ಬೆಂಗಳೂರು: ಟಿನ್ ಫ್ಯಾಕ್ಟರಿ ಜಂಕ್ಷನ್ ಬಳಿ ಶೀಘ್ರ ಐದು ಪಥದ ರಸ್ತೆ ನಿರ್ಮಾಣ
ಬೆಂಗಳೂರು ಜೂನ್ 1: ಮೆಟ್ರೊ ಕಾಮಗಾರಿಯಿಂದಾಗಿ ನಗರದ ಹಳೇ ಮದ್ರಾಸು ರಸ್ತೆಯ ಟಿನ್ ಫ್ಯಾಕ್ಟರಿ ಜಂಕ್ಷನ್ ವಾಹನ ಸವಾರರ ಪಾಲಿಗೆ ನರಕಸದೃಶವಾಗಿದೆ. ಈ ಹಿನ್ನೆಲೆಯಲ್ಲಿ ಈ ರಸ್ತೆಯ ವಿಸ್ತರಣೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ(ಬಿಎಂಆರ್ ಸಿಎಲ್) ಮುಂದಾಗಿದೆ.
ಇದೇ ವೇಳೆ ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಈ ರಸ್ತೆಯಲ್ಲಿ ಐದು ಬಸ್ ಬೇ ಗಳನ್ನು ನಿರ್ಮಿಸಲು ಬಿಎಂಆರ್ ಸಿಎಲ್ ನಿರ್ಧರಿಸಿದೆ.
"ಟಿನ್ ಫ್ಯಾಕ್ಟರಿ ಜಂಕ್ಷನ್ ನಿಂದ ಕೆ.ಆರ್.ಪುರಂ ವರೆಗಿನ 1.5 ಕಿ.ಮೀ ರಸ್ತೆ ವಿಸ್ತರಣೆ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳ್ಳಲಿದೆ. ಬೈಯಪ್ಪನಹಳ್ಳಿಯಿಂದ ಕೆ.ಆರ್.ಪುರಂ ಗೆ, ಹೆಬ್ಬಾಳದಿಂದ ಹೊಸಕೋಟೆಗೆ ಹಾಗೂ ಹೊಸಕೋಟೆಯಿಂದ ಬೈಯಪ್ಪನಹಳ್ಳಿಗೆ ಚಲಿಸುವ ವಾಹನಗಳು ಟಿನ್ ಫ್ಯಾಕ್ಟರಿ ಜಂಕ್ಷನ್ ಮೂಲಕವೇ ಹಾದು ಹೋಗಬೇಕಿದೆ. ಹಾಗಾಗಿ ಇಲ್ಲಿ ಸದಾ ಸಂಚಾರ ದಟ್ಟಣೆ ಇರುತ್ತದೆ,'' ಎಂದು ಬಿಎಂಆರ್ ಸಿಎಲ್ ಅಧಿಕಾರಿಯೊಬ್ಬರು ಹೇಳಿದರು.
"ಅಲ್ಲದೇ ಕೆಎಸ್ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಗಳು ರಸ್ತೆ ಮಧ್ಯಯೇ ನಿಲ್ಲುತ್ತದೆ. ಅಲ್ಲದೇ ಪ್ರಯಾಣಿಕರು ಬಸ್ ಹತ್ತಲು ಮತ್ತು ಬಸ್ ಇಳಿಯಲು ಸೂಕ್ತ ಜಾಗವೇ ಇಲ್ಲ. ಇದು ಕೂಡ ಸಂಚಾರ ದಟ್ಟಣೆ ಹೆಚ್ಚಲು ಕಾರಣವಾಗಿದೆ,'' ಎಂದರು.

ಐದು ಪಥದ ರಸ್ತೆ ನಿರ್ಮಾಣ
"ಟಿನ್ ಫ್ಯಾಕ್ಟರಿ ಜಂಕ್ಷನ್ ನಿಂದ ಕೆ.ಆರ್.ಪುರಂ ಮೆಟ್ರೊ ನಿಲ್ದಾಣ ವರೆಗಿನ ರಸ್ತೆಯನ್ನು ವಿಸ್ತರಿಸಿ, ಒಂದು ಬದಿಗೆ ಐದು ಪಥಗಳ ರಸ್ತೆಯಾಗಿ ಮಾಡಲಾಗುವುದು. ಈಗಾಗಲೇ ಮೂರು ಪಥದ ರಸ್ತೆ ಇದ್ದು, ಅದಕ್ಕೆ ಹೆಚ್ಚುವರಿಯಾಗಿ ಎರಡು ಪಥಗಳನ್ನು ವಿಸ್ತರಿಸಿ, ಐದು ಪಥ ರಸ್ತೆಯನ್ನು ನಿರ್ಮಿಸಲಾಗುವುದು,'' ಎಂದು ಬಿಎಂಆರ್ ಸಿಎಲ್ ಅಧಿಕಾರಿ ತಿಳಿಸಿದರು.

ಐದು ಬಸ್ ಬೇ ಗಳ ನಿರ್ಮಾಣ
"ಜತೆಗೆ ಬಸ್ ಗಳ ನಿಲುಗಡೆಗೆ ಈ ಮಾರ್ಗದಲ್ಲಿ ಐದು ಬಸ್ ಬೇ ಗಳನ್ನು ನಿರ್ಮಿಸಲಾಗುವುದು. ಬಸ್ ಪ್ರಯಾಣಿಕರಿಗೆ ಪ್ರತ್ಯೇಕವಾಗಿ ಸ್ಥಳಾವಕಾಶ ಕಲ್ಪಿಸುವುದರಿಂದ ಬಸ್ ಗಳು ರಸ್ತೆ ಮಧ್ಯೆದಲ್ಲಿ ನಿಲ್ಲುವುದು ತಪ್ಪಲಿದೆ. ಜತೆಗೆ ಸಂಚಾರ ದಟ್ಟಣೆಯು ಕಡಿಮೆಯಾಗಲಿದೆ,'' ಎಂದು ಮಾಹಿತಿ ನೀಡಿದರು.

ರೈಲು ನಿಲ್ದಾಣಕ್ಕೆ ಸೂಕ್ತ ಮಾರ್ಗ
"ಜತೆಗೆ ಕೆ.ಆರ್.ಪುರಂ ರೈಲು ನಿಲ್ದಾಣಕ್ಕೆ ಸೂಕ್ತ ಪ್ರವೇಶ ಮತ್ತು ಹೊರ ಬರುವ ಮಾರ್ಗ ಕಲ್ಪಿಸಲಾಗುವುದು. ಇದು ಕೂಡ ಟ್ರ್ಯಾಫಿಕ್ ಜಾಮ್ ಕಡಿಮೆಯಾಗಲು ಸಹಕಾರಿಯಾಗಿದೆ. ರಸ್ತೆ ವಿಸ್ತರಣೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇವೆ.,'' ಎಂದು ಅಧಿಕಾರಿ ಹೇಳಿದರು.

ರೈಲ್ವೆ ಇಲಾಖೆಯಿಂದ ಸ್ಥಳ ಹಸ್ತಾಂತರ
"ರಸ್ತೆ ವಿಸ್ತರಣೆಗಾಗಿ ಕೆ.ಆರ್.ಪುರಂ ರೈಲು ನಿಲ್ದಾಣದ ಬಳಿ 3,500 ಚದರ ಅಡಿ ಜಾಗವನ್ನು ರೈಲ್ವೆ ಇಲಾಖೆಯು ಬಿಎಂಆರ್ ಸಿಎಲ್ ಗೆ ಹಸ್ತಾಂತರಿಸಿದೆ. ಇನ್ನೊಂದೆಡೆ ರೈಲು ನಿಲ್ದಾಣದ ಸಮೀಪವೇ ಮತ್ತೊಂದು ಸ್ಥಳವು ಬಿಡಿಎ ಅಧೀನಕ್ಕೆ ಒಳಪಡುತ್ತದೆ. ಕಾಮಗಾರಿಗಾಗಿ ಈ ಸ್ಥಳವನ್ನು ಬಿಎಂಆರ್ ಸಿಎಲ್ ಗೆ ಹಸ್ತಾಂತರಿಸುವಂತೆ ಬಿಡಿಎ ಗೆ ನಾವು ಮನವಿ ಮಾಡಿದ್ದೇವೆ,'' ಎಂದು ಮಾಹಿತಿ ನೀಡಿದರು.

ವೈಜ್ಞಾನಿಕ ಯೋಜನೆ ಜಾರಿಗೆ ಒತ್ತಾಯ
"ಬೆನ್ನಿಗಾನಹಳ್ಳಿ, ಜ್ಯೋತಿಪುರ, ಟಿನ್ ಫ್ಯಾಕರಿಯ ಎರಡು ಬದಿಗಳಲ್ಲಿ ಸೇರಿ ಒಟ್ಟು ಐದು ಸ್ಥಳಗಳಲ್ಲಿ ಬಸ್ ಬೇ ಗಳನ್ನು ನಿರ್ಮಿಸಲಾಗುವುದು,'' ಎಂದು ಬಿಎಂಆರ್ ಸಿಎಲ್ ಅಧಿಕಾರಿ ತಿಳಿಸಿದರು. "ಟಿನ್ ಫ್ಯಾಕ್ಟರಿ ಜಂಕ್ಷನ್ ನಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ದೂರದೃಷ್ಟಿ ಹಾಗೂ ಸರಿಯಾದ ವೈಜ್ಞಾನಿಕ ಯೋಜನೆಯೊಂದಿಗೆ ಮುಂದುವರಿಯಬೇಕು. ಮೆಟ್ರೊ ಕಾಮಗಾರಿ ಮುಗಿಯುವವರೆಗೂ ಬದಲಿ ರಸ್ತೆಗಳಲ್ಲಿ ಸಂಚಾರಕ್ಕೆ ಅವಕಾಶ ನೀಡಬೇಕು,'' ಎಂದು ಸ್ಥಳೀಯರು ಒತ್ತಾಯಿಸಿದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications