನಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಹಾರಾಷ್ಟ್ರದಲ್ಲಿ ಕೊರೊನಾ:ಆರ್ಎಸ್ಎಸ್ ಪ್ರಮುಖ ನೀತಿ ನಿರ್ಣಯಗಳನ್ನು ಕೈಗೊಳ್ಳುವ ಈ ವಾರ್ಷಿಕ ಸಭೆಯನ್ನು ಒಮ್ಮೆ ದಕ್ಷಿಣ ಭಾರತ, ಮತ್ತೊಮ್ಮೆ ಉತ್ತರ ಭಾರತ ಹಾಗೂ ಮೂರನೇ ವರ್ಷದಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ನಡೆಸಲಾಗುತ್ತದೆ.
Recommended Video
ಆದರೆ ಈ ಬಾರಿ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಪ್ರತಿದಿನ ಸುಮಾರು ಮೂರು ಸಾವಿರ ಆಸುಪಾಸಿನಲ್ಲಿ ಹೊಸ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಮಹಾರಾಷ್ಟ್ರದ ಹೋಲಿಕೆಯನ್ನು ಕರ್ನಾಟಕದಲ್ಲಿ ಸೋಂಕು ಸಾಕಷ್ಟು ನಿಯಂತ್ರಣದಲ್ಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರನ್ನೇ ಮತ್ತೆ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ.











Click it and Unblock the Notifications