ರೂಪಾ ಮೌದ್ಗೀಲ್ ತಪ್ಪುಗಳನ್ನು ತೆರೆದಿಟ್ಟ ಸಂಗ್ರಾಮ್ ಸಿಂಗ್ ಸಂದರ್ಶನ
ಬೆಂಗಳೂರು, ಜುಲೈ 17: ಡಿಐಜಿ ರೂಪಾ ಅವರು ಮೇಲಧಿಕಾರಿ ವಿರುದ್ಧವೇ ದೂರು ನೀಡಿರುವುದು ಮಾದರಿ ಎನಿಸುವಂಥ ಕೆಲಸ. ಆದರೆ ಅದಕ್ಕಾಗಿ ಕಾನೂನು ಪ್ರಕಾರ ಇರುವ ನಿಯಮಗಳ ಪಾಲನೆಯಾಗಿಲ್ಲ ಎಂಬುದು ನಿವೃತ್ತ ಎಸಿಪಿ ಸಂಗ್ರಾಮ್ ಸಿಂಗ್ ಅವರ ಮಾತು.
ಅಂದಹಾಗೆ, ಡಿಐಜಿ ರೂಪಾ ಮೌದ್ಗೀಲ್ ಅವರ ವರ್ಗಾವಣೆ ಚರ್ಚೆಗೆ ಕಾರಣವಾಗಿದೆ. ಪರಪ್ಪನ ಅಗ್ರಹಾರದ ಜೈಲೊಳಗಿನ ಇಡೀ ಪ್ರಹಸನ ರಾಷ್ಟ್ರ ಮಟ್ಟದಲ್ಲೇ ಸುದ್ದಿಯಾಗಿದೆ. ಜೈಲಿನೊಳಗೆ ನಡೆದಿದೆ ಎಂದು ರೂಪಾ ಅವರು ಮಾಡಿದ ಹಲವು ಆರೋಪಗಳ ಬಗ್ಗೆ, ಆ ನಂತರ ಅವರ ನೀಡಿದ ಮಾಧ್ಯಮ ಹೇಳಿಕೆ, ವರ್ಗಾವಣೆ ಮತ್ತಿತರ ವಿಚಾರದ ಬಗ್ಗೆ ನಿವೃತ್ತ ಎಸಿಪಿ ಸಂಗ್ರಾಮ್ ಸಿಂಗ್ ಆವರನ್ನು ಒನ್ ಇಂಡಿಯಾ ಕನ್ನಡ ಸಂದರ್ಶನ ಮಾಡಿದೆ.
ಕೇಂದ್ರ ಸರಕಾರವು ಸರಕಾರಿ ನೌಕರರು ಮಾಧ್ಯಮದ ಮುಂದೆ ಮಾತನಾಡುವ ವಿಚಾರವಾಗಿ ಕೆಲವು ನಿಯಮಗಳನ್ನು ಮಾಡಿದೆ ಎಂದಿರುವ ಸಂಗ್ರಾಮ್ ಸಿಂಗ್, ಸದ್ಯದ ಸನ್ನಿವೇಶದಲ್ಲಿ ಆ ನಿಯಮದ ಉಲ್ಲಂಘನೆ ಆಗಿದೆಯಾ ಎಂಬ ಬಗ್ಗೆ ಕೂಡ ಉತ್ತರ ನೀಡಿದ್ದಾರೆ. ಒಟ್ಟಾರೆ ಈ ಘಟನೆ ಬಗ್ಗೆ ಅವರ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

ಪ್ರಶ್ನೆ: ರೂಪಾ ಅವರು ಪರಪ್ಪನ ಅಗ್ರಹಾರದ ಜೈಲೊಳಗಿನ ಅವ್ಯವಹಾರದ ಬಗ್ಗೆ ಸಲ್ಲಿಸಿದ ವರದಿ ಬಗ್ಗೆ ಏನಂತೀರಿ?
ಉತ್ತರ: ಇದು ನಿಜಕ್ಕೂ ಮೆಚ್ಚಿಕೊಳ್ಳಬೇಕಾದ ಕೆಲಸ. ಇಂಥ ಡೈನಾಮಿಕ್ ಅಧಿಕಾರಿಗಳು ಬೇಕು.

ಪ್ರಶ್ನೆ: ಆದರೆ, ಮಾಧ್ಯಮಗಳ ಎದುರು ಮಾತನಾಡಬಾರದಿತ್ತು ಎಂಬ ಆಕ್ಷೇಪ ಕೇಳಿ ಬರುತ್ತಿದೆಯಲ್ಲಾ?
ಉತ್ತರ: ಕೇಂದ್ರ ಸರಕಾರ ಈ ಬಗ್ಗೆ ಕೆಲವು ನಿಯಮ ಮಾಡಿದೆ. ಅಧಿಕಾರಿಗಳು ಮಾಧ್ಯಮಗಳ ಜತೆ ಮಾತನಾಡಲೇ ಬಾರದು ಅಂತ ಇಲ್ಲ. ಆದರೆ ಸರಕಾರದ ವಿರುದ್ಧವಾಗಿ, ಅವಮಾನ ಆಗುವಂಥ ಮಾತನಾಡಬಾರದು.

ಪ್ರಶ್ನೆ: ಹಾಗಿದ್ದರೆ ರೂಪಾ ಅವರು ಏನು ಮಾಡಬೇಕಿತ್ತು?
ಉತ್ತರ: ಜೈಲಿನಲ್ಲಿ ಕೈದಿಗಳು ಗಾಂಜಾ ಸೇವನೆ ಮಾಡಿದ್ದಾರೆ ಅಂದರೆ ಅಲ್ಲೇ ಮೂತ್ರ, ರಕ್ತ ಪರೀಕ್ಷೆ ಮಾಡಿಸಲು ಅಧಿಕಾರಿಗೆ ಹಕ್ಕಿಲ್ಲ. ಅದಕ್ಕೆ ಕೋರ್ಟ್ ಆದೇಶ ತರಬೇಕು. ಜೈಲಿನಲ್ಲೇ ಇದ್ದರೂ ಕೈದಿಗಳಿಗೆ ಸಾಂವಿಧಾನಿಕ ಹಕ್ಕು ಇರುತ್ತದೆ. ಈಗ ಆಗಿರುವುದು ಆರ್ಟಿಕಲ್ ಹತ್ತೊಂಬತ್ತು ಹಾಗೂ ಇಪ್ಪತ್ತರ ಉಲ್ಲಂಘನೆ.
ಹಾಗೊಂದು ವೇಳೆ ಪರೀಕ್ಷೆ ಮಾಡಿಸುವ ಹಾಗಿದ್ದರೆ ವಿಕ್ಟೋರೀಯಾ ಆಸ್ಪತ್ರೆ ಅಂಥ ಕಡೆ ಕರೆದೊಯ್ಯಬೇಕಿತ್ತು. ದೇಹದಲ್ಲಿ ರಾಸಾಯನಿಕ ಅಂಶ ಕೆಲವು ಮಾತ್ರೆಗಳಿಂದಲೂ ಕಂಡುಬರುತ್ತದೆ. ಈಗ ಅನುಸರಿಸಿರುವುದು ಸರಿಯಾದ ಮಾರ್ಗ ಅಲ್ಲ.

ಪ್ರಶ್ನೆ: ಇನ್ನೂ ಕೆಲವು ಆರೋಪಗಳನ್ನು ಮಾಡಿದ್ದಾರಲ್ಲಾ?
ಉತ್ತರ: ಯಾರೋ ಒಬ್ಬ ಕೈದಿ ನರ್ಸ್ ವೊಬ್ಬರ ಕೈ ಹಿಡಿದು ಎಳೆದಿದ್ದಾನೆ ಅಂದಿದ್ದಾರೆ. ಆತನ ವಿರುದ್ಧ ಪರಪ್ಪನ ಅಗ್ರಹಾರದೊಳಗೇ ಇರುವ ಜೈಲಿನಲ್ಲಿ ದೂರು ದಾಖಲಿಸಬೇಕಿತ್ತು. ಸೆಕ್ಷನ್ 364 ಅಡಿಯಲ್ಲಿ ದೂರು ದಾಖಲಾಗಬೇಕಿತ್ತು. ಏಕೆ ಆಗಿಲ್ಲ?
ಇನ್ನು ವೈದ್ಯರೊಬ್ಬರ ಮೇಲೆ ಕೈದಿ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ. ಸರಕಾರಿ ಉದ್ಯೋಗಿ ಮೇಲೆ ಹಲ್ಲೆ ನಡೆಸುವುದು ಸೆಕ್ಷನ್ 363ರ ಅಡಿಯಲ್ಲಿ ಅಪರಾಧ ಪ್ರಕರಣವಾಗಿ ದಾಖಲಾಗಬೇಕು. ಅದೇಕೆ ದಾಖಲಾಗಿಲ್ಲ?

ಪ್ರಶ್ನೆ: ಇನ್ನು ಲಂಚ ಪಡೆದ ಬಗ್ಗೆ ಆರೋಪ ಇದೆಯಲ್ಲಾ?
ಉತ್ತರ: ಜೈಲುಗಳು ಅಂದರೆ ಮತ್ತೊಂದು ಲೋಕ. ಅಲ್ಲಿ ತಪ್ಪಾಗುತ್ತಿದೆ ಅಂದರೆ ಅದನ್ನು ಸರಿ ಮಾಡುವುದಕ್ಕೇ ಅಧಿಕಾರಿಗಳು ಇರೋದು. ಕರೀಂ ಲಾಲ್ ತೆಲಗಿಗೆ ಫ್ಯಾನ್, ಟಿವಿ ಮತ್ತೊಂದು ಕೊಟ್ಟಿದ್ದಾರೆ ಅಂದರೆ ಅದನ್ನು ತೆಗೆದು ಆಚೆ ಹಾಕುವುದಕ್ಕೇ ಅಧಿಕಾರಿ ಇರೋದು ವಿನಾ ಫೋಟೋ ತೆಗೆದು ವರದಿ ಮಾಡುವುದಕ್ಕಾ?
ಶಶಿಕಲಾನ ಮತ್ತೊಬ್ಬರೋ ಯಾವ ಕೈದಿಗೆ ಎಷ್ಟು ಸೌಲಭ್ಯ ನೀಡಬಹುದು ಎಂಬುದು ಅಧಿಕಾರಿಗೆ ಗೊತ್ತಿರಬೇಕು, ಗೊತ್ತಿರುತ್ತದೆ. ಸರಕಾರ ಕೊಟ್ಟ ಅಧಿಕಾರ ಬಳಸಿ ವ್ಯವಸ್ಥೆಯನ್ನು ಇವರೇ ಸರಿ ಮಾಡಬೇಕು.

ಪ್ರಶ್ನೆ: ತನಿಖೆಗೆ ಶುರು ಆಗುವ ಮೊದಲೇ ಇಬ್ಬರು ಅಧಿಕಾರಿಗಳನ್ನು ಸರಕಾರ ವರ್ಗಾವಣೆ ಮಾಡಿದೆಯಲ್ಲಾ?
ಉತ್ತರ: ಈ ವಿಚಾರದಲ್ಲಿ ಸರಕಾರ ಒಂದಿಷ್ಟು ಆಲೋಚನೆ ಮಾಡಬೇಕಿತ್ತು. ರೂಪಾ ಹಾಗೂ ಹಿರಿಯ ಅಧಿಕಾರಿಯನ್ನು ಮುಂದೆ ನಿಲ್ಲಿಸಿಕೊಂಡೇ ತನಿಖೆ ನಡೆಸಬೇಕಿತ್ತು. ಇನ್ನು ರೂಪಾ ಅವರ ಮುಂದೆ ಮೂರು ಆಯ್ಕೆಗಳಿದ್ದವು.
ಒಂದು, ಸೆಕ್ಷನ್ 13 ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ದೂರು ದಾಖಲಿಸಬೇಕಿತ್ತು. ಎಸಿಬಿ ಅಥವಾ ಲೋಕಾಯುಕ್ತಕ್ಕೆ ದೂರು ನೀಡಬಹುದಿತ್ತು. ಯಾವುದೆಲ್ಲ ಸಾಧ್ಯತೆಗಳಿದ್ದವೋ ಅವ್ಯಾವುದನ್ನೂ ಇಲ್ಲಿ ಮಾಡಿಲ್ಲ.












Click it and Unblock the Notifications