Lalbagh Flower Show 2023: ಹೂವುಗಳಲ್ಲಿ 'ಬೆಂಗಳೂರಿನ ಇತಿಹಾಸ' ಅನಾವರಣ, ಈ ವರ್ಷದ ವಿಶೇಷತೆಗಳೇನು?
ಬೆಂಗಳೂರು ಜನವರಿ 17: ಗಣರಾಜ್ಯೋತ್ಸವ (ಜ.26) ಅಂಗವಾಗಿ ದಕ್ಷಿಣ ಭಾರತದ ಸಸ್ಯಕಾಶಿ ಲಾಲ್ ಬಾಗ್ ಉದ್ಯಾನದಲ್ಲಿ ಭರದ ಸಿದ್ಧತೆ ನಡೆದಿದೆ. ಈ ಭಾರಿ ಫಲಪುಷ್ಪ ಪ್ರದರ್ಶನ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ, ಐಟಿ ಕೇಂದ್ರ, ಉದ್ಯಾನ ನಗರಿಯಾದ ಕರ್ನಾಟಕ ರಾಜ್ಯ ರಾಜಧಾನಿ 'ಬೆಂಗಳೂರಿನ ಇತಿಹಾಸ' ಅನಾವರಣಗೊಳ್ಳಲಿದೆ.
ಹೌದು, ಇದೇ ಜನವರಿ 20ರಂದು ಆರಂಭವಾಗಿ ಸುಮಾರು 11 ದಿನಗಳ ಕಾಲ ನಡೆಯಲಿರುವ '213ನೇ ಫಲಪುಷ್ಪ ಪ್ರದರ್ಶನ' ದಲ್ಲಿ ಕೋಟ್ಯಂತರ ಜನರಿಗೆ ವೃತ್ತಿ ಬದುಕು ಕಟ್ಟಿಕೊಟ್ಟ 'ಬೆಂಗಳೂರಿನ ಇತಿಹಾಸ' ನಾಡಪ್ರಭು ಕೆಂಪೇಗೌಡರು, ಟಿಪ್ಪು ಸುಲ್ತಾನ್, ನಾಲ್ವಡಿ ಕೃಷ್ಣರಾಜ ಒಡೆಯರ್ ಬೆಂಗಳೂರಿಗೆ ನೀಡಿದ ಕೊಡುಗೆ ಪ್ರದರ್ಶಿಸಲಾಗುತ್ತದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಅವರು ತಿಳಿಸಿದರು.
ನಗರದಲ್ಲಿ ಸೋಮವಾರ ತೋಟಗಾರಿಕೆ ಇಲಾಖೆಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಸಂಪೂರ್ಣ ಮಾಹಿತಿ ನೀಡಿದರು. ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನಕ್ಕೆ ಉದ್ಯಾನದ ಗಾಜಿನ ಮನೆ ಸಿದ್ಧವಾಗುತ್ತಿದೆ. ಆಧುನಿಕ ಬೆಂಗಳೂರು ನಗರ ಇತಿಹಾಸದ ಭದ್ರ ಬುನಾದಿಯ ಮೇಲೆ ನಿಂತಿದೆ. ನಗರದ 1500 ವರ್ಷದ ಇತಿಹಾಸ, ಪ್ರಮುಖ ಘಟ್ಟಗಳು, ತಂತ್ರಜ್ಞಾನದ ಕಲಾಕೃತಿಗಳು ಪ್ರದರ್ಶನಗೊಳ್ಳಲಿದೆ. ಇದು ಸುಮಾರು 30 ಸಾವಿರಕ್ಕೂ ಅಧಿಕ ಹೂಗಳಿಂದ ಅನಾವರ ಮಾಡಲಾಗುವುದು ಎಂದು ಹೇಳಿದರು.
ಪ್ರದರ್ಶನದಲ್ಲಿ 11 ದೇಶಗಳ ತರಹೇವಾರಿ ಬಣ್ಣದ ಹೂಗಳು
ಪ್ರದರ್ಶನದಲ್ಲಿ ಕೊಲಂಬಿಯಾ, ಕೀನ್ಯಾ, ನೆದರ್ಲ್ಯಾಂಡ್ಸ್, ಇಸ್ರೇಲ್, ಆಸ್ಟ್ರೇಲಿಯಾ ಸೇರಿದಂತೆ ವಿವಿಧ 11 ದೇಶಗಳ ಬಗೆ ಬಗೆಯ ಬಣ್ಣದ ಮತ್ತು ತರಹೇವಾರಿ ಹೂವುಗಳು ಇರಲಿದ್ದು, ನೋಡುಗರನ್ನು ಆಕರ್ಷಿಸಲಿವೆ. ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಸಿಕ್ಕಿಂ ಸೇರಿದಂತೆ ಐದು ರಾಜ್ಯಗಳ ಹೂವುಗಳು ಕೂಡ ಪ್ರದರ್ಶನಕ್ಕೆ ಬಳಕೆ ಆಗಲಿವೆ.
ಗಿಡಗಳಿಂದ 'ಬೆಂಗಳೂರು ಗಡಿ ಗೋಪರ'
ಕಾರ್ನೇಷನ್ಗಳು, ಗರ್ಬೆರಾ, ಸಿಂಬಿಡಿಯಮ್ ಆರ್ಕಿಡ್ಗಳು, ಲಿಲ್ಲಿ ಮತ್ತದರ ಇತರ ತಳಿಗಳಂತಹ ಹೂವುಗಳನ್ನು ಉದ್ಯಾನದ ಗ್ಲಾಸ್ ಹೌಸ್ನಲ್ಲಿ ಕಂಗೊಳಿಸಲಿವೆ. ಬೋನ್ಸಾಯ್ ಮರಗಳು, ಅಪರೂಪದ ಹಣ್ಣುಗಳು ಮತ್ತು ತರಕಾರಿಗಳ ಜೋಡಣೆ ಇರಲಿದ್ದು, 80 ಸಾವಿರಕ್ಕೂ ಅಧಿಕ ಹೂವುಗಳಿಂದ ಪಿರಮಿಡ್ ತಯಾರಾಗಲಿದೆ. 35 ಸಾವಿರಕ್ಕೂ ಅಧಿಕ ಗಿಡಗಳಿಂದ ವರ್ಟಿಕಲ್ ಗಾರ್ಡನ್ ರೂಪದಲ್ಲಿ 'ಬೆಂಗಳೂರು ಗಡಿ ಗೋಪರ' ನಿರ್ಮಾಣಗೊಳ್ಳಲಿವೆ.
ಲಾಲ್ಬಾಗ್ ಉದ್ಯಾನದ 04 ಪ್ರವೇಶ ಕೇಂದ್ರಗಳಲ್ಲಿ ಬೆಂಗಳೂರಿನ ಇತಿಹಾಸ ಪ್ರದರ್ಶಿಸಲಾಗುವುದು. ಈ ಕುರಿತು ಸಂಪೂರ್ಣ ವಿವರ ಜನರು ಪಡೆಯಲು QR ಕೋಡ್ ವ್ಯವಸ್ಥೆ ಮಾಡಲಾಗಿದೆ. ಮಿಥಿಕ್ ಸೊಸೈಟಿಯ ಸಹಕಾರದಲ್ಲಿ ನಗರದ ಇತಿಹಾಸವನ್ನು 3ಡಿ ರೂಪದಲ್ಲಿ ಹೊರತರಲು ನಿರ್ಧರಿಸಲಾಗಿದೆ. ಅದಕ್ಕಾಗಿ ಎರಡು ಎಲ್ಇಡಿ ಪರದೆಗಳಲ್ಲಿ ಪ್ರೊಜೆಕ್ಟ್ ಅಳವಡಿಸಲಾಗುವುದು ಎಂದು ಸಚಿವ ಮುನಿರತ್ನ ತಿಳಿಸಿದರು.
ಜ.20ಕ್ಕೆ ಸಿಎಂ ಬೊಮ್ಮಾಯಿಯಿಂದ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ
ಜನವರಿ 26ರಂದು ಗಣರಾಜ್ಯೋತ್ಸವ ನಡೆಯಲಿದೆ. ಅದರ ಅಂಗವಾಗಿ ಸಿದ್ಧಗೊಳ್ಳುತ್ತಿರುವ '213ನೇ ಫಲಪುಷ್ಪ ಪ್ರದರ್ಶನ'ವು ಜನವರಿ 20 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟನೆಗೊಳ್ಳಲಿದೆ. ಅಲ್ಲಿಂದ ಜನವರಿ 30ವರೆಗೆ ಸಾರ್ವಜನಿಕರು ಕಣ್ತುಂಬಿಕೊಳ್ಳಲು ಅವಕಾಶ ನೀಡಲಾಗಿದೆ.
ಸುಮಾರು 700 ಕ್ಕೂ ಹೆಚ್ಚು ಜನರು ಫಲಪುಷ್ಪ ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಜನವರಿ 28 ರಂದು ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ. ಸುಮಾರು 15 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ಪ್ರದರ್ಶನ ಕಣ್ತುಂಬಿಕೊಳ್ಳುವ ನಿರೀಕ್ಷೆ ಇದೆ. ನಾಲ್ಕು ಗೇಟ್ಗಳಲ್ಲಿಲೂ ಟಿಕೆಟ್ ಕೌಂಟರ್ಗಳಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದೆ.
ಅಗತ್ಯ ಆರೋಗ್ಯ ವ್ಯವಸ್ಥೆ - ಮುನ್ನೆಚ್ಚರಿಕೆ
ಲಾಲ್ಬಾಗ್ನಲ್ಲಿ 35 ಕ್ಕೂ ಹೆಚ್ಚು ಕಡೆಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಅಳವಡಿಸಲಾಗುವುದು. ತುರ್ತು ಆರೋಗ್ಯ ಸೇವೆಗೆಂದು ಅರೆ ವೈದ್ಯಕೀಯ ಸಿಬ್ಬಂದಿ ಒಳಗೊಂಡ ಐದು ಆಂಬುಲೆನ್ಸ್ ಇರಲಿವೆ. ಗಾಜಿನ ಮನೆ ಬಳಿ 1 ಅಗ್ನಿಶಾಮಕ ವಾಹನ ನಿಯೋಜಿಸಲಾಗಿದೆ. ಉದ್ಯಾನದ ಒಳಗೆ 100 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಅಪಾಯಕಾರಿ ಮರಗಳ ಕೊಂಬೆ ತೆರವಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.
ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಲಾಗಿದೆ. ಆಗಮಿಸುವವರು ಯಾವುದೇ ಪ್ಲಾಸ್ಟಿಕ್ ವಸ್ತು ತರದಂತೆ ಎಚ್ಚರಿಕೆ ವಹಿಸಬೇಕಿದೆ. ಸುದ್ದಿಗೋಷ್ಠಿಯಲ್ಲಿ ತೋಟಗಾರಿಕಾ ಇಲಾಖೆಯ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ವಾಹನ ಪಾರ್ಕಿಂಗ್ ಚಿಂತೆ ಬೇಡ
ಫಲಪುಷ್ಪ ಪ್ರದರ್ಶನಕ್ಕೆ ಬರುವವರಿಗೆ ವಾಹನಗಳನ್ನು ಎಲ್ಲಿ ನಿಲ್ಲಬೇಕು ಎಂಬುದೇ ದೊಡ್ಡ ಚಿಂತೆಯಾಗಿರುತ್ತದೆ. ಅದಕ್ಕಾಗಿ ಇಲಾಖೆ ವತಿಯಿಂದ ಅಲ್ ಅಮೀನ್ ಕಾಲೇಜು ಮೈದಾನ, ಶಾಂತಿನಗರ ಬಸ್ ನಿಲ್ದಾಣದ ಬಹುಮಹಡಿ ವಾಹನ ನಿಲ್ದಾಣ, ಜೆ.ಸಿ.ರಸ್ತೆಯ ಮಯೂರ ರೆಸ್ಟೋರೆಂಟ್ ಸಮೀಪ ಬಿಬಿಎಂಪಿ ಕಟ್ಟಡದ ಬಳಿ ವಾಹನಗಳ ಪಾರ್ಕಿಂಗ್ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಂಗವಿಕಲರ ವಾಹನಗಳ ನಿಲುಗಡೆಗೆ ಎಂ.ಎಚ್.ಮರಿಗೌಡ ಸ್ಮಾರಕ ಭವನದಲ್ಲಿ ನಿಲ್ಲಸಬಹುದಾಗಿದೆ.
ಮೊದಲ ಈ ಫಲಪುಷ್ಪ ಪ್ರದರ್ಶನಗಳು ಮೈಸೂರು ತೋಟಗಾರಿಕೆ ಸೊಸೈಟಿ ಮತ್ತು ನರ್ಸರಿಮೆನ್ ಕೋಆಪರೇಟಿವ್ ಸೊಸೈಟಿ ಜಂಟಿಯಾಗಿ ನಡೆಯುತ್ತಿದ್ದವು. ಆದರೆ ಇತ್ತೀಚೆಗೆ ಅವನ್ನು ಬೇರ್ಪಡಿಲಾಗಿದೆ. ಇದನ್ನು ಸಮರ್ಥಿಸಿಕೊಮಡಿರುವ ಸಚಿವರು ಪಾಲುದಾರರಾಗಬಹುದು ಇಲ್ಲವೇ ಪಾಲುದಾರಿಕೆಯಿಂದ ಹಿಂದೆ ಸರಿಯಲೂ ಬಹುದು ಎಂದು ತಿಳಿಸಿದರು.