ಸಂಶೋಧನಾ ಕಾರ್ಯ ಸುಲಭವಾದದ್ದಲ್ಲ : ಹಂ.ಪ. ನಾಗರಾಜಯ್ಯ
ಬೆಂಗಳೂರು, ಮಾರ್ಚ್ 28 : 'ಸಂಶೋಧನಾ ಕಾರ್ಯ ಸುಲಭವಾದದ್ದಲ್ಲ. ಬೆವರು ಹರಿಸಿ ಮಾಡಬೇಕಾದ ಕೆಲಸ. ಶ್ರಮವರಿಯದ ದುಡಿಮೆಯನ್ನು ಬಯಸುವ, ಶೀಘ್ರ ಪಲಾಪೇಕ್ಷೆಯನ್ನು ನಿರೀಕ್ಷಿಸಲಾಗದ ಸಂಶೋಧನ ಕ್ಷೇತ್ರದಲ್ಲಿ ಶೇಷಶಾಸ್ತ್ರಿಯವರು ಜಲ ರೇಖೆಯನ್ನೇ ನಿರ್ಮಿಸಿದ್ದಾರೆ' ಎಂದು ನಾಡೋಜ ಡಾ. ಹಂ.ಪ. ನಾಗರಾಜಯ್ಯ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ 'ಅಕ್ಕಮಹಾದೇವಿ ಸಭಾಂಗಣದಲ್ಲಿ' ನಡೆದ ಡಾ.ಆರ್.ಶೇಷಶಾಸ್ತ್ರಿಯವರ ಅಭಿನಂದನಾ ಸಮಾರಂಭದಲ್ಲಿ 'ವಿಶೇಷ ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
'ಸಂಶೋಧಕ ಶ್ರಮ, ಕಷ್ಟಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ದವಾಗಿರಬೇಕಾಗುತ್ತದೆ. ಶಾಸ್ತ್ರಿ ಅಪಾರ ಶ್ರಮಪಟ್ಟು ಶೋಧನೆ ನಡೆಸಿ ಕನ್ನಡಕ್ಕೆ ಗಟ್ಟಿ ಕಾಣಿಕೆ ನೀಡಿದ್ದಾರೆ' ಎಂದು ಬಣ್ಣಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅನಂತಪುರದ ಉಭಯ ಭಾಷಾ ಪಂಡಿತ ಡಾ. ಜೆ. ಸದಾನಂದ ಶಾಸ್ತ್ರಿ ಅವರು ಮಾತನಾಡಿ, 'ವಿದ್ವತ್ ವಲಯದಲ್ಲಿ ಅಸೂಯೆ ಹೆಚ್ಚಿ ಕಿರಿಯರನ್ನು ಪ್ರೋತ್ಸಾಹಿಸುವ ಪರಂಪರೆ ಮಾಯವಾಗುತ್ತಿರುವ ಈ ಕಾಲ ಮಾನದಲ್ಲಿ ಶೇಷಶಾಸ್ತ್ರಿಯವರು ಒಂದು ದೊಡ್ಡ ತರುಣರ ತಂಡವನ್ನೇ ಬೆಳಸಿ ಆ ಮೂಲಕ ವಿದ್ವತ್ ಪರಂಪರೆ ಮುಂದುವರೆಯುವಂತೆ ನೋಡಿಕೊಂಡಿದ್ದಾರೆ' ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಆರ್. ಶೇಷಶಾಸ್ತ್ರಿಯವರು, ತಮ್ಮ ಬೆಳವಣಿಗೆಯಲ್ಲಿ ನೆರವಾದ ಗುರುಗಳು, ಗೆಳೆಯರು, ಹಿರಿಯರ ಸಹಕಾರ, ನೆರವನ್ನು ನೆನೆದು, ಅಣುಕುವಾಡುವಿನಂದ ಆರಂಭವಾದ ಸಾಹಿತ್ಯ ಯಾತ್ರೆ ಸಂಶೋದನೆ ಅನುವಾದದವರೆಗೆ ಸಾಗಿದ ಹಾದಿಯನ್ನು ಮೆಲುಕು ಹಾಕಿದರು.
'ಸಂಶೋಧನೆಯಲ್ಲಿ ಇನ್ನೊಬ್ಬರನ್ನು ವಿಮರ್ಶಿಸದೆ ತಾನು ಕಂಡುಕೊಂಡ ವಿಚಾರವನ್ನು ಮಾತ್ರ ಸಾರ್ವಜನಿಕರ ಮುಂದಿಟ್ಟಿದ್ದೇನೆ. ಕ್ಷೇತ್ರಕಾರ್ಯ ಕಷ್ಟ ಸಹಿಷ್ಣತೆ, ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುವುದನ್ನು ಕಲಿಸುತ್ತದೆ. ಮತ್ತು ಬೇರೆಯವರ ಕಷ್ಟಗಳನ್ನು ಕೇಳುವ ಸಹನೆಯನ್ನು ಬೆಳಿಸುತ್ತದೆ' ಎಂದರು.
ಕಾರ್ಯಕ್ರಮದ ಅಧ್ಯಕ್ಷರಾದ ಮಹಾ ವಿದ್ವಾಂಸ ಡಾ.ಟಿ.ವಿ. ವೆಂಕಟಾಚಲಶಾಸ್ತ್ರೀ ಅವರು, 'ಶೇಷಶಾಸ್ತ್ರಿಯವರು ಬೆಳೆದ ಹಳ್ಳಿಯ ಪರಿಸರ, ಹಳ್ಳಿಯಿಂದ ಇವರಿಗೆ ಹೆಸರು ಇವರಿಂದ ಹಳ್ಳಿಗೆ ಹೆಸರು ಬಂದಿದೆ. ಶಾಸನ ಪರಿಚಯಕ್ಕೆ ಶಾಸ್ತ್ರಿಯವರು ಬರೆದಿರುವ ಪ್ರವೇಶ ಅವರ ವಿದ್ವತ್ತಿಗೆ ಸಾಕ್ಷಿಯಾಗಿದೆ' ಎಂದರು.
ಸನ್ಮಾನ ಸಮಿತಿಯ ಮುಖ್ಯಸ್ಥ ಡಾ ದೇವರಕೊಂಡಾ ರೆಡ್ಡಿ ಪ್ರಸ್ತಾವಿಕ ಮಾತುಗಳನ್ನು ಆಡಿದರು. ಸಂಭಾವನಾ ಗ್ರಂಥದ ಸಂಪಾದಕ ಡಾ .ಎಚ್.ಎಸ್. ಗೋಪಾಲರಾವ್ ಸಂಭಾವನ ಗ್ರಂಥದ ವಿವರ ಮತ್ತು ಸ್ವರೂಪವನ್ನು ತಿಳಿಸಿದರು.












Click it and Unblock the Notifications