ಚುನಾವಣಾ ಪ್ರಚಾರದಲ್ಲಿ ಮೂಲ ಬಿಜೆಪಿಗರಿಂದ ಮುನಿರತ್ನಗೆ ಭಯ ಕಾಡಿತೇ?
ಬಹು ನಿರೀಕ್ಷಿತ ಎರಡು ವಿಧಾನಸಭಾ ಕ್ಷೇತ್ರದ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಮಂಗಳವಾರದಂದು (ನವೆಂಬರ್ 3) ಚುನಾವಣೆ ನಡೆಯಲಿದ್ದು, ನವೆಂಬರ್ ಹತ್ತರಂದು ಫಲಿತಾಂಶ ಹೊರಬೀಳಲಿದೆ.
ಬಿಜೆಪಿ ಮತ್ತು ಕಾಂಗ್ರೆಸ್, ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಹಲವು ಮುಖಂಡರ ರಾಜಕೀಯ ಏಳಿಗೆ ಈ ಚುನಾವಣಾ ಫಲಿತಾಂಶದ ಮೇಲೆ ನಿಂತಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಮುಖ್ಯಮಂತ್ರಿಗಳು ಪ್ರಚಾರಕ್ಕೆ ಬರುತ್ತಾರೋ, ಇಲ್ಲವೋ ಎನ್ನುವ ಗೊಂದಲಕ್ಕೆ ರೋಡ್ ಶೋ ನಡೆಸುವ ಮೂಲಕ ಯಡಿಯೂರಪ್ಪ ತೆರೆ ಎಳೆದಿದ್ದಾರೆ.
ಪ್ರಮುಖವಾಗಿ, ರಾಜರಾಜೇಶ್ವರಿ ನಗರ ಅಸೆಂಬ್ಲಿ ಕ್ಷೇತ್ರದ ಟಿಕೆಟ್ ಗಾಗಿ ಮೂಲ ಬಿಜೆಪಿಗ ತುಳಸಿ ಮುನಿರಾಜು ಗೌಡ ಮತ್ತು ಆಪರೇಶನ್ ಕಮಲದ ಮುನಿರತ್ನ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇದ್ದದ್ದು ಗೊತ್ತಿರುವ ವಿಚಾರ. ರಾಜ್ಯಾಧ್ಯಕ್ಷ ನಳಿನ್ ಕಟೀಲ್, ಮುನಿರಾಜು ಪರವಾಗಿ, ಸಿಎಂ ಬಿಎಸ್ವೈ ಮುನಿರತ್ನ ಪರವಾಗಿ ಬ್ಯಾಟ್ ಬೀಸಿದ್ದರು.
ಕೊನೆಗೂ, ತುಳಸಿ ಮುನಿರಾಜು ಅವರ ಮನವೊಲಿಸುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಈ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಮುನಿರತ್ನ ಡಿಫರೆಂಟ್ ತಂತ್ರಗಾರಿಕೆಯನ್ನು ಬಳಸಿಕೊಂಡರು ಎಂದೇ ಹೇಳಲಾಗುತ್ತಿದೆ.

ತುಳಸಿ ಮುನಿರಾಜು ವರ್ಸಸ್ ಮುನಿರತ್ನ
ಮುನಿರತ್ನ ಬಿಜೆಪಿ ಸೇರ್ಪಡೆಗೆ ರಾಜರಾಜೇಶ್ವರಿ ನಗರ ಘಟಕದಲ್ಲಿ ಭಾರೀ ವಿರೋಧವಿತ್ತು. ಮೂಲ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸುತರಾಂ ಅವರ ಸೇರ್ಪಡೆಗೆ ಒಪ್ಪುತ್ತಿರಲಿಲ್ಲ. ಇದು, ಅವರಿಗೇ ಟಿಕೆಟ್ ಎಂದು ಘೋಷಣೆಯಾದ ಮೇಲೆ ಅಸಮಾಧಾನ ಇನ್ನಷ್ಟು ತೀವ್ರವಾಯಿತು. ಹಲವು ಮುಖಂಡರು ರಾಜೀನಾಮೆ ನೀಡಿದ ವಿಚಾರ ಕೂಡಾ ಗೊತ್ತಿರುವ ವಿಚಾರ.

ಬೆಂಗಳೂರು ಮೂಲದ ಬಿಜೆಪಿ ಹಿರಿಯ ಮುಖಂಡರು ಯಶಸ್ವಿಯಾಗಿದ್ದರು
ಒಂದು ಹಂತಕ್ಕೆ ಇವರನ್ನೆಲ್ಲಾ ಒಪ್ಪಿಸುವಲ್ಲಿ ಬೆಂಗಳೂರು ಮೂಲದ ಬಿಜೆಪಿ ಹಿರಿಯ ಮುಖಂಡರು ಯಶಸ್ವಿಯಾಗಿದ್ದರು. ಮುನಿರಾಜು ಗೌಡ ಕೂಡಾ ಪ್ರಚಾರಕ್ಕೆ ಇಳಿದಿದ್ದರು. ಆದರೆ, ಬಿಜೆಪಿ ಅಭ್ಯರ್ಥಿಗೆ ಮತನೀಡಿ ಎಂದು ಮುನಿರಾಜು ಪರವಾಗಿ ಇರುವ ಕಾರ್ಯಕರ್ತರು ಮತ್ತು ಮುಖಂಡರು ಪ್ರಚಾರ ಮಾಡಿದರೇ ವಿನಃ ಮುನಿರತ್ನ ಹೆಸರು ಪ್ರಸ್ತಾವಿಸಿರಲಿಲ್ಲ ಎನ್ನುವ ಮಾತಿದೆ.

ಮುನಿರತ್ನ ತನ್ನದೇ ತಂಡವನ್ನು ಕಟ್ಟಿ, ಆಖಾಡಕ್ಕೆ ಇಳಿಸಿದರು
ಎಲ್ಲಾದರೂ, ಟಿಕೆಟ್ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ತುಳಸಿ ಮುನಿರಾಜು ಕಡೆಯವರು ಪ್ರಚಾರದಲ್ಲಿ ತೊಂದರೆ ಮಾಡಿದರೆ ಎನ್ನುವ ಸಂಶಯ ಮುನಿರತ್ನ ಅವರನ್ನು ಕಾಡಿದ್ದಿರಬಹುದು. ಅದಕ್ಕಾಗಿ, ಮುನಿರತ್ನ ತನ್ನದೇ ತಂಡವನ್ನು ಕಟ್ಟಿ, ಆಖಾಡಕ್ಕೆ ಇಳಿಸಿದರು ಎನ್ನುವ ಮಾತು ಚಾಲ್ತಿಯಲ್ಲಿದೆ.
Recommended Video

ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್
ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಮೇಲೆ ನಡೆಯುತ್ತಿರುವ ಚುನಾವಣೆ ಇದಾಗಿರುವುದು ಮತ್ತು ಡಿ.ಕೆ.ಸುರೇಶ್ ಈ ಕ್ಷೇತ್ರದ ಸಾರಥ್ಯ ವಹಿಸಿಕೊಂಡಿರುವುದರಿಂದ, ಮುನಿರತ್ನ ತನ್ನದೇ ತಂಡವನ್ನೂ ಪ್ರಚಾರಕ್ಕೆ ಇಳಿಸಿದರು ಎನ್ನುವ ಮಾತಿದೆ. ಇದಕ್ಕೆ ಪೂರಕ ಎನ್ನುವಂತೆ, ಬಿಜೆಪಿ ಕಾರ್ಯಕರ್ತರೆಲ್ಲಾ ಮುನಿರತ್ನ ವಿರುದ್ದ ಸಿಡಿದೆದಿದ್ದಾರೆ ಎನ್ನುವ ಮಾತನ್ನು ಡಿಕೆಶಿ ಆಡುತ್ತಿದ್ದಾರೆ.












Click it and Unblock the Notifications