ರಾಜರಾಜೇಶ್ವರಿ ನಗರ ಉಪಚುನಾವಣೆ: ನೊಣವಿನಕೆರೆ ಅಜ್ಜಯ್ಯ ನುಡಿದ ಭವಿಷ್ಯ
ಬೆಂಗಳೂರು, ಅ 4: ಇದೇ ನವೆಂಬರ್ ಮೂರರಂದು ರಾಜ್ಯದ ಎರಡು ಅಸೆಂಬ್ಲಿ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದರೂ, ಈಗಾಗಲೇ ಭಾರೀ ಕುತೂಹಲಕ್ಕೀಡು ಮಾಡಿರುವುದು, ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಯ ರಾಜರಾಜೇಶ್ವರಿ ನಗರದ ಚುನಾವಣೆ.
ಶಿರಾ ಕ್ಷೇತ್ರದಲ್ಲೂ ಚುನಾವಣೆ ನಡೆಯುತ್ತಿದ್ದರೂ, ಆರ್.ಆರ್.ನಗರದಲ್ಲಿ ಪ್ರಮುಖವಾಗಿ ಬಿಜೆಪಿ ಮತ್ತು ಕಾಂಗ್ರೆಸ್, ಯಾರನ್ನು ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಿದೆ ಎನ್ನುವುದು, ಎರಡೂ ಪಕ್ಷದ ಕಾರ್ಯಕರ್ತರನ್ನು ತುದಿಗಾಲಿನಲ್ಲಿ ನಿಲ್ಲಿಸಿದೆ.
ಈಗಾಗಲೇ, ಬಿಜೆಪಿ ಕೋರ್ ಕಮಿಟಿ ಸಮಿತಿ, ಆರ್.ಆರ್.ನಗರಕ್ಕೆ ಮುನಿರತ್ನ ಮತ್ತು ತುಳಸಿ ಮುನಿರಾಜು ಗೌಡ ಅವರ ಹೆಸರನ್ನು ಅನುಮೋದನೆ ಮಾಡಿ ಕಳುಹಿಸಿದೆ. ಕಾಂಗ್ರೆಸ್, ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದು ಹೇಳಿದೆ.
ಇವೆಲ್ಲದರ ನಡುವೆ, ಹೊಸ ಸುದ್ದಿಯೊಂದು ಹರಿದಾಡುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನೊಣವಿನಕೆರೆ ಅಜ್ಜಯ್ಯನವರು ನುಡಿದ ಭವಿಷ್ಯದ ಮೇಲೆ, ಯಾರನ್ನು ಆರ್.ಆರ್.ನಗರದಿಂದ ಕಣಕ್ಕಿಳಿಸಬೇಕು ಎನ್ನುವ ನಿರ್ಧಾರಕ್ಕೆ ಬಂದಾಗಿದೆ ಎಂದು ಹೇಳಲಾಗುತ್ತಿದೆ. ಅಜ್ಜಯ್ಯನ ಭವಿಷ್ಯವೇನು?

ಅಸೆಂಬ್ಲಿ ಉಪಚುನಾವಣೆಗೆ ದಿನಾಂಕ ಘೋಷಣೆ
ಹೆಜ್ಜೆಹೆಜ್ಜೆಗೂ ದೇವರು,ಡಿಂಡ್ರು, ಭವಿಷ್ಯವನ್ನು ನಂಬುವ ಡಿ.ಕೆ.ಶಿವಕುಮಾರ್, ಅಸೆಂಬ್ಲಿ ಉಪಚುನಾವಣೆಗೆ ದಿನಾಂಕ ಘೋಷಣೆಯಾದ ಕೂಡಲೇ, ತಾನು ಭಾರೀ ನಂಬುವ ನೊಣವಿನಕೆರೆ ಅಜ್ಜಯ್ಯವರನ್ನು ಸಂಪರ್ಕಿಸಿದ್ದಾರೆ. ಅವರು ಸೂಚಿಸಿದ ಹಾಗೆಯೇ ಹೆಜ್ಜೆಯಿಡಲು ನಿರ್ಧರಿಸಿದ್ದಾರೆ. ಹಾಗಾಗಿಯೇ 'ಅಚ್ಚರಿಯ ಅಭ್ಯರ್ಥಿಯನ್ನು ಆಯ್ಕೆಮಾಡಲಾಗುವುದು'ಎನ್ನುವ ಹೇಳಿಕೆ ಅವರಿಂದ ಬರುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಮುನಿರತ್ನ ಅವರನ್ನು ಸೋಲಿಸುವುದು ಡಿ.ಕೆ.ಶಿವಕುಮಾರ್ ಅವರಿಗೆ ಪ್ರತಿಷ್ಠೆಯ ವಿಚಾರ
ಮುನಿರತ್ನ ಅವರನ್ನು ಸೋಲಿಸುವುದು ಡಿ.ಕೆ.ಶಿವಕುಮಾರ್ ಅವರಿಗೆ ಪ್ರತಿಷ್ಠೆಯ ವಿಚಾರವಾಗಿದೆ. ಹಾಗಾಗಿಯೇ, ಅಜ್ಜಯ್ಯನವರು ನುಡಿದಂತೆ, ಆರ್.ಆರ್.ನಗರಕ್ಕೆ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡಿದ್ದಾರೆ. ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ರಚಿಸಲಾಗಿರುವ ಕಮಿಟಿಯ ಮುಖ್ಯಸ್ಥ ರಾಮಲಿಂಗ ರೆಡ್ಡಿಯವರಲ್ಲೂ ಈ ವಿಚಾರ ಪ್ರಸ್ತಾವಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಅಜ್ಜಯ್ಯನವರು ನುಡಿದ ಪ್ರಕಾರ, ಮುನಿರತ್ನಗೆ ಸ್ತ್ರೀಕಂಟಕ
ಅಜ್ಜಯ್ಯನವರು ನುಡಿದ ಪ್ರಕಾರ, ಮುನಿರತ್ನಗೆ ಸ್ತ್ರೀಕಂಟಕವಿದೆ, ಹಾಗಾಗಿ, ಅಲ್ಲಿ ಮಹಿಳಾ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಎನ್ನುವ ಫರ್ಮಾನು ಬಂದಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ, ಸದ್ಯದ ಮಟ್ಟಿಗೆ, ಆರ್.ಆರ್.ನಗರ ಅಭ್ಯರ್ಥಿಯ ಆಕಾಂಕ್ಷಿಗಳ ಪೈಕಿ, ಐಎಎಸ್ ಅಧಿಕಾರಿ ದಿ. ಡಿ.ಕೆ.ರವಿ ಅವರ ಪತ್ನಿ ಕುಸುಮಾ ಅವರ ಹೆಸರು ಮಂಚೂಣಿಯಲ್ಲಿ ಕೇಳಿ ಬರುತ್ತಿದೆ.

ಡಿ.ಕೆ.ರವಿ ಅವರ ಪತ್ನಿ ಅವರ ಪತ್ನಿ ಕುಸುಮಾ
ಒಕ್ಕಲಿಗ ಸಮುದಾಯ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುವುದರಿಂದ, ಡಿ.ಕೆ.ರವಿ ಅವರ ಪತ್ನಿಯನ್ನು ನಿಲ್ಲಿಸುವುದೇ ಸೂಕ್ತ ಎನ್ನುವ ನಿರ್ಧಾರಕ್ಕೆ ಕೆಪಿಸಿಸಿ ಬಂದಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ನೊಣವಿನಕೆರೆ ಅಜ್ಜಯ್ಯರ ಮಾತಿಗೆ ಅಕ್ಷರಸಃ ಬೆಲೆಕೊಡುವ ಡಿಕೆಶಿ, ಯಾವ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎನ್ನುವುದಕ್ಕೆ ಕೆಲವು ದಿನಗಳಲ್ಲಿ ಉತ್ತರ ಸಿಗಲಿದೆ.












Click it and Unblock the Notifications