ಉಭಯ ಗಾನ ವಿಶಾರದೆ ಡಾ. ಶ್ಯಾಮಲಾ ಜಿ ಭಾವೆ ವಿಧಿವಶ
ಬೆಂಗಳೂರು, ಮೇ 22: ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಗಾಯಕಿ, ಸಂಗೀತಗಾರ್ತಿ ಡಾ. ಶ್ಯಾಮಲಾ ಜಿ ಭಾವೆ ನಿಧನರಾಗಿದ್ದಾರೆ. ಶುಕ್ರವಾರ ಬೆಳಗ್ಗೆ 6.30ಕ್ಕೆ ಶ್ಯಾಮಲಾ ಅವರು ಕೊನೆಯುಸಿರೆಳೆದಿದ್ದಾರೆ.
ಶೇಷಾದ್ರಿಪುರಂನ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದರು.
ಕರ್ನಾಟಿಕ್ ಹಾಗೂ ಹಿಂದೂಸ್ತಾನಿ ಎರಡು ಪ್ರಕಾರಗಳಲ್ಲೂ ಗಾಯನ ಮಾಡಿ ಸೈ ಎನಿಸಿಕೊಂಡು ಉಭಯ ಗಾನ ವಿಶಾರದೆ ಎಂಬ ಬಿರುದುಗಳಿಸಿದ್ದರು. ಇದಲ್ಲದೆ, ಸುಗುಮ ಸಂಗೀತ, ಭಜನೆ, ಸಂಗೀತ ಸಂಯೋಜನೆಯಲ್ಲೂ ಪರಿಣತಿ ಪಡೆದಿದ್ದರು.

ಬೆಂಗಳೂರಿನಲ್ಲಿ 1941 ರ ಮಾರ್ಚ್ 14ರಂದು ಜನಿಸಿದ ಶ್ಯಾಮಲಾ ಅವರಿಗೆ ತಂದೆ ಆಚಾರ್ಯ ಪಂಡಿತ್ ಗೋವಿಂದ್ ವಿಠಲ್ ಭಾವೆ, ವಿದುಷಿ ಲಕ್ಷ್ಮಿ ಜಿ ಭಾವೆ ಅವರೇ ಪ್ರಥಮ ಸಂಗೀತ ಗುರುಗಳು. ಹೀಗಾಗಿ 6ನೇ ವಯಸ್ಸಿನಲ್ಲೇ ಶ್ಯಾಮಲಾ ಅವರು ಗಾಯಕಿಯಾಗಿ ಗುರುತಿಸಿಕೊಂಡರು. 12ನೇ ವಯಸ್ಸಿಗೆ ಸಾರ್ವಜನಿಕ ಸಂಗೀತ ಕಛೇರಿ ನೀಡಿದರು. ಶ್ಯಾಮಲಾರ ಮುತ್ತಜ್ಜ ವಿಷ್ಣುದಾಸ ಭಾವೆ ಮರಾಠಿ ರಂಗಭೂಮಿಯ ಆದ್ಯ ಪ್ರವರ್ತಕರು.
ವಿಷ್ಣು ದಿಗಂಬರ್ ಪಾಲುಸ್ಕರ್ ಅವರು ಹಿಂದೂಸ್ತಾನಿ ಸಂಗೀತ ಗುರುಗಳಾಗಿದ್ದಾರೆ. ಬಿ. ದೊರೆಸ್ವಾಮಿ ಹಾಗೂ ಎ. ಸುಬ್ಬರಾಯ ಅವರಲ್ಲಿ ಕರ್ನಟಕ ಸಂಗೀತದ ತಾಲೀಮು ಪಡೆದು ಉಭಯಗಾನ ವಿದುಷಿ ಎಂಬ ಖ್ಯಾತಿಗಳಿಸಿದರು.
ಪಂಡಿತ್ ಗೋವಿಂದ್ ವಿಠಲ್ ಭಾವೆ ಅವರು 1930ರಲ್ಲಿ ಶೇಷಾದ್ರಿಪುರಂನಲ್ಲಿ ಸರಸ್ವತಿ ಸಂಗೀತ ವಿದ್ಯಾಲಯ ಸ್ಥಾಪಿಸಿದರು. 1953ರಲ್ಲಿ ತಂದೆ ಸ್ಥಾಪಿಸಿದ ಶಾಲೆಯನ್ನು ಶ್ಯಾಮಲಾ ನೋಡಿಕೊಳ್ಳತೊಡಗಿದರು. ಶ್ಯಾಮಲಾ ಅವರು ವಿವಿಧ ದೇಶಗಳಲ್ಲಿ ಸಂಗೀತ ಕಛೇರಿ ನೀಡಿ ಭಾರತೀಯ ಸಂಗೀತಕ್ಕೆ ರಾಷ್ಟ್ರೀಯ ಖ್ಯಾತಿ ತಂದುಕೊಟ್ಟಿದ್ದಾರೆ.
ಪಂಡಿತ್ ಜಸರಾಜ್ ಅವರ ಮಾರ್ಗದರ್ಶನದಲ್ಲಿ ಸಂಗೀತ ತಾಲೀಮು ಪಡೆದ ಅವರು ಅನೇಕ ಚಲನಚಿತ್ರ, ಸಾಕ್ಷಚಿತ್ರ, ಗ್ರಾಮಫೋನ್ ಹಾಗೂ ಕ್ಯಾಸೆಟ್ಗಳಲ್ಲಿ ಧ್ವನಿ ನೀಡಿ, ಸಂಗೀತ ನಿರ್ದೇಶನ ಮಾಡಿದ್ದಾರೆ. ಒಂಭತ್ತು ಭಾಷೆಗಳ ಸುಮಾರು 1500ಕ್ಕೂ ಹೆಚ್ಚಿನ ಗೀತೆಗಳಿಗೆ ರಾಗ ಸಂಯೋಜಿಸಿದ್ದಾರೆ.

ಶ್ಯಾಮಲಾ ಭಾವೆ ಅವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ, ಅಕಾಡೆಮಿಯ ಅಧ್ಯಕ್ಷರಾಗಿ ಸಂಗೀತ ಕ್ಷೇತ್ರದ ಸೇವೆ ಮಾಡಿದ್ದಾರೆ. ಉಭಯಗಾನ ವಿಶಾರದೆ, ಉಭಯ ಗಾನ ವಿದುಷಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗಾನ ಮಾಧುರಿ, ಸುರಮಣಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ, ಅಮೇರಿಕಾದ ಹ್ಯೂಸ್ಟನ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಭಾರತ ಗೌರವ್, ಗಾನ ಕೋಕಿಲ, ಕೃಷ್ಣಗಾನ ಮಾಧುರಿ ಮುಂತಾದ ಬಿರುದು ಬಹುಮಾನ, ಪ್ರಶಸ್ತಿ ಗೌರವ ಪುರಸ್ಕಾರಗಳು ಸಂದಿವೆ. ಮಾಹಿತಿ ಕೃಪೆ: ವಿಕಿಪೀಡಿಯಾ, ಕನ್ನಡ ಸಾಹಿತ್ಯ ಪರಿಷತ್ತು












Click it and Unblock the Notifications