ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ಕಾಲುವೆ ರಿಪೇರಿ 1466 ಕೋಟಿ ರೂ. ಕಥೆ
ಬೆಂಗಳೂರು, ಜೂ. 04: ಕೊರೊನಾ ಎರಡನೇ ಅಲೆಯಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ರಾಜ್ಯದ ವಿವಿಧ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ ಬಜೆಟ್ನ ಮೊತ್ತ ಕೇವಲ 500 ಕೋಟಿ ರೂ ಮಾತ್ರ! ಯಾದಗಿರಿಯಲ್ಲಿರುವ ನಾರಾಯಣಪುರ ಜಲಾಶಯ ಎಂದೇ ಖ್ಯಾತಿ ಪಡೆದಿರುವ ಬಸವ ಸಾಗರದ ಕಾಲುವೆ ಅಧುನೀಕರಣಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ಟೆಂಡರ್ ಕರೆದಿರುವ ಮೊತ್ತ ಬರೋಬ್ಬರಿ 1466 ಕೋಟಿ ರೂಪಾಯಿ. ಅದೂ ಬೇಸಿಗೆ ಕಾಲದಲ್ಲಿ ನಡೆಯುವ ಆಧುನೀಕರಣ ಕಾಮಗಾರಿಗೆ ಮುಂಗಾರು ಆರಂಭದಲ್ಲಿ ಟೆಂಡರ್ ಕರೆದಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಜನರ ಕಲ್ಯಾಣಕ್ಕೆ 500 ಕೋಟಿ ಪ್ಯಾಕೇಜ್: ಕಾಲುವೆ ಕಾಮಗಾರಿಗೆ 1400 ಕೋಟಿ
ರಾಜ್ಯದಲ್ಲಿ ಕೊರೊನಾ ಲಾಕ್ ಡೌನ್ ಜಾರಿಯಲ್ಲಿದೆ. ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಕೆಲಸವೂ ಸ್ಥಗಿತಗೊಂಡಿದೆ. ಕೊರೊನಾ ಸೋಂಕಿನಿಂದ ತತ್ತರಿಸಿರುವ ಜನರಿಗೆ ಕನಿಷ್ಠ ಅನ್ನ - ಆಹಾರ ಹಾಗೂ ಚಿಕಿತ್ಸೆ ಸಿಕ್ಕರೆ ಸಾಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಆರ್ಥಿಕ ಸಂಕಷ್ಟದಿಂದ ಹೊರ ಬರಲಾಗದೇ ಒದ್ದಾಡುತ್ತಿರುವ ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಮೊದಲ ಪ್ಯಾಕೇಜ್ನಲ್ಲಿ 1200 ಕೋಟಿ ರೂ. ಘೋಷಣೆ ಮಾಡಿತ್ತು.
ಇದೀಗ ಎರಡನೇ ಹಂತದ ವಿಶೇಷ ಆರ್ಥಿಕ ಪ್ಯಾಕೇಜ್ ಮೊತ್ತ ಕೇವಲ 500 ಕೋಟಿ ರೂ. ಮಾತ್ರ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಯಾದಗಿರಿಯಲ್ಲಿರುವ ಬಸವ ಸಾಗರ ಜಲಾಶಯದ ಕಾಲುವೆ ಆಧುನೀಕರಣಕ್ಕೆ ಕೃಷ್ಣ ಜಲ ಭಾಗ್ಯ ನಿಗಮ ಟೆಂಡರ್ ಕರೆದಿದೆ. ಟೆಂಡರ್ಗೆ ಅರ್ಜಿ ಸಲ್ಲಿಸವ ಕೊನೆ ದಿನ ಜೂ. 04 ಇಂದು ಕೊನೆ ದಿನ. ಇನ್ನೇನು ಕೆಲವೇ ದಿನದಲ್ಲಿ ತಾಂತ್ರಿಕ ಬಿಡ್ ಫೈನಲ್ ಆಗಲಿದೆ. ಕೊರೊನಾ ಲಾಕ್ ಡೌನ್ ಸಮಯದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸುತ್ತಿರುವ ವಿಚಾರವನ್ನು ಕೃಷ್ಣ ಜಲ ಭಾಗ್ಯ ನಿಗಮದ ಅಧಿಕಾರಿಯೊಬ್ಬರು ಸ್ಪಷ್ಟ ಪಡಿಸಿದ್ದಾರೆ.

ಬೇಸಿಗೆಯಲ್ಲಿ ನಡೆಯುವ ಕಾಮಗಾರಿಗೆ ಮಳೆಗಾಲದಲ್ಲಿ ಟೆಂಡರ್!
ಮೊದಲ ಪ್ಯಾಕೇಜ್ನಲ್ಲಿ ನಾರಾಯಣಪುರ ಬಲದಂಡ ಕಾಲುವೆ ರಿಪೇರಿ ಹಾಗೂ ಆಧುನೀಕರಣಕ್ಕಾಗಿ 760 ಕೋಟಿ ರೂ. ಮೊತ್ತದ ಟೆಂಡರ್ ಕರೆಯಲಾಗಿದೆ. ಪ್ಯಾಕೇಜ್ ಎರಡಲ್ಲಿ 706 ಕೋಟಿ ರೂ. ಮೀಸಲಿಡಲಾಗಿದೆ. ವಿಪರ್ಯಾಸವೆಂದರೆ ಮಳೆಗಾಲದಲ್ಲಿ ಯಾವುದೇ ಜಲಾಶಯಗಳ ಕಾಲುವೆ ಆಧುನೀಕರಣ ಕಾಮಗಾರಿ ಕೈಗೊಳ್ಳಲು ಸಾಧ್ಯವಿಲ್ಲ. ಈಗಾಗಲೇ ಮುಂಗಾರು ಆರಂಭವಾಗಿದ್ದು, ಕೇರಳಗೆ ಲಗ್ಗೆ ಇಟ್ಟಿದೆ. ರಾಜ್ಯದಲ್ಲಿ ನಾನಾ ಜಿಲ್ಲೆಯಲ್ಲಿ ಮಳೆ ಆರಂಭವಾಗಲಿದೆ. ಮಹಾರಾಷ್ಟ್ರದಲ್ಲಿ ಮಳೆಯಾಗಿ ನೀರು ಹರಿದು ಬಂದರೆ, ನಾರಾಯಣಪುರ ಡ್ಯಾಮ್ ಪೂರ್ತಿ ಭರ್ತಿಯಾಗುತ್ತದೆ.
ಕಾಲುವೆಯಲ್ಲಿ ನೀರು ಹರಿಯುವ ಕಾರಣ ಈ ವರ್ಷದಲ್ಲಿ ಕಾಮಗಾರಿ ಮಾಡಲು ಸಾಧ್ಯವಿಲ್ಲ ಎಂಬುದು ಸಾಮಾನ್ಯ ಜ್ಞಾನ. ರಮೇಶ್ ಜಾರಕಿಹೊಳಿ ರಾಜೀನಾಮೆ ಬಳಿಕ ತಮ್ಮ ಬಳಿಯೇ ಜಲ ಸಂಪನ್ಮೂಲ ಖಾತೆ ಉಳಿಸಿಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇದೀಗ ನಾರಾಯಣಪುರ ಜಲಾಶಯ ಕಾಲುವೆ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಕಾಲುವೆಗಳಲ್ಲಿ ನೀರಿನ ಒಳ ಹರಿವು ಮಳೆ ಗಾಲದಲ್ಲಿ ಜಾಸ್ತಿಯಾದಲ್ಲಿ ಕಾಮಗಾರಿ ಈ ವರ್ಷ ನಡೆಯುವುದೇ ಅನುಮಾನ. ಇದು ಗೊತ್ತಿದ್ದರೂ ಕೃಷ್ಣ ಜಲ ಭಾಗ್ಯ ನಿಗಮದ ಅಧಿಕಾರಿಗಳು ತರಾತುರಿಯಲ್ಲಿ ಟೆಂಡರ್ ಕರೆದಿದ್ದಾರೆ. ಅದರಲ್ಲೂ ಕೊರೊನಾ ಲಾಕ್ ಡೌನ್ ನಡುವೆಯೇ ಟೆಂಡರ್ ಪ್ರಕ್ರಿಯೆ ಪೂರ್ಣ ಗೊಳಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಅನುಮಾನ ಮೂಡಿಸುವ ಗುತ್ತಿಗೆ ಷರತ್ತುಗಳು
ಇನ್ನು ನಾರಾಯಣಪುರ ಜಲಾಶಯದ ಬಲ ದಂಡೆಯ ಕಾಲವೆ ಆಧುನೀಕರಣ ಸಂಬಂಧ ಕರೆದಿರುವ ಟೆಂಡರ್ಗೆ ಜೂ. 4 ಕೊನೆಯ ದಿನ. ಜಲಾಶಯ ನಿರ್ಮಾಣ ಕಾಮಗಾರಿ ಮಾಡಿರುವ ಕಂಪನಿಗಳು ಈ ಟೆಂಡರ್ನಲ್ಲಿ ಭಾಗವಹಿಸಲು ಅವಕಾಶ ನೀಡಿಲ್ಲ. ಆದರೆ, ಜಲಾಶಯ ಕಾಲುವೆ ರಿಪೇರಿ ಹಾಗೂ ಆಧುನೀಕರಣ ಮಾಡಿರುವ ಕಂಪನಿಗೆ ಮಾತ್ರ ಈ ಟೆಂಡರ್ ನಲ್ಲಿ ಭಾಗವಹಿಸುವ ಷರತ್ತು ವಿಧಿಸುವ ಮೂಲಕ ಜಲಾಶಯ ನಿರ್ಮಾಣ ಮಾಡಿದಂಥ ದೈತ್ಯ ಕಂಪನಿಗಳು ಟೆಂಡರ್ ನಲ್ಲಿ ಭಾಗವಹಿಸದಂತೆ ಉದ್ದೇಶ ಪೂರ್ವಕವಾಗಿ ಷರತ್ತು ವಿಧಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಮಾತ್ರವಲ್ಲದೇ ಪಾರದರ್ಶಕ ನಿಯಮದ ಪ್ರಕಾರ 100 ಕೋಟಿ ರೂ. ಮೇಲ್ಪಟ್ಟ ಟೆಂಡರ್ ಕರೆದಲ್ಲಿ, ಟೆಂಡರ್ ನಲ್ಲಿ ಭಾಗವಹಿಸುವ ಕಂಪನಿ ಮತ್ತೊಂದು ಕಂಪನಿಯ ಜಂಟಿ ಸಹಯೋಗತ್ವ ಕಡ್ಡಾಯ ಮಾಡಲಾಗುತ್ತದೆ. ಗುತ್ತಿಗೆ ಪಡೆದ ಕಂಪನಿ ಏನಾದರೂ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಜಂಟಿ ಸಹಭಾಗಿತ್ವ ವಹಿಸಿರುವ ಕಂಪನಿ ಮೂಲಕ ಕಾಮಗಾರಿ ಪೂರ್ಣ ಮಾಡಿಸುವ ಉದ್ದೇಶದಿಂದ ಈ ಷರತ್ತನ್ನು ಸಾಮಾನ್ಯವಾಗಿ ವಿಧಿಸಲಾಗುತ್ತದೆ. ಇದು 1500 ಕೋಟಿ ರೂ. ಮೊತ್ತದ ಟೆಂಡರ್ ಕಾಮಗಾರಿಯಾಗಿದ್ದರೂ ಈ ಷರತ್ತನ್ನು ಸಡಿಲಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕಮಿಷನ್ ಕಾಮಗಾರಿಗೆ ಆರ್ಥಿಕ ಸಂಕಷ್ಟವಿಲ್ಲ
ಕೊರೊನಾ ಸೋಂಕು ನಿರ್ವಹಣೆ ಮಾಡಲಾಗದೇ ಸರ್ಕಾರ ತತ್ತರಿಸಿದೆ. ಒಂದಡೆ ಕೊರೊನಾ ನಿರ್ವಹಣೆಯಲ್ಲಿ ವಿಫಲತೆ, ಮತ್ತೊಂದಡೆ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಇರುವ ಆರ್ಥಿಕ ಸಂಪತ್ತನ್ನು ಮೊದಲ ಆದ್ಯತೆಯಾಗಿ ಜನರ ಜೀವ ಮತ್ತು ಆಹಾರಕ್ಕೆ ವಿನಿಯೋಗಿಸುವುದು ಸರ್ಕಾರದ ಧರ್ಮ. ಆದರೆ ಯಡಿಯೂರಪ್ಪ ಅವರ ಬಳಿಯೇ ಇರುವ ಜಲ ಸಂಪನ್ಮೂಲ ಇಲಾಖೆ ವ್ಯಾಪ್ತಿಗೆ ಒಳಪಡುವ ಕೃಷ್ಣ ಜಲ ಭಾಗ್ಯ ನಿಯಮದಲ್ಲಿ 1466 ಕೋಟಿ ರೂಪಾಯಿ ಮೌಲ್ಯದ ಟೆಂಡರ್ ಕರೆದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಟೆಂಡರ್ ಷರತ್ತುಗಳಲ್ಲಿ ಬದಲಾವಣೆ ಮಾಡುವ ಮೂಲಕ ಬಿಜೆಪಿ ಪಕ್ಷದ ಮಾಜಿ ಶಾಸಕರೊಬ್ಬರ ಒಡೆತನಕ್ಕೆ ಸೇರಿದ ಕಂಪನಿಗೆ ಟೆಂಡರ್ ನೀಡುವ ಪ್ರಯತ್ನಗಳು ನಡೆದಿವೆ ಎಂಬ ಮಾತು ಕೇಳಿ ಬರುತ್ತಿದೆ. ಕಿಕ್ ಬ್ಯಾಕ್ ಆರೋಪ ಕೂಡ ಕೇಳಿ ಬರುತ್ತಿದೆ. ಈ ಕುರಿತು ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಉತ್ತರ ನೀಡುವರೇ ಕಾದು ನೋಡಬೇಕು.
Recommended Video

ಬಸವ ಸಾಗರ ಹಿನ್ನೆಲೆ
ಯಾದಗಿರಿ ಜಿಲ್ಲೆಯ ಸುರಪುರ ಸಮೀಪ 1982 ರಲ್ಲಿ ಕೇವಲ 41 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವುದೇ ನಾರಾಯಣಪುರ ಜಲಾಶಯ. ಜಲಾಶಯ ಎತ್ತರ 30 ಮೀಟರ್. ಇದರಿಂದ ಯಾದಗಿರಿ, ವಿಜಯಪುರ ಹಾಗೂ ರಾಯಚೂರಿನ ಸುಮಾರು ಹತ್ತು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.












Click it and Unblock the Notifications